ಹೆಣದ ಮೇಲೆ ಹಣ ಮಾಡಲು ಹೊರಟ ಬಿಜೆಪಿ ಸರಕಾರ : ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಆಕ್ರೋಶ - Karavali Times ಹೆಣದ ಮೇಲೆ ಹಣ ಮಾಡಲು ಹೊರಟ ಬಿಜೆಪಿ ಸರಕಾರ : ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಆಕ್ರೋಶ - Karavali Times

728x90

23 July 2020

ಹೆಣದ ಮೇಲೆ ಹಣ ಮಾಡಲು ಹೊರಟ ಬಿಜೆಪಿ ಸರಕಾರ : ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಆಕ್ರೋಶ



ಬೆಂಗಳೂರು (ಕರಾವಳಿ ಟೈಮ್ಸ್) : ಕೊರೋನಾ ಸೋಂಕು ಜೊತೆಗೆ ಭ್ರಷ್ಟಾಚಾರದ ಸೋಂಕು ಸಹ ವ್ಯಾಪಕವಾಗಿ ಹರಡಿದ್ದು, ಹೆಣದ ಮೇಲೆ ಹಣ ಮಾಡಲು ರಾಜ್ಯ ಬಿಜೆಪಿ ಸರ್ಕಾರ ಹೊರಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ನಿಯಂತ್ರಣಕ್ಕೆ ಸರ್ಕಾರ ನಮ್ಮ ಬಳಿ ಸಹಕಾರ ಕೇಳಿತ್ತು. ನಾವು ಎಲ್ಲ ರೀತಿಯ ಬೆಂಬಲ ಕೊಟ್ಟಿದ್ದೇವೆ. ಸರ್ಕಾರದ ಆಟಗಳನ್ನೆಲ್ಲ 120 ದಿನ ಸಹಿಸಿಕೊಂಡಿದ್ದೇವೆ. ಆದರೆ ಸರ್ಕಾರ ಹೆಣದ ಮೇಲೆ ಹಣ ಮಾಡಲು ಹೊರಟಿದೆ. ಬೆಂಗಳೂರು ಉಸ್ತುವಾರಿಗೆ ನಿಯೋಜನೆಗೊಂಡಿರುವ 9 ಮಂದಿ ಸಚಿವರು ಏನು ಮಾಡುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಒಬ್ಬ ಮಂತ್ರಿಯೂ ಆಸ್ಪತ್ರೆಗೆ ಹೋಗಿ ಸೋಂಕಿತರನ್ನು ವಿಚಾರಿಸಲಿಲ್ಲ. ಸೋಂಕಿಗೆ ತುತ್ತಾದವರಿಗೆ ಧೈರ್ಯ ತುಂಬಲಿಲ್ಲ. ಸೋಂಕಿನಿಂದ ಮೃತಪಟ್ಟವರನ್ನು ಕೀಳಾಗಿ ನೋಡಿಕೊಳ್ಳಲಾಯಿತು ಎಂದವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಈ ಸರ್ಕಾರಕ್ಕೆ ಯಾವುದೇ ಸ್ಪಷ್ಟವಾದ ಗುರಿ ಎಂಬುದೇ ಇಲ್ಲ. ಇದು ಕೇವಲ ಭ್ರಷ್ಟಚಾರದ ಸರ್ಕಾರ. ನಾವು ಸರ್ವ ಪಕ್ಷ ಸಭೆ ಕರೆಯುವಂತೆ ಒತ್ತಾಯಿಸಿದ ಮೇಲೆ ನೆಪ ಮಾತ್ರಕ್ಕೆ ಸಭೆ ಕರೆದರು. ಸರ್ಕಾರದ ಆಹಾರದ ಕಿಟ್ ಗಳ ಮೇಲೆ ಬಿಜೆಪಿ ನಾಯಕರು ತಮ್ಮ ಹೆಸರು, ಫೋಟೋ ಅಂಟಿಸಿ ಕಿಟ್ ಹಂಚಿದ್ದಾರೆ. ಕಾರ್ಮಿಕರಿಗೆ 1200 ರೂಪಾಯಿ ಕೊಟ್ಟು ಊಟ ಒದಗಿಸಿರುವುದಾಗಿ ಲೆಕ್ಕ ನೀಡಿದ್ದಾರೆ. ಯಾವ ಫೈವ್ ಸ್ಟಾರ್ ಹೋಟೆಲ್ ನಿಂದ ಊಟ ಕಳಿಸಿದ್ದೀರಿ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಡಿಕೆಶಿ ಕುಟುಕಿದರು.

ಕಾರ್ಮಿಕರನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. 110 ದಿನ ಆದ ಮೇಲೆ ಖಾಸಗಿ ಆಸ್ಪತ್ರೆಯವರನ್ನು ಕರೆದು ಮಾತನಾಡುತ್ತಿದ್ದಾರೆ. ಶಿಕ್ಷಣ ವ್ಯವಸ್ಥೆ ಯ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ವೃತ್ತಿ ಪರರಿಗೆ 5000 ರೂಪಾಯಿ ಕೊಡುವುದಾಗಿ ಹೇಳಿದ್ದರು. ಆದರೆ ಪರಿಹಾರ ಶೇ. 10 ರಷ್ಟು ಜನರಿಗೆ ತಲುಪಿಲ್ಲ. ಆಶಾ ಕಾರ್ಯಕರ್ತೆಯರಿಗೆ ಸಂಬಳ ಕೊಡಲು ಆಗುತ್ತಿಲ್ಲ. ಅಲ್ಲದೇ ಪ್ರತಿಭಟನಾ ನಿರತರನ್ನು ಕರೆದು ಮಾತನಾಡುವ ಸೌಜನ್ಯವೂ ಈ ಸರ್ಕಾರಕ್ಕೆ ಇಲ್ಲ. ಪೌರ ಕಾರ್ಮಿಕರಿಗೆ ಜೀವನದ ರಕ್ಷಣೆಯಿಲ್ಲ. ಅಧಿಕಾರಿಗಳ ಕಡೆಯಿಂದ ಮಾಹಿತಿ ಕೊಡುವುದಾದರೆ ಇವರುಗಳೆಲ್ಲ ಏಕೆ ಮಂತ್ರಿ ಆಗಬೇಕಿತ್ತು ಎಂದವರು ಆಕ್ರೋಶಿತರಾಗಿ ಪ್ರಶ್ನಿಸಿದರು.

ಕೋವಿಡ್ ಸಂಕಷ್ಟದಿಂದಾಗಿ ಹೋಟೆಲ್ ಉದ್ಯಮಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಗರ ಸ್ಥಳೀಯ ಸಂಸ್ಥೆಗಳ ಆಸ್ತಿ ತೆರಿಗೆ ಒಂದು ವರ್ಷ ಮನ್ನಾ ಮಾಡಬೇಕು.
ಸರ್ಕಾರ ಯಾವುದೇ ಅವ್ಯಹಾರ ಮಾಡಿಲ್ಲ ಎಂದ ಮೇಲೆ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಸಭೆ ಮಾಡಲು, ತಪಾಸಣೆ ಮಾಡಲು ಅವಕಾಶ ಕೊಡಬೇಕು. ಅದಕ್ಕೂ ಅನುಮತಿ ನೀಡಲು ಏನು ಸಮಸ್ಯೆ ಎಂದು ಡಿ.ಕೆ. ಶಿವಕುಮಾರ್ ಆಕ್ರೋಶ ಪ್ರಶ್ನಿಸಿದರು.

21 ದಿನದಲ್ಲಿ ಕೊರೊನಾ ಯುದ್ಧ ಗೆಲ್ಲುತ್ತೇವೆ ಎಂದು ಹೇಳಿದ್ದರು. ಇದೀಗ 121 ದಿನಗಳು ಮುಗಿದು ಹೋಗಿವೆ. ಈಗ ಏನು ಪ್ರಗತಿಯಾಗಿದೆ ಎಂಬುದನ್ನು ಸರ್ಕಾರ ಹೇಳಬೇಕು. ಇಡಿ ದೇಶದಲ್ಲಿ ಕರ್ನಾಟಕ ಕಪ್ಪು ಚುಕ್ಕೆಯಾಗಿದೆ. ಇವರನ್ನು ಆಧುನಿಕ ಭಾರತದ ಕೌರವರ ಲೂಟಿ ಅಂತ ಕರೆಯಬೇಕೆ ಎಂದವರು ವ್ಯಂಗ್ಯವಾಗಿ ಲೇವಡಿ ಮಾಡಿದರು.








  • Blogger Comments
  • Facebook Comments

0 comments:

Post a Comment

Item Reviewed: ಹೆಣದ ಮೇಲೆ ಹಣ ಮಾಡಲು ಹೊರಟ ಬಿಜೆಪಿ ಸರಕಾರ : ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಆಕ್ರೋಶ Rating: 5 Reviewed By: karavali Times
Scroll to Top