ಬಂಟ್ವಾಳ, ನ. 18, 2020 (ಕರಾವಳಿ ಟೈಮ್ಸ್) : ಬಂಟ್ವಾಳ ಪುರಸಭಾಧ್ಯಕ್ಷ-ಉಪಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಗೈರು ಹಾಜರಿಯಾದ ಬಗ್ಗೆ ನೂತನ ಅಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕೆ ಜೊತೆ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ಸಾಮಾನ್ಯವಾಗಿ ಅಧ್ಯಕ್ಷ-ಉಪಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಪುರಸಭೆಯ ಜವಾಬ್ದಾರಿಯುತ ಸ್ಥಾನದಲ್ಲಿ ನಿಂತು ಮುಖ್ಯಾಧಿಕಾರಿಯೇ ನಿರ್ವಹಿಸುವುದಲ್ಲದೆ ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ಶುಭ ಹಾರೈಸುವುದು ವಾಡಿಕೆ. ಆದರೆ ಈ ಬಾರಿಯ ಕಾರ್ಯಕ್ರಮದಲ್ಲಿ ಮುಖ್ಯಾಧಿಕಾರಿ ಹಾಗೂ ಇಂಜಿನಿಯರ್ ಅವರಿಬ್ಬರೂ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನಡೆ ನೆಪ ಒಡ್ಡಿ ಗೈರು ಹಾಜರಿಯಾಗಿರುವುದು ಸರಿಯಲ್ಲ. ಈ ಬಗ್ಗೆ ನಾವು ಜಿಲ್ಲಾಧಿಕಾರಿಗೆ ದೂರು ನೀಡಿ ಸೂಕ್ತ ಕ್ರಮಕ್ಕೆ ಆಗ್ರಹಿಸುತ್ತೇವೆ. ಪುರಸಭೆಯ ಅಭಿವೃದ್ದಿ ದೃಷ್ಟಿಯಿಂದ ಸದಸ್ಯರುಗಳು ಹಾಗೂ ಅಧಿಕಾರಿ-ಸಿಬ್ಬಂದಿ ವರ್ಗ ಹೊಂದಾಣಿಕೆಯಿಂದ ಕೆಲಸ ಮಾಡುವುದು ಅತೀ ಅಗತ್ಯವಾಗಿದೆ. ಹೀಗಿರುತ್ತಾ ಮುಖ್ಯಾಧಿಕಾರಿ ನಡೆದುಕೊಂಡ ರೀತಿಯ ಬಗ್ಗೆ ತೀವ್ರ ಅಸಮಾಧಾನ ಇದೆ ಎಂದರು.
ದಿನದ 24 ಗಂಟೆಯೂ ಕಛೇರಿಯ ಛೇಂಬರಿನಲ್ಲಿಯೇ ಝಂಡಾ ಹೂಡಿರುತ್ತಿದ್ದ ಮುಖ್ಯಾಧಿಕಾರಿಗಳು ಜನರ ಅತೀ ಅವಶ್ಯಕ ವಿಷಯದಲ್ಲೂ ಇಚ್ಛಾ ಶಕ್ತಿಯಿಂದ ಸ್ಥಳ ಪರಿಶೀಲನೆಗೆ ತೆರಳಿರುವುದು ನಾವು ಕಂಡಿಲ್ಲ. ಆದರೂ ಪದಗ್ರಹಣ ಕಾರ್ಯಕ್ರಮದಂದು ಈ ರೀತಿ ನಡೆದುಕೊಂಡಿರುವುದರ ಹಿಂದೆ ಯಾವ ಉದ್ದೇಶ ಇದೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ಚರ್ಚಿಸಿ ಮುಂದಿನ ಕಾರ್ಯರೂಪದ ಬಗ್ಗೆ ನಿರ್ಧರಿಸಲಾಗುವುದು ಎಂದ ಶರೀಫ್ ಅತೀ ಅಗತ್ಯ ಇರುವ ಕಾರ್ಯವಾದರೂ ಪುರಸಭೆಯ ಇಂಜಿನಿಯರ್ ಅಥವಾ ಇತರ ಅಧಿಕಾರಿ ರ್ವವನ್ನು ಕಳುಹಿಸಿಕೊಟ್ಟು ಮುಖ್ಯಾಧಿಕಾರಿಗಳು ಪದಗ್ರಹಣ ಸಮಾರಂಭ ಚಂದಗಾಣಿಸಿಕೊಡಬೇಕಾಗಿತ್ತು ಎಂದು ಅಭಿಪ್ರಾಯಪಟ್ಟರು.
0 comments:
Post a Comment