ಬಂಟ್ವಾಳ (ಕರಾವಳಿ ಟೈಮ್ಸ್) : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಗೋಡೌನಿನಲ್ಲಿ ಮಕ್ಕಳಿಗೆ ಸರಕಾರದಿಂದ ಉಚಿತವಾಗಿ ವಿತರಿಸಲು ದಾಸ್ತಾನಿರಿಸಿದ್ದ ಸಕ್ಕರೆ ಪ್ಯಾಕೆಟಿನ ಮೇಲೆ ಬಿಜೆಪಿಯ ಚಿಹ್ನೆ ಹಾಗೂ ಬಿಜೆಪಿ ನಾಯಕರ ಹೆಸರಿರುವ ಲೇಬಲುಗಳನ್ನು ಅಂಟಿಸಿ ಸಾರ್ವಜನಿಕರಿಗೆ ಕಿಟ್ ತಯಾರಿಸಿ ಕೊಡುತ್ತಿದ್ದುದನ್ನು ಪತ್ತೆ ಹಚ್ಚಲಾಗಿದ್ದು, ಇದೊಂದು ಬಿಜೆಪಿ ಪಕ್ಷದ ನಾಯಕರ ಅತ್ಯಂತ ಹೇಯ ಕೃತ್ಯವಾಗಿದೆ. ದುಷ್ಕøತ್ಯದಲ್ಲಿ ಪಾಲ್ಗೊಂಡ ತಪ್ಪಿತಸ್ಥರನ್ನು ತಕ್ಷಣ ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಎಂದು ಜಿಲ್ಲಾ ವಕ್ಫ್ ಬೋರ್ಡ್ ನಿಕಟಪೂರ್ವ ಉಪಾಧ್ಯಕ್ಷ ಎಸ್. ಅಬೂಬಕ್ಕರ್ ಸಜಿಪ ಆಗ್ರಹಿಸಿದ್ದಾರೆ.
ದೇಶದಲ್ಲಿ ಲಾಕ್ಡೌನ್ ಜಾರಿಯಾದಂದಿನಿಂದ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರುಗಳು ದೇಶಾದ್ಯಂತ ಅನ್ನಾಹಾರವಿಲ್ಲದೇ ಪರದಾಡುತ್ತಿದ್ದ ಜನತೆಗೆ ತಮ್ಮ ಸ್ವಂತ ಹಣದಿಂದ ಆಹಾರ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸುವ ಮಹತ್ಕಾರ್ಯವನ್ನು ನಿರಂತರ ಮಾಡುತ್ತಾ ಬರುತ್ತಿದ್ದು, ಇದನ್ನು ನೋಡುತ್ತಿದ್ದ ಬಿಜೆಪಿ ಮುಖಂಡರು ಮುಜುಗರಕ್ಕೀಡಾಗಿ ಇಂತಹಾ ಕಳ್ಳತನಕ್ಕೆ ಇಳಿದು ಸಿಕ್ಕಿಹಾಕಿಕೊಂಡಿರುವುದು ವಿಪರ್ಯಾಸ ಎಂದವರು ವ್ಯಂಗ್ಯವಾಡಿದ್ದಾರೆ.
ಬಡ ಜನತೆಗೆ ಆಹಾರ ಸಾಮಗ್ರಿಗಳ ಕಿಟ್ ಕೊಡುವ ಉದಾರ ಮನಸ್ಸಿದ್ದಿದ್ದರೆ ಇಂತಹಾ ಕಳ್ಳತನಕ್ಕೆ ಕೈ ಹಾಕುವ ಬದಲು ಬಿಕ್ಷೆ ಎತ್ತುವ ಕೆಲಸ ಮಾಡಬಹುದಿತ್ತು ಎಂದಿರುವ ಅಬೂಬಕ್ಕರ್ ಇಂತಹ ಸಂಕಷ್ಟದ ಸಂದರ್ಭದಲ್ಲೂ ಹೀನ ಕೆಲಸಕ್ಕಿಳಿದಿರುವ ಬಿಜೆಪಿ ನಾಯಕರು ಹಾಗೂ ಅಧಿಕಾರಿಗಳನ್ನು ತಕ್ಷಣ ಬಂಧಿಸಿ ಕಾನೂನಿನ ಕುಣಿಕೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
0 comments:
Post a Comment