ಕೇರಳದಲ್ಲಿ ನಾಳೆಯಿಂದ ಬಸ್ ಸಂಚಾರ ಆರಂಭ, ಹೋಟೆಲ್, ರೆಸ್ಟೋರೆಂಟ್‍ಗಳೂ ಕಾರ್ಯಾರಂಭಕ್ಕೆ ಅನುಮತಿ - Karavali Times ಕೇರಳದಲ್ಲಿ ನಾಳೆಯಿಂದ ಬಸ್ ಸಂಚಾರ ಆರಂಭ, ಹೋಟೆಲ್, ರೆಸ್ಟೋರೆಂಟ್‍ಗಳೂ ಕಾರ್ಯಾರಂಭಕ್ಕೆ ಅನುಮತಿ - Karavali Times

728x90

18 April 2020

ಕೇರಳದಲ್ಲಿ ನಾಳೆಯಿಂದ ಬಸ್ ಸಂಚಾರ ಆರಂಭ, ಹೋಟೆಲ್, ರೆಸ್ಟೋರೆಂಟ್‍ಗಳೂ ಕಾರ್ಯಾರಂಭಕ್ಕೆ ಅನುಮತಿ



ಕೇರಳ ಸರಕಾರದ ಪ್ರಸ್ತಾಪಕ್ಕೆ ಕೇಂದ್ರ ಸಮ್ಮತಿ

ರೆಡ್ ಝೋನಗಳಲ್ಲಿ ಮೇ 3ರವರೆಗೂ ಲಾಕ್‍ಡೌನ್ ಯಥಾಸ್ಥಿತಿ 


ತಿರುವನಂತಪುರಂ (ಕರಾವಳಿ ಟೈಮ್ಸ್) : ಕೊರೋನಾ ವೈರಸ್ ಸೋಂಕು ಆರಂಭದಲ್ಲಿ ವ್ಯಾಪಕವಾಗಿದ್ದರೂ ಕಟ್ಟು ನಿಟ್ಟಿನ ಕ್ರಮಗಳ ಮೂಲಕ ಹತೋಟಿ ಸಾಧಿಸುವಲ್ಲಿ ಯಶಸ್ವಿಯಾಗಿರುವ ಕೇರಳ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ರಾಜ್ಯದಲ್ಲಿ ನಾಳೆಯಿಂದ ಬಸ್‍ಗಳ ಓಡಾಟಕ್ಕೆ ಅನುಮತಿ ನೀಡಿದೆ ಹಾಗೂ ಹೋಟೆಲ್, ರೆಸ್ಟೋರೆಂಟ್‍ಗಳ ಕಾರ್ಯಾರಂಭಕ್ಕೂ ಸಮ್ಮತಿಸಿದೆ. ಬಹುತೇಕ ನಾಳೆಯಿಂದ ಕೇರಳದ 14 ಜಿಲ್ಲೆಗಳಲ್ಲಿ ಜನ ಜೀವನ ಸಹಜ ಸ್ಥಿತಿಗೆ ಬರಲಿದೆ ಎನ್ನಲಾಗಿದೆ.

21 ದಿನಗಳ ಲಾಕ್‍ಡೌನ್ ಬಳಿಕ ನಿರ್ಬಂಧಗಳಿಗೆ ವಿನಾಯಿತಿ ನೀಡುವ ಬಗ್ಗೆ ಕೇಂದ್ರಕ್ಕೆ ಕೇರಳ ಸರಕಾರ ಪ್ರಸ್ತಾವನೆ ಸಲ್ಲಿಸಿತ್ತು. ಶುಕ್ರವಾರ ಪ್ರಧಾನಿ ಮೋದಿ ಕೇರಳ ಸರಕಾರದ ನಿರ್ಧಾರಕ್ಕೆ ಒಪ್ಪಿಗೆ ನೀಡಿದೆ. ಲಾಕ್‍ಡೌನ್‍ನಿಂದ ವಿನಾಯ್ತಿ ನೀಡುವ ಸಲುವಾಗಿ ಕೇರಳದಲ್ಲಿರುವ ಒಟ್ಟು 14 ಜಿಲ್ಲೆಗಳನ್ನು ಕೆಂಪು ವಲಯ, ಹಳದಿ ವಲಯ (ಎ), ಹಳದಿ ವಲಯ (ಬಿ) ಹಾಗೂ ಹಸಿರು ವಲಯಗಳಾಗಿ ವಿಂಗಡಿಸಲಾಗಿತ್ತು. ಶನಿವಾರ ಕೇರಳದಲ್ಲಿ ಕೇವಲ ಮೂರು ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿತ್ತು. ಕೊರೊನಾ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಇದೀಗ ಕೇರಳಕ್ಕೆ ನಿರ್ಬಂಧ ಸಡಿಲಿಕೆಗೆ ಅನುಮತಿ ನೀಡಿದೆ.

ಕೆಂಪು ವಲಯ


ಕಾಸರಗೋಡು, ಕಣ್ಣೂರು, ಕೋಯಿಕ್ಕೋಡ್, ಮಲ್ಲಪುರಂ ಮೇ 3ರವರೆಗೆ ಸಂಪೂರ್ಣ ಲಾಕ್‍ಡೌನ್ ಆಗಿರಲಿದೆ. ಕೊರೊನಾ ಹಾಟ್‍ಸ್ಪಾಟ್ ಜಾಗದಲ್ಲಿ ಅಗತ್ಯ ವಸ್ತು ಸಾಗಾಟಕ್ಕೆ ಎರಡು ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್ ಇರಲಿದೆ. ಇಲ್ಲಿ ಯಾವುದೇ ವಿನಾಯಿತಿ

ಹಳದಿ (ಎ) ವಲಯ


ಪತನಂತಿಟ್ಟ, ಎರ್ನಾಕುಲಂ, ಕೊಲ್ಲಂ ಜಿಲ್ಲೆಗಳಲ್ಲಿ ಎಪ್ರಿಲ್ 24ರ ಬಳಿಕ ಲಾಕ್‍ಡೌನ್ ಸಡಿಲಿಕೆ ಆಗಲಿದೆ.

ಹಳದಿ (ಬಿ) ವಲಯ


ಅಲಪ್ಪುಝ, ತ್ರಿಶ್ಶೂರ್, ಪಾಲಕ್ಕಾಡ್, ತಿರುವನಂತಪುರಂ, ವಯನಾಡಿನಲ್ಲಿ ಎಪ್ರಿಲ್ 20ರ ಬಳಿಕ ಕೆಲವೆಡೆ ವಿನಾಯಿತಿ ನೀಡಲಾಗುತ್ತಿದೆ.

ಹಸಿರು ವಲಯ


ಕೊರೊನಾ ಪ್ರಕರಣಗಳು ಬಾರದೇ ಇರುವ ಕೊಟ್ಟಾಯಂ, ಇಡುಕ್ಕಿಯಲ್ಲಿ ಎಪ್ರಿಲ್ 20ರಿಂದ ಸಂಪೂರ್ಣ ವಿನಾಯಿತಿ ಸಿಗಲಿದೆ.

ವಿನಾಯಿತಿ ಹೇಗಿರಲಿದೆ


ಕೆಂಪು ವಲಯ ಹೊರತುಪಡಿಸಿ ಉಳಿದ ಕಡೆಗಳಲ್ಲಿ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಸೋಮವಾರ, ಬುಧವಾರ, ಶುಕ್ರವಾರ ಬೆಸ ಸಂಖ್ಯೆಯೊಂದಿಗೆ ಕೊನೆಯಾಗುವ ವಾಹನಗಳು ಸಂಚರಿಸಬಹುದು. ಮಂಗಳವಾರ, ಗುರುವಾರ ಶನಿವಾರ ಸಮ ಸಂಖ್ಯೆಯೊಂದಿಗೆ ಅಂತ್ಯವಾಗುವ ವಾಹನಗಳ ಓಡಾಟಕ್ಕೆ ಅನುಮತಿ ದೊರೆತಿದೆ.

ಬೈಕ್ ಸವಾರರು ತಮ್ಮ ಸಂಬಂಧಿಕರೊಂದಿಗೆ ಡಬಲ್ ರೈಡಿಂಗ್‍ಗೆ ಅವಕಾಶವಿದ್ದು, ಜಿಲ್ಲೆಯ ಒಳಗಷ್ಟೇ 50 ರಿಂದ 60 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಬಸ್‍ಗಳು ಓಡಾಡಹುದು. ಮೂರು ಸೀಟ್‍ಗಳಿದ್ದರೆ ಮಧ್ಯದ ಒಂದು ಸೀಟು ಖಾಲಿ ಬಿಡಬೇಕು, ಎರಡು ಆಸನಗಳಿದ್ದರೆ ಒಂದು ಆಸನದಲ್ಲಿ ಮಾತ್ರ ಕೂರಬೇಕು. ಬಸ್‍ಗೆ ಹತ್ತುವ ಮೊದಲು ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯ, ಯಾರೂ ನಿಂತುಕೊಂಡು ಪ್ರಯಾಣಿಸುವಂತಿಲ್ಲ.

ಶನಿವಾರ ಮತ್ತು ಭಾನುವಾರ ಸೆಲೂನ್ ಅಂಗಡಿಗಳು ತೆರೆಯಬಹುದು. ಸಂಜೆ 7 ಗಂಟೆವರೆಗೆ ಹೋಟೆಲ್-ರೆಸ್ಟೋರೆಂಟ್ ತೆರೆಯಬಹುದು, 8 ಗಂಟೆವೆರೆಗೆ ಪಾರ್ಸೆಲ್‍ಗೆ ಅವಕಾಶ ಇದೆ. ಕಟ್ಟಡ ನಿರ್ಮಾಣ ಕಾಮಗಾರಿಗೆ ಒಪ್ಪಿಗೆ ಸಿಕ್ಕಿದ್ದು, ಹಸಿರು ವಲಯದಲ್ಲಿ ಬಟ್ಟೆ ಅಂಗಡಿ ತೆರೆಯಬಹುದು. ವಾರದಲ್ಲಿ ಎರಡು ದಿನ ಮೊಬೈಲ್, ಆಟೋ ವರ್ಕ್‍ಶಾಪ್, ಕಂಪ್ಯೂಟರ್ ಸೆಂಟರ್, ಬುಕ್‍ಸ್ಟೋರ್‍ಗಳನ್ನು ತೆರೆಯಲು ಅನುಮತಿ ಸಿಕ್ಕಿದೆ.

ಶನಿವಾರ ಮತ್ತು ಭಾನುವಾರ ಹೊರತು ಪಡಿಸಿದ ವಾರದ ಎಲ್ಲ ದಿನ ಸರಕಾರಿ ಕಚೇರಿಗಳು ತೆರೆದಿರುತ್ತದೆ. ಸಹಕಾರ ಸಂಸ್ಥೆಗಳಲ್ಲಿ ಶೇ.33 ರಷ್ಟು ಉದ್ಯೋಗಿಗಳು, ಗ್ರಾಮೀಣ ಪಂಚಾಯತ್‍ನಲ್ಲಿ ಶೇ. 35ರಷ್ಟು ಉದ್ಯೋಗಿಗಳು ಕರ್ತವ್ಯ ನಿರ್ವಹಿಸಲು ಅನುಮತಿ ಇದೆ.

ನಿರ್ಬಂಧ ಮುಂದುವರಿಕೆ


ಹಸಿರು ವಲಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವುದು, ಶಿಕ್ಷಣ, ಧಾರ್ಮಿಕ ಸ್ಥಳ ತೆರೆಯುವಂತಿಲ್ಲ. ಜಿಲ್ಲೆಯಿಂದ ಯಾರೂ ಹೊರಗಡೆ ತೆರಳುವಂತಿಲ್ಲ. ಕೇಂದ್ರ ಗೃಹ ಇಲಾಖೆಯ ಮಾರ್ಗಸೂಚಿಯಂತೆ ಮದುವೆ ಮತ್ತು ಅಂತ್ಯ ಸಂಸ್ಕಾರ ಕಾರ್ಯಕ್ರಮದಲ್ಲಿ 20ಕ್ಕಿಂತ ಹೆಚ್ಚು ಜನ ಪಾಲ್ಗೊಳ್ಳುವಂತಿಲ್ಲ.

ದೇಶದಲ್ಲಿ ಮೊದಲ ಕೊರೊನಾ ಪ್ರಕರಣ ವರದಿಯಾದ ಕೇರಳದಲ್ಲಿ 399 ಮಂದಿಗೆ ಸೋಂಕು ಬಂದಿದ್ದು, 257 ಮಂದಿ ಗುಣಮುಖರಾಗಿದ್ದಾರೆ. ಈಗ 140 ಸಕ್ರಿಯ ಪ್ರಕರಣವಿದ್ದು, ಇಬ್ಬರು ಮೃತಪಟ್ಟಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಕೇರಳದಲ್ಲಿ ನಾಳೆಯಿಂದ ಬಸ್ ಸಂಚಾರ ಆರಂಭ, ಹೋಟೆಲ್, ರೆಸ್ಟೋರೆಂಟ್‍ಗಳೂ ಕಾರ್ಯಾರಂಭಕ್ಕೆ ಅನುಮತಿ Rating: 5 Reviewed By: karavali Times
Scroll to Top