ಮೆಡಿಕಲ್ ಮಾಸ್ಕ್ ಹಾಗೂ ಮನೆ ಬಟ್ಟೆಗೆ ಇರುವ ವ್ಯತ್ಯಾಸದ ಬಗ್ಗೆ ಅವೈಜ್ಞಾನಿಕ ಉತ್ತರ ನೀಡುತ್ತಿರುವ ಎ.ಆರ್.ಟಿ.ಒ. ಗಂಗಾಧರ
ಮಂಗಳೂರು (ಕರಾವಳಿ ಟೈಮ್ಸ್) : ದೇಶದ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರೇ ಸ್ವತಃ ದೇಶದ ಜನರಿಗೆ ಕೋವಿಡ್-19 ತಡೆಗಟ್ಟುವ ಸಲುವಾಗಿ ಮನೆಯಲ್ಲೇ ತಯಾರಿಸಿದ ಬಟ್ಟೆಯಿಂದ ಮುಖ ಮುಚ್ಚಿಕೊಳ್ಳುವುದು ಹೊರಗಿನ ಮಾಸ್ಕ್ಗಳಿಗಿಂತಲೂ ಉತ್ತಮ ಎಂಬ ಸಂದೇಶ ನೀಡಿದ್ದರೂ ಮಂಗಳೂರು ಆರ್ಟಿಒ ಕಛೇರಿಯ ಎಆರ್ಟಿಒ ಮಾತ್ರ ತಮ್ಮ ಕಛೇರಿಯಲ್ಲಿ ಸಾರ್ವಜನಿಕರಿಗೆ ಪ್ರಧಾನಿ, ಜಿಲ್ಲಾಧಿಕಾರಿ ಹಾಗೂ ಆರೋಗ್ಯಾಧಿಕಾರಿಗಳನ್ನೂ ಮೀರಿದ ಫರ್ಮಾನು ಹೊರಡಿಸಿದ ಬಗ್ಗೆ ಸ್ವತಃ ಜಿಲ್ಲೆಯ ಆರೋಗ್ಯ ಇಲಾಖಾ ಕಛೇರಿಯ ಅಧಿಕಾರಿಗಳೇ ಸ್ಪಷ್ಟನೆ ಕೇಳಿದ ಘಟನೆ ಶುಕ್ರವಾರ ನಡೆದಿದೆ.
ಮಂಗಳೂರು ಆರ್.ಟಿ.ಒ. ಕಛೇರಿಯಲ್ಲಿ ಮನೆಯಲ್ಲಿ ತಯಾರಿಸಿದ ಬಟ್ಟೆಯಿಂದ ಮುಖ ಕವಚ ಧರಿಸಿದರೆ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಲಾಗುತ್ತಿತ್ತು. ಮೆಡಿಕಲ್ ಶಾಪ್ಗಳಲ್ಲಿ ಸಿಗುವ ರೆಡಿಮೇಡ್ ಮುಖ ಕವಚಗಳನ್ನೇ ಧರಿಸಿ ಬರುವಂತೆ ಇಲ್ಲಿನ ಎ.ಆರ್.ಟಿ.ಒ. ಕೆ ಪಿ ಗಂಗಾಧರ ಅವರು ದಬಾಯಿಸುತ್ತಿದ್ದರು. ಈ ಬಗ್ಗೆ ಸಾರ್ವಜನಿಕರು ಸರಕಾರದ ಆದೇಶದ ಬಗ್ಗೆ ಪ್ರಶ್ನಿಸಿದರೆ ಉಡಾಫೆ ಹಾಗೂ ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದರು. ಈ ಕುರಿತು ಸಾರ್ವಜನಿಕರು ಆರೋಗ್ಯ ಇಲಾಖೆ ಕಛೇರಿ ಅಧಿಕಾರಿಗಳಿಗೆ ಶುಕ್ರವಾರ ದೂರು ನೀಡಿದ್ದರು. ಈ ಬಗ್ಗೆ ಆರೋಗ್ಯ ಇಲಾಖಾ ಕಛೇರಿಯ ಸುಪರಿಂಡೆಂಟ್ ಜ್ಯೋತಿ ಅವರು ತಕ್ಷಣ ಆರ್.ಟಿ.ಒ. ಕಛೇರಿಯ ಎ.ಆರ್.ಟಿ.ಒ. ಅವರಿಗೆ ಕರೆ ಮಾಡಿ ಈ ಬಗ್ಗೆ ಸ್ಪಷ್ಟನೆ ಕೇಳಿದರಲ್ಲದೆ ರೆಡಿಮೇಡ್ ಮಾಸ್ಕ್ಗಿಂತ ಮನೆಯಿಂದಲೇ ತಯಾರಿಸಿದ ಒಗೆಯಬಹುದಾದ ಬಟ್ಟೆಗೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಬಟ್ಟೆಯ ಮುಖ ಕವಚ ಧರಿಸಿ ಬರುವ ಸಾರ್ವಜನಿಕರಿಗೆ ಯಾವುದೇ ರೀತಿಯ ಕಿರುಕುಳ ನೀಡದಂತೆ ತಾಕೀತು ಮಾಡಿದರು.
ಕಛೇರಿ ಹೊರಭಾಗದಲ್ಲಿ ಉಷ್ಣಾಂಶ ಪರೀಕ್ಷಿಸುವ ವ್ಯವಸ್ಥೆ ಇಲ್ಲಿ ಸಮರ್ಪಕವಾಗಿಲ್ಲ. ಸ್ಯಾನಿಟೈಸರ್ ಕೂಡಾ ಖಾಲಿಯಾಗಿದ್ದು, ಕಛೇರಿ ಒಳಭಾಗದಲ್ಲಿ ಸಾಮಾಜಿಕ ಅಂತರವೂ ನಿರ್ವಹಣೆಯಾಗುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳ ಮಧ್ಯೆ ಎ.ಆರ್.ಟಿ.ಒ. ಗಂಗಾಧರ ಅವರು ಮಾತ್ರ ಮಾಸ್ಕ್ಗೆ ಸಂಬಂಧಪಟ್ಟಂತೆ ಸಾರ್ವಜನಿಕರೊಂದಿಗೆ ತಗಾದೆ ಎತ್ತಿ, ಮೆಡಿಕಲ್ ಮಾಸ್ಕ್ ಹಾಗೂ ಮನೆ ಬಟ್ಟೆಗೆ ಇರುವ ವ್ಯತ್ಯಾಸದ ಬಗ್ಗೆ ಅವೈಜ್ಞಾನಿಕ ಉತ್ತರ ನೀಡುವ ಮೂಲಕ ಸಾರ್ವಜನಿಕರನ್ನೇ ಯಾಮಾರಿಸುವ ಕಾಯಕ ಮಾಡುತ್ತಿದ್ದಾರೆ ಎಂದು ಅಧಿಕಾರಿಯಿಂದ ಕಿರಿಕ್ ಅನುಭವಿಸಿದ ಸಾರ್ವಜನಿಕರು ಅಲವತ್ತುಕೊಂಡಿದ್ದಾರೆ.
0 comments:
Post a Comment