ನವದೆಹಲಿ: ಮೊದಲ ಹಂತದ ವಂದೇ ಭಾರತ್ ಮಿಷನ್ ಅಂತ್ಯವಾಗುತ್ತಿರುವ ಬೆನ್ನಲೆ ಎರಡನೇ ಹಂತದಲ್ಲಿ ಮತ್ತೊಂದು ಬೃಹತ್ ಕಾರ್ಯಚರಣೆಗೆ ಕೇಂದ್ರ ಸರ್ಕಾರ ಸಿದ್ದತೆ ಮಾಡಿಕೊಂಡಿದೆ. ಮೇ 16ರಿಂದ ಎರಡನೇ ಹಂತದ ಕಾರ್ಯಚರಣೆಗೆ ಮೋದಿ ಸರ್ಕಾರ ಹಸಿರು ನಿಶಾನೆ ತೋರಲಿದೆ.
ಮೇ 16ರಿಂದ 22ರವರೆಗೆ ಎರಡನೇ ಹಂತದಲ್ಲಿ ವಂದೇ ಭಾರತ್ ಮಿಷನ್ ಆರಂಭವಾಗಲಿದ್ದು, ಏಳು ದಿನಗಳಲ್ಲಿ 31 ದೇಶಗಳಿಂದ ಭಾರತದ ಹದಿನೈದು ನಗರಗಳಿಗೆ 149 ವಿಶೇಷ ವಿಮಾನಗಳಲ್ಲಿ ಮತ್ತಷ್ಟು ಅನಿವಾಸಿ ಭಾರತೀಯರು ತಾಯ್ನಾಡಿಗೆ ವಾಪಸ್ ಆಗಲಿದ್ದಾರೆ.
ಈ ಪೈಕಿ 14 ದೇಶಗಳಿಂದ ಕರ್ನಾಟಕಕ್ಕೆ 17 ವಿಮಾನಗಳು ಆಗಮಿಸಲಿವೆ. ಅಮೆರಿಕದಿಂದ 3, ಕೆನಡಾದಿಂದ 2 ಹಾಗೂ ಯುಎಇ, ಸೌದಿ ಅರೆಬಿಯಾ, ಮಲೇಷಿಯಾ, ಒಮನ್, ಫಿಲಿಪೈನ್ಸ್, ಫ್ರಾನ್ಸ್, ಜರ್ಮನಿ, ಕತಾರ್, ಇಂಡೋನೇಷ್ಯಾ, ಐರ್ಲೆಂಡ್, ಆಸ್ಟ್ರೇಲಿಯಾ, ಜಪಾನ್ ಗಳಿಂದ ತಲಾ ಒಂದೊಂದು ವಿಮಾನ ರಾಜ್ಯಕ್ಕೆ ಬರಲಿದೆ.
ಕೊರೊನಾ ಸಂಕಷ್ಟದಲ್ಲಿ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ನಿರ್ಧಿರಿತ್ತು. ಮೊದಲ ಹಂತದಲ್ಲಿ 12 ದೇಶಗಳಿಂದ 64 ವಿಶೇಷ ವಿಮಾನ, 11 ಹಡಗುಗಳ ಮೂಲಕ ಸುಮಾರು ಹದಿನೈದು ಸಾವಿರ ವಿದ್ಯಾರ್ಥಿಗಳು, ಅನಿವಾಸಿ ಭಾರತೀಯರು, ವಲಸೆ ಕಾರ್ಮಿಕರನ್ನು ಕರೆಲಾಗಿತ್ತು. ನಾಳೆಗೆ ಮೊದಲ ಹಂತದ ಕಾರ್ಯಚರಣೆ ಅಂತ್ಯವಾಗಲಿದೆ.
ಮೊದಲ ಹಂತದ ಕಾರ್ಯಚರಣೆ ಆರಂಭವಾಗುತ್ತಿದ್ದಂತೆ ಪ್ರಪಂಚದ ಇತರೆ ದೇಶಗಳಿಂದ ಭಾರತಕ್ಕೆ ವಾಪಸ್ ಕರೆಸಿಕೊಳ್ಳುವಂತೆ ಸುಮಾರು 60 ಸಾವಿರ ಮನವಿಗಳು ಕೇಂದ್ರ ಸರ್ಕಾರಕ್ಕೆ ಬಂದಿತ್ತು. ಈ ಪೈಕಿ ಕೇರಳಕ್ಕೆ ತಲುಪಿಸುವಂತೆ 25,246, ತಮಿಳುನಾಡಿಗೆ 6,617, ಮಹಾರಾಷ್ಟ್ರಕ್ಕಾಗಿ 4,341, ಉತ್ತರ ಪ್ರದೇಶ 3,715, ರಾಜಸ್ಥಾನ 3,320, ತೆಲಂಗಾಣ 2,796, ಕರ್ನಾಟಕ 2,786 , ಆಂಧ್ರಪ್ರದೇಶ 2,445, ಗುಜರಾತ್ 2,330, ದೆಹಲಿ ತಲುಪಿಸಲು 2,232 ಮಂದಿ ನೋಂದಣಿ ಮಾಡಿಕೊಂಡಿದ್ದರು. ಈ ಮನವಿಗಳ ಹಿನ್ನಲೆ ಎರಡನೇ ಹಂತದ ಕಾರ್ಯಚರಣೆಗೆ ಕೇಂದ್ರ ಮುಂದಾಗಿದೆ.
0 comments:
Post a Comment