ಪೌರತ್ವ ನೊಂದಣಿ ಹಾಗು ಎನ್ ಪಿ ಆರ್ ಬಗ್ಗೆ ಗೃಹಮಂತ್ರಿ ಅಮಿತ್ ಷಾ ರಾಜ್ಯ ಸಭೆಯಲ್ಲಿ ಗಳಹಿದ ಸುಳ್ಳುಗಳ ಕುರಿತು..... - Karavali Times ಪೌರತ್ವ ನೊಂದಣಿ ಹಾಗು ಎನ್ ಪಿ ಆರ್ ಬಗ್ಗೆ ಗೃಹಮಂತ್ರಿ ಅಮಿತ್ ಷಾ ರಾಜ್ಯ ಸಭೆಯಲ್ಲಿ ಗಳಹಿದ ಸುಳ್ಳುಗಳ ಕುರಿತು..... - Karavali Times

728x90

12 March 2020

ಪೌರತ್ವ ನೊಂದಣಿ ಹಾಗು ಎನ್ ಪಿ ಆರ್ ಬಗ್ಗೆ ಗೃಹಮಂತ್ರಿ ಅಮಿತ್ ಷಾ ರಾಜ್ಯ ಸಭೆಯಲ್ಲಿ ಗಳಹಿದ ಸುಳ್ಳುಗಳ ಕುರಿತು.....



ಶಿವಸುಂದರ್
9448659774


ಎನ್.ಪಿ.ಆರ್.-ಎನ್.ಆರ್.ಸಿ.-ಸಿ.ಎ.ಎ. ಗಳ ವಿರುದ್ಧ ದೇಶಾದ್ಯಂತ ಜನರು ರಾಜಿಯಿಲ್ಲದ ಹೋರಾಟ ನಡೆಸುತ್ತಿರುವುದರಿದ ಕಂಗೆಟ್ಟಿರುವ ಮೊ-ಷಾ ಸರ್ಕಾರ ಸುಳ್ಳುಗಳನ್ನು ಹೇಳುವ ಮೂಲಕ ಹೋರಾಟವನ್ನು ದಾರಿ ತಪ್ಪಿಸುವ ಹುನ್ನಾರ ನಡೆಸಿದೆ . ನಿನ್ನೆ ರಾಜ್ಯಸಭೆಯಲ್ಲಿ  ಗೃಹಮಂತ್ರಿ ಅಮಿತ್ ಶಾ ನೀಡಿರುವ ಹೇಳಿಕೆಗಳು ಅದಕ್ಕೆ ತಾಜಾ ಉದಾಹರಣೆ . ಆದ್ದರಿಂದ  ದೇಶದ ಜನತೆ ಗೃಹಮಂತ್ರಿಯವರ ಹೇಳಿಕೆಯಲ್ಲಿರುವ ಈ ಕೆಳಗಿನ ಸುಳ್ಳುಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ.

ಸುಳ್ಳು-1- ಎನ್.ಪಿ.ಆರ್. ಮಾಹಿತಿ ಸಂಗ್ರಹಣೆ ಹಂತದಲ್ಲಿ ಜನರು ಗೊತ್ತಿಲ್ಲದ ಪ್ರಶ್ನೆಗಳಿಗೆ ಉತ್ತರ ನೀಡಬೇಕಿಲ್ಲ.

ವಾಸ್ತವ : ಎನ್.ಪಿ.ಆರ್. ಮಾಡುತ್ತಿರುವುದೇ ದೇಶದ ಎಲ್ಲಾ ಜನರ ಪೌರತ್ವವನ್ನು ಪರೀಕ್ಷಿಸಲು. ಅದ್ಕಕೆಂದೇ ಪ್ರತಿಯೊಬ್ಬ ಪೌರನ ತಂದೆ ಮತ್ತು ತಾಯಿಯರ ಹುಟ್ಟಿದ ದಿನ ಹಾಗೂ ಸ್ಥಳದ ಮಾಹಿತಿಯನ್ನು ನಿರ್ದಿಷ್ಟವಾಗಿ ಕೇಳಲಾಗುತ್ತದೆ. ಅದಕ್ಕೆ ಕೊಟ್ಟ ಉತ್ತರವನ್ನು ಆಧರಿಸಿಯೇ ದೇಶದ ಜನರ ಪೌರತ್ವವು ಪರೀಕ್ಷೆಗೆ ಒಳಪಡುತ್ತದೆ.

NPR ಮತ್ತು NRC ಗಳ ಹುಟ್ಟಿಗೆ ಕಾರಣವಾದ Citizenship (Registration Of Citizens and Issue Of National Identity Cards) Rules 2003ದ

ಉಪನಿಯಮ  4 (1)ರ ಪ್ರಕಾರ - ಕೇಂದ್ರ ಸರ್ಕಾರವು ಒಂದು  ರಾಷ್ಟ್ರೀಯ ಪೌರತ್ವ ನೊಂದಣಿ ಪಟ್ಟಿಯನ್ನು ತಯಾರಿಸುವ ಸಲುವಾಗಿ ದೇಶದಲ್ಲಿ ವಾಸಿಸುತ್ತಿರುವ ಎಲ್ಲಾ ವ್ಯಕ್ತಿಗಳ ಮತ್ತು ಕುಟುಂಬಗಳ ಪೌರತ್ವ ವಿವರಗಳನ್ನೂ ಒಳಗೊಂಡಂತೆ ಅಗತ್ಯವಿರುವ ಎಲ್ಲಾ ವಿವರಗಳನ್ನು  ದೇಶಾದ್ಯಂತ ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸಬಹುದು .

ಉಪನಿಯಮ  4 (3) ರ ಪ್ರಕಾರ ಸ್ಥಳೀಯ ಮಟ್ಟದ ರಾಷ್ಟ್ರೀಯ  ನಾಗರಿಕರ ಪಟ್ಟಿಯನ್ನು ತಯಾರಿಸುವ ಸಲುವಾಗಿ NPR ನಲ್ಲಿ ಸಂಗ್ರಹಿಸಲಾದ ವ್ಯಕ್ತಿಗಳ ಮತ್ತು ಕುಟುಂಬಗಳ ವಿವರಗಳನ್ನು   ಸ್ಥಳೀಯ ನಾಗರಿಕ ನೊಂದಣಿ ರಿಜಿಸ್ಟ್ರಾರ್ (ಅಂದರೆ ಸ್ಥಳೀಯ ತಹಸೀಲ್ದಾರರು) VERIFY AND SCRUTINIZE ಅಂದರೆ ಪರೀಕ್ಷಿಸಿ ಪರಿಶೀಲಿಸುತ್ತಾರೆ .

ಉಪನಿಯಮ  4 (4) ರ ಪ್ರಕಾರ - ಈ ಪರಿಶೀಲನಾ ಹಂತದಲ್ಲಿ  ಯಾವುದಾದರೂ ವ್ಯಕ್ತಿಯ  ಪೌರತ್ವ ಸಂಬಂಧಿ ವಿವರಗಳು ಸಂಶಯಾಸ್ಪದವಾಗಿ  ಕಂಡುಬಂದಲ್ಲಿ ಮತ್ತಷ್ಟು ಪರಿಶೀಲನೆ ಮಾಡಲು  NPR ಪಟ್ಟಿಯಲ್ಲಿರುವ ಆ ವ್ಯಕ್ತಿಯ ಹೆಸರಿನ ಮುಂದೆ ಸ್ಥಳೀಯ ರಿಜಿಸ್ಟ್ರಾರ್ ಅವರು ಸೂಕ್ತ ಟಿಪ್ಪಣಿಗಳನ್ನು ದಾಖಲಿಸುತ್ತಾರೆ ಮತ್ತು ಪರಿಶೀಲನೆ ಪೂರ್ಣಗೊಂಡ ನಂತರ ಅನುಮಾನಾಸ್ಪದವಾದ ಪೌರತ್ವವೆಂದು ಕಂಡುಬಂದಲ್ಲಿ ಸೂಕ್ತವಾದ ನಮೂನೆಯಲ್ಲಿ  ಆ ವ್ಯಕ್ತಿಗಳಿಗೆ ಅಥವಾ ಕುಟುಂಬಗಳಿಗೆ ತಿಳಿಸುತ್ತಾರೆ .

ಉಪನಿಯಮ 7 ((2)  ರ ಪ್ರಕಾರ- ತನ್ನ ಕುಟುಂಬಕ್ಕೆ ಸಂಬಂಧಪಟ್ಟ  NPR ಪ್ರಶ್ನಾವಳಿಗಳಿಗೆ ಸರಿಯಾದ ಉತ್ತರ ಕೊಡುವುದು ಕುಟುಂಬದ ಮುಖ್ಯಸ್ಥನ ಜವಾಬ್ದಾರಿಯಾಗಿದೆ.

ಇದು ಹಾಲಿ ಇರುವ ನಿಯಮಾವಳಿಗಳು. ಇದಕ್ಕೆ ಈವರೆಗೆ ಸರ್ಕಾರ ಯಾವುದೇ ತಿದ್ದುಪಡಿ ಮಾಡಿಲ್ಲ. ಹಾಗೂ NPR ಪ್ರಕ್ರಿಯೆಯಲ್ಲಿ ಉತ್ತರ ಇಲ್ಲದಿರುವುದು ಮತ್ತು ಕೊಡದಿರುವುದು ನಮ್ಮ ಪೌರತ್ವವನ್ನೇ ಪ್ರಶ್ನೆಗೊಳಪಡಿಸುತ್ತದೆ.

 ಆದ್ದರಿಂದ “ಜನರು ಗೊತ್ತಿಲ್ಲದ ಪ್ರಶ್ನೆಗಳಿಗೆ ಉತ್ತರಿಸಬೇಕಿಲ್ಲ” ಎಂಬ ಗೃಹಮಂತ್ರಿಗಳ ಹೇಳಿಕೆ ಹೇಗಾದರೂ ಮಾಡಿ ಜನರನ್ನು NPR ಗೆ ಒಪ್ಪಿಸಿ “ಪೌರತ್ವ ಪರಿಶೀಲನೆಯ” ಉರುಳಿಗೆ ತಾವೇ ಸಿಕ್ಕಿಹಾಕಿಕೊಳ್ಳುವಂತೆ  ಮಾಡುವ ದುರುದ್ದೇಶವನ್ನು ಹೊಂದಿದೆ.

ಎಲ್ಲಿಯತನಕ  Citizenship (Registration Of Citizens and Issue Of National Identity Cards) Rules 2003 ಉಪನಿಯಮದ ಮೇಲಿನ ಉಪನಿಯಮಾವಳಿಗಳನ್ನು ರದ್ದುಮಾಡುವುದಿಲ್ಲವೋ / ತಿದ್ದುಪಡಿ ಮಾಡುವುದಿಲ್ಲವೋ ಅಲ್ಲಿಯವರೆಗೆ ಗೃಹಮಂತ್ರಿಯವರ ಹೇಳಿಕೆ ಕೇವಲ ದಾರಿ ತಪ್ಪಿಸುವ ಹೇಳಿಕೆಯಷ್ಟೇ ಆಗಿರುತ್ತದೆ.

ಹಾಗೊಂದು ವೇಳೆ ಈ ನಿಯಮಗಳನ್ನು ರದ್ದು ಮಾಡಿಬಿಟ್ಟರೆ ಅಥವಾ ತಿದ್ದುಪಡಿಯಾದರೆ ನಿರ್ದಿಷ್ಟ ಜನಸಮುದಾಯಗಳ ಪೌರತ್ವ ಪರಿಶೀಲನೆ ಮಾಡಬೇಕೆಂಬ ಬಿಜೆಪಿ ಸರ್ಕಾರದ  ಉದ್ದೇಶವೇ ಈಡೇರುವುದಿಲ್ಲ .

ಆದ್ದರಿಂದಲೇ ಯಾವ ತಿದ್ದುಪಡಿಯನ್ನು ಮಾಡದೆ ಕೇವಲ ಹೇಳಿಕೆಯನ್ನು ನೀಡುತ್ತಾ ಜನರನ್ನು NPR ಗೆ ಒಪ್ಪಿಸುವ ಹಾಗು  NPR-NRC-CAA ಗಳ ವಿರುದ್ಧದ  ಹೋರಾಟವನ್ನು ಹಾದಿತಪ್ಪಿಸುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ.

ಆದ್ದರಿಂದ ಎಲ್ಲಿಯ ತನಕ ಸರ್ಕಾರವು ದೇಶದ  ಜನರ  ಪೌರತ್ವವನ್ನೇ ಅನುಮಾನಿಸುವ ಹಾಗು ಇಡೀ ಜನಕೋಟಿಯನ್ನು ಪೌರತ್ವ ಸಾಬೀತು ಪಡಿಸುವ ಅಸಾಧ್ಯ ಪರೀಕ್ಷೆಗೆ ಒಡ್ಡುವ

1.  ಭಾರತದ ಪೌರತ್ವ ಕಾಯಿದೆ-1955ಕ್ಕೆ ವಾಜಪೇಯಿ ಸರ್ಕಾರ ತಂದ 14A ತಿದ್ದುಪಡಿಯನ್ನು ಹಾಗೂ

2.   Citizenship (Registration Of Citizens and Issue Of National Identity Cards) Rule 2003 ಗಳನ್ನು ರದ್ದುಗೊಳಿಸುವುದಿಲ್ಲವೋ ಅಲ್ಲಿಯತನಕ  ಜನರು ಹಾಗೂ ವಿರೋಧ ಪಕ್ಷಗಳು ಸರ್ಕಾರದ ಯಾವುದೇ ದುರುದ್ದೇಶದ ಮಾತುಗಳು ಮತ್ತು ಹೇಳಿಕೆಗಳಿಗೆ ಬಲಿಯಾಗಬಾರದು .

ಸುಳ್ಳು-2- NPR ಹಂತದಲ್ಲಿ ಯಾವುದೇ ದಾಖಲೆಗಳನ್ನು ಕೇಳುವುದಿಲ್ಲ.

ವಾಸ್ತವ- ಇದು ಅರ್ಧ ಸತ್ಯ. ಕೇಂದ್ರ ಸರ್ಕಾರ ಈ ವರ್ಷದ ಜನವರಿಯಲ್ಲಿ ಬಿಡುಗಡೆ ಮಾಡಿರುವ   NPR Training Manual ಪ್ರಕಾರ NPR ಮಾಹಿತಿ ಸಂಗ್ರಹ ಮಾಡಲು ಬರುವ ಅಧಿಕಾರಿಗಳಿಗೆ  ಆಧಾರ್, ಡ್ರೈವಿಂಗ್ ಲೈಸೆನ್ಸ್, ಮೊಬೈಲ್ ನಂಬರ್, ವೋಟರ್ ಕಾರ್ಡ್ ಮತ್ತು ಪಾಸ್ ಪೆÇೀರ್ಟ್ ದಾಖಲೆಗಳನ್ನು ತೋರಿಸಬೇಕು. - ಈ ನಿಯಮವನ್ನು ಸರ್ಕಾರ ಈ ಕ್ಷಣದವರೆಗೂ ಹಿಂತೆಗೆದುಕೊಂಡಿಲ್ಲ.

ಸುಳ್ಳು - 3- CAA ಪೌರತ್ವ ಕೊಡುವ ಕಾಯಿದೆಯೇ ಹೊರತು ಪೌರತ್ವವನ್ನು ಕಿತ್ತುಕೊಳ್ಳುವ ಕಾಯಿದೆಯಲ್ಲ

ವಾಸ್ತವ :  ಇದು ಸುಳ್ಳು ಮತ್ತು ಅರ್ಧಸತ್ಯದಿಂದ ಕೂಡಿರುವ ಹೇಳಿಕೆಯಾಗಿದೆ.

CAA ಕಾಯಿದೆ ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನಗಳಿಂದ ಧಾರ್ಮಿಕ ದೌರ್ಜನ್ಯಕ್ಕೆ ತುತ್ತಾಗಿ ಅಥವಾ ದೌರ್ಜನ್ಯಗಳ ಭಯದಿಂದ ಭಾರತಕ್ಕೆ ಅಕ್ರಮವಾಗಿ ವಲಸೆ ಬರುವ ಹಿಂದು, ಸಿಖ್ಖ, ಜೈನ, ಬೌದ್ಧ, ಕ್ರಿಶ್ಚಿಯನ್ ಮತ್ತು ಪಾರ್ಸಿಗಳಿಗೆ ಆಶ್ರಯ ಮತ್ತು ಪೌರತ್ವವನ್ನು ಕೊಡುವ ಕಾಯಿದೆಯಾಗಿದೆ. ಅಷ್ಟರಮಟ್ಟಿಗೆ ಅದು ಪೌರತ್ವವನ್ನು ಕೊಡುವ ಕಾಯಿದೆ.

ಆದರೆ ಅದೇ ದೇಶಗಳಲ್ಲಿ ಅಹ್ಮದೀಯರು, ಹಜಾರಗಳು ಹಾಗೂ  ಶಿಯಾಗಳು ಸಹ ಧಾರ್ಮಿಕ ದೌರ್ಜನ್ಯಕ್ಕೆ ತುತ್ತಾಗುತ್ತಿದ್ದಾರೆಂದು ಮೋದಿ ಸರ್ಕಾರವೇ 2018ರ ಸೆಪ್ಟೆಂಬರ್‍ನಲ್ಲಿ ವಿಶ್ವಸಂಸ್ಥೆಗೆ ದೂರಿತ್ತಿದೆ. ಆದರೆ CAA ಕಾಯಿದೆ ಅದೇ ದೇಶಗಳಿದ ಅದೇ ಬಗೆಯ ಧಾರ್ಮಿಕ ದೌರ್ಜನ್ಯಗಳಿಗೆ ತುತ್ತಾಗಿ ವಲಸೆ ಬರುವ ಈ ಸಮುದಾಯಗಳಿಗೆ ಬಾಗಿಲನ್ನು ಮುಚ್ಚುತ್ತದೆ. ಆ ಅರ್ಥದಲ್ಲಿ CAA ಕಾಯಿದೆ ಉಳಿದ ಧರ್ಮಿಯರಿಗೆ ಪೌರತ್ವವನ್ನು ನಿರಾಕರಿಸುವ ಕಾಯಿದೆಯೇ ಆಗಿದೆ.

ಅಲ್ಲದೆ  ಅಂಂ ಕಾಯಿದೆಯ ನಿಮಿತ್ತವಿಲ್ಲದೆ ಈವರೆಗೆ ಯಾವುದೇ ದೇಶದಿಂದ ಯಾವುದೇ ಬಗೆಯ ದೌರ್ಜನ್ಯಗಳಿಗೆ ತುತ್ತಾಗಿ ಆಶ್ರಯ ಕೋರಿ ಬರುತ್ತಿದ್ದವರಿಗೆ ಭಾರತ ಆಶ್ರಯ ಕೊಡುವಂತಹ ಮತ್ತು ಅವರು ಕೋರಿದಲ್ಲಿ 7-11 ವರ್ಶಗಳ ನಂತರ ಪೌರತ್ವ ಕೊಡುವಂತ ಅವಕಾಶ 1955ರಲ್ಲಿ ರಚಿಸಲಾದ ಕಾಯಿದೆಯಲ್ಲೇ ಅಂತರ್ಗತವಾಗಿದೆ. ಅಲ್ಲದೆ, CAA ಮೂಲಕ NPR ಪ್ರಕ್ರಿಯೆಯಲ್ಲಿ ದಾಖಲೆಗಳನ್ನು ತೋರಿಸಲಾಗದೆ ಅನುಮಾನಾಸ್ಪದರೆಂದು ಘೋಷಿತರಾಗುವ ಹಿಂದುಗಳಿಗೆ ಪೌರತ್ವ ಕೊಡಲಾಗುವುದೆಂಬ ಸರ್ಕಾರದ ಮತ್ತು ಬಿಜೆಪಿಯ ಗುಪ್ತ ಪ್ರಚಾರವು ಸಹ ಹಸಿಸುಳ್ಳಿನದಾಗಿದೆ.

ಏಕೆಂದರೆ  ಅಂಂ ಮೂಲಕ ಪೌರತ್ವ ಪಡೆಯಲು NPR ಯಿಂದ ಹೊರಬೀಳುವ ಭಾರತೀಯ ಹಿಂದುಗಳು ಮೊದಲು ತಾವು ಬಾಂಗ್ಲಾದೇಶೀಯರೊ ಅಥವಾ ಪಾಕಿಸ್ತಾನಿಯರೋ ಎಂದು ಸಾಬೀತು ಮಾಡಿಕೊಳ್ಳಬೇಕಾಗುತ್ತದೆ. ಏಕೆಂದರೆ CAA ಸೌಲಭ್ಯ ಸಿಗುವುದು ಬಾಂಗ್ಲಾದೇಶ ಅಥವಾ ಪಾಕಿಸ್ತಾನಗಳಿಂದ ವಲಸೆ ಬಂದ ಹಿಂದುಗಳಿಗೆ ಹೊರತು ದಾಖಲೆಗಳಿಲ್ಲವೆಂಬ ಕಾರಣಕ್ಕೆ ಪೌರತ್ವ ಕಳೆದುಕೊಳ್ಳುವ ಭಾರತೀಯ  ಹಿಂದುಗಳಿಗಲ್ಲ.












  • Blogger Comments
  • Facebook Comments

0 comments:

Post a Comment

Item Reviewed: ಪೌರತ್ವ ನೊಂದಣಿ ಹಾಗು ಎನ್ ಪಿ ಆರ್ ಬಗ್ಗೆ ಗೃಹಮಂತ್ರಿ ಅಮಿತ್ ಷಾ ರಾಜ್ಯ ಸಭೆಯಲ್ಲಿ ಗಳಹಿದ ಸುಳ್ಳುಗಳ ಕುರಿತು..... Rating: 5 Reviewed By: karavali Times
Scroll to Top