ಮಂಗಳೂರು (ಕರಾವಳಿ ಟೈಮ್ಸ್) : ಮೂಡಬಿದ್ರೆಯ ಸ್ವರ್ಣೋದ್ಯಮಿ ಅಬ್ದುಲ್ ಲತೀಫ್ (38) ಅವರನ್ನು ಮಂಗಳೂರು ಹೊರ ವಲಯದ ಮುಲ್ಕಿ ಎಂಬಲ್ಲಿ ದುಷ್ಕರ್ಮಿಗಳ ತಂಡವೊಂದು ಶುಕ್ರವಾರ ಸಂಜೆ ಇರಿದು ಹತ್ಯೆ ನಡೆಸಿದೆ.
ಮೂಲತಃ ಸುಳ್ಯ ನಿವಾಸಿಯಾಗಿರುವ ಅಬ್ದುಲ್ ಲತೀಫ್ ಅವರು ಮುಲ್ಕಿ ಕಾರ್ನಾಡು ಎಂಬಲ್ಲಿನ ಪತ್ನಿ ಮನೆಯಿಂದ ತನ್ನ ಮಾವ ಮುನೀರ್ ಹಾಗೂ ಅವರ ಪುತ್ರ ಹಯಾತ್ ಎಂಬವರ ಜೊತೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಮುಲ್ಕಿ-ಕಾರ್ನಾಡು ವಿಜಯಾ ಬ್ಯಾಂಕ್ ಬಳಿ ಬರುತ್ತಿದ್ದಂತೆ ಬೈಕ್ ಹಾಗೂ ಕಾರಿನಲ್ಲಿ ಬಂದ ಸುಮಾರು ಏಳೆಂಟು ಮಂದಿ ದುಷ್ಕರ್ಮಿಗಳ ತಂಡ ಮಾರಕಾಯುಧಗಳಿಂದ ದಾಳಿ ನಡೆಸಿ ಮೂವರ ಮೇಲೂ ಇರಿತ ನಡೆಸಿದೆ. ಈ ಸಂದರ್ಭ ಗಂಭೀರ ಗಾಯಗೊಂಡ ಲತೀಫ್ ಅವರು ಮೃತಪಟ್ಟಿದ್ದು, ಉಳಿದಿಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೂಡಬಿದ್ರೆಯಲ್ಲಿ ಅಲ್-ಐನ್ ಗೋಲ್ಡ್ ಎಂಬ ಬಂಗಾರದ ಅಂಗಡಿ ಹೊಂದಿರುವ ಅಬ್ದುಲ್ ಲತೀಫ್ ಅವರು ಎಲ್ಲರೊಂದಿಗೂ ಅನ್ಯೋನ್ಯತೆಯಿಂದಿರುವ ಸೌಮ್ಯ ಸ್ವಭಾವದ ವ್ಯಕ್ತಿ ಎನ್ನಲಾಗಿದ್ದು, ಯಾವುದೋ ಪೂರ್ವ ದ್ವೇಷ ಹೊಂದಿದ ತಂಡ ಈ ದಾಳಿ ನಡೆಸಿದ್ದು, ಈ ಸಂದರ್ಭ ಅಡ್ಡ ಬಂದ ಲತೀಫ್ ಅವರಿಗೆ ಬಲವಾದ ಏಟು ಬಿದ್ದು ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ತಲವಾರು ದಾಳಿ ನಡೆಸಿದ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದು, ಘಟನಾ ಸ್ಥಳಕ್ಕೆ ಮುಲ್ಕಿ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಹಂತಕರ ಸುಳಿವು ಇನ್ನಷ್ಟೆ ತಿಳಿದು ಬರಬೇಕಿದೆ. ಕಾರು ಮತ್ತು ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಹಾಡಹಗಲೇ ಜನರೆದುರಿನಲ್ಲೇ ಬೀಭತ್ಸವಾಗಿ ದಾಳಿ ಮಾಡಿ ಈ ಹತ್ಯೆ ನಡೆಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
0 comments:
Post a Comment