ನವದೆಹಲಿ (ಕರಾವಳಿ ಟೈಮ್ಸ್) : ಮಹಾಮಾರಿ ಕೊರೋನಾ ವೈರಸ್ ಹಾವಳಿ ಮತ್ತು ಲಾಕ್ಡೌನ್ ಪರಿಣಾಮದಿಂದ ಎದುರಾಗಿರುವ ಆರ್ಥಿಕ ಸಂಕಷ್ಟ ನಿವಾರಣೆಗೆ ದೇಶದ ಬಡವರು, ನಿರ್ಗತಿಕರ ಸಹಾಯಕ್ಕಾಗಿ ದೊಡ್ಡ ಆರ್ಥಿಕ ಉತ್ತೇಜನ ಪ್ಯಾಕೇಜ್ ನೀಡುವ ಅಗತ್ಯ ಇದೆ ಎಂದು ನೊಬೆಲ್ ಪುರಸ್ಕೃತ ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಪ್ರತಿಪಾದಿಸಿದ್ದಾರೆ.
ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ವಿಡಿಯೋ ಸಂವಾದ ನಡೆಸಿದ ಅಭಿಜಿತ್ ಬ್ಯಾನರ್ಜಿ ಅವರು, ದೇಶದ ಕೆಳಹಂತದ ಶೇ. 60ರಷ್ಟು ಜನರಿಗೆ ಹಣಕಾಸಿನ ನೆರವು ಹಾಗೂ ಎಲ್ಲರಿಗೂ ರೇಷನ್ ಕಾರ್ಡ್ ನೀಡುವ ಅಗತ್ಯ ಇದೆ. ಈ ಮೂಲಕ ಹಸಿವನ್ನು ನೀಗಿಸುವ ಕಾರ್ಯಕ್ಕೆ ಸರಕಾರ ಮುಂದಾಗಬೇಕು ಎಂದು ಸಲಹೆ ನೀಡಿದ್ದಾರೆ.
ಆರ್ಥಿಕ ಪ್ಯಾಕೇಜ್ನ್ನು ಭಾರತ ಸಮರೋಪಾದಿಯಲ್ಲಿ ಜಾರಿಗೆ ತರುವ ತುರ್ತು ಅವಶ್ಯವಿದೆ ಎಂದಿರುವ ಅಭಿಜಿತ್ ಬ್ಯಾನರ್ಜಿ, ಜನರ ಕೈಗೆ ಸ್ವಲ್ಪ ಹಣ ನೀಡುವುದರಿಂದ ದೇಶದ ಆರ್ಥಿಕತೆ ಚೇತರಿಸಿಕೊಳ್ಳಲು ಸಹಾಯವಾಗುತ್ತದೆ. ಅಮೆರಿಕ ಈ ಕೆಲಸವನ್ನು ಸಮರೋಪಾದಿಯಲ್ಲಿ ಮಾಡುತ್ತಿದ್ದೆ ಎಂದಿದ್ದಾರೆ.
ಕೊರೋನಾ ವೈರಸ್ ಬಿಕ್ಕಟ್ಟಿನ ನಡುವೆ ರಾಹುಲ್ ಗಾಂಧಿ ಆರ್ಥಿಕ ಕುಸಿತದ ಬಗ್ಗೆ ತಜ್ಞರೊಂದಿಗೆ ಎರಡನೇ ಸುತ್ತಿನ ಮಾತುಕತೆ ನಡೆಸಿದ್ದಾರೆ. ಕಳೆದ ವಾರ ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರೊಂದಿಗೆ ವಿಡಿಯೋ ಸಂವಾದ ನಡೆಸಿದ್ದರು.
0 comments:
Post a Comment