ಬಂಟ್ವಾಳ (ಕರಾವಳಿ ಟೈಮ್ಸ್) : ಕೋವಿಡ್ ಲಾಕ್ಡೌನ್ನಿಂದ ಕಂಗೆಟ್ಟಿದ್ದ ಟೈಲರ್ ವೃತ್ತಿ ಬಾಂಧವರಿಗೆ ರಾಜ್ಯ ಸರಕಾರ ಸಹಾಯಧನ ಘೋಷಣೆ ಮಾಡಿರುವುದಕ್ಕೆ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯಷನ್ (ಕೆಎಸ್ಟಿಎ) ಬಂಟ್ವಾಳ ಕ್ಷೇತ್ರ ಸಮಿತಿ ಕೃತಜ್ಞತೆ ಸಲ್ಲಿಸಿದೆ.
ಕರ್ನಾಟಕ ರಾಜ್ಯದಲ್ಲಿ ಒಟ್ಟು ಒಂದು ಲಕ್ಷಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಟೈಲರ್ಗಳು ಕೆಲಸ ನಿರ್ವಹಿಸುತ್ತಿದ್ದು ಕೋವಿಡ್ ಲಾಕ್ಡೌನ್ನಿಂದಾಗಿ ಎಲ್ಲರೂ ತೊಂದರೆ ಅನುಭವಿಸುವಂತಾಗಿತ್ತು. ಬಡವರೇ ಹೆಚ್ಚಿನ ಸಂಖ್ಯೆಯಲ್ಲಿ ಟೈಲರ್ ವೃತ್ತಿ ಮಾಡುತ್ತಿದ್ದು, ದಿನಗೂಲಿ ಆದಾಯವನ್ನು ನಂಬಿ ಬದುಕುತ್ತಿದ್ದ ಟೈಲರ್ಗಳು ಸಂಕಷ್ಟ ಪಡುವಂತಾಗಿತ್ತು. ಆರಂಭದಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗೆ ಸರಕಾರ ಸಹಾಯಧನ ಘೋಷಿಸಿದ ಸಂದರ್ಭ ಟೈಲರ್ಗಳಿಗೆ ಯಾವುದೇ ಸೌಲಭ್ಯ ಘೋಷಿಸದೇ ಇದ್ದರೂ ಕೂಡ ಈ ಬಗ್ಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಂಸದರಾದ ನಳಿನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ ಹಾಗೂ ಜಿಲ್ಲೆಯ ಎಲ್ಲಾ ಶಾಸಕರನ್ನು ಭೇಟಿಯಾಗಿ ಅವರ ಮುಖಾಂತರ ಟೈಲರ್ಗಳಿಗೆ ಸಹಾಯಧನವನ್ನು ನೀಡಬೇಕಾದ ಅನಿವಾರ್ಯತೆಯ ಬಗ್ಗೆ ಕೆಎಸ್ಟಿಎ ಪದಾಧಿಕಾರಿಗಳು ಮನವರಿಕೆ ಮಾಡಿದ ಕಾರಣ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಎರಡನೇ ಹಂತದಲ್ಲಿ ಸಹಾಯಧನ ನೀಡುವುದಾಗಿ ಘೋಷಿಸಿರುವುದು ಟೈಲರ್ಸ್ ವೃತ್ತಿನಿರತರಲ್ಲಿ ಸಂತೋಷ ಉಂಟುಮಾಡಿದ್ದಲ್ಲದೆ ಆತ್ಮವಿಶ್ವಾಸ ತುಂಬಿದಂತಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರೂಪ್ಪ ಹಾಗೂ ಅದಕ್ಕೆ ಶ್ರಮಿಸಿದ ಎಲ್ಲಾ ಜನಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸುವುದರ ಜೊತೆಗೆ ಆದಷ್ಟು ಬೇಗ ಈ ಸಹಾಯಧನವನ್ನು ಕಷ್ಟದಲ್ಲಿರುವ ಟೈಲರ್ ವೃತ್ತಿ ಬಾಂಧವರ ಕೈಸೇರಿಸಬೇಕೆಂದು ಸಮಿತಿ ವಿನಂತಿಸಿಕೊಂಡಿದೆ.
ಕಿಟ್ ವಿತರಿಸಿದ ಶಾಸಕರಿಗೂ ಕೃತಜ್ಞತೆ
ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಅವರು ಕೆಎಸ್ಟಿಎ ಬಂಟ್ವಾಳ ಕ್ಷೇತ್ರ ಸಮಿತಿ ಮೂಲಕ ಸದಸ್ಯರಿಗೆ ಆಹಾರದ ಕಿಟ್ ವಿತರಿಸಿದ್ದು ಶಾಸಕರ ಮಾನವೀಯ ಸ್ಪಂದನೆಗೆ ಸಮಿತಿ ಕೃತಜ್ಞತೆ ಸಲ್ಲಿಸಿದೆ. ಈ ಸಂದರ್ಭ ರಾಜ್ಯ ಸಮಿತಿ ಉಪಾಧ್ಯಕ್ಷ ಸುರೇಶ್ ಸಾಲ್ಯಾನ್, ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಈಶ್ವರ್ ಕುಲಾಲ್, ಪ್ರಧಾನ ಕಾರ್ಯದರ್ಶಿ ನಾಗೇಶ್ ಎಂ., ಕೋಶಾಧಿಕಾರಿ ಯಾದೇಶ್, ಬಿ.ಸಿ.ರೋಡುವ ವಲಯ ಸಮಿತಿ ಕಾರ್ಯದರ್ಶಿ ಇಂದಿರಾ ಉಪಸ್ಥಿತರಿದ್ದರು.
0 comments:
Post a Comment