ಅಪಘಾತ ಎಂದು ಬಿಂಬಿಸಿ ಮುಚ್ಚಿ ಹೋಗಬಹುದಾಗಿದ್ದ ಕೊಲೆ ಯತ್ನ ಪ್ರಕರಣ ಬೇಧಿಸಿದ ಬಂಟ್ವಾಳ ಪೊಲೀಸ್ : 3 ಮಂದಿ ಅರೆಸ್ಟ್ - Karavali Times ಅಪಘಾತ ಎಂದು ಬಿಂಬಿಸಿ ಮುಚ್ಚಿ ಹೋಗಬಹುದಾಗಿದ್ದ ಕೊಲೆ ಯತ್ನ ಪ್ರಕರಣ ಬೇಧಿಸಿದ ಬಂಟ್ವಾಳ ಪೊಲೀಸ್ : 3 ಮಂದಿ ಅರೆಸ್ಟ್ - Karavali Times

728x90

4 September 2020

ಅಪಘಾತ ಎಂದು ಬಿಂಬಿಸಿ ಮುಚ್ಚಿ ಹೋಗಬಹುದಾಗಿದ್ದ ಕೊಲೆ ಯತ್ನ ಪ್ರಕರಣ ಬೇಧಿಸಿದ ಬಂಟ್ವಾಳ ಪೊಲೀಸ್ : 3 ಮಂದಿ ಅರೆಸ್ಟ್



ಬಂಟ್ವಾಳ (ಕರಾವಳಿ ಟೈಮ್ಸ್) : ಅಪಘಾತ ಎಂದು ಬಿಂಬಿಸಿ ಕೊಲೆ ನಡೆಸಲು ಯತ್ನಿಸಿದ್ದ ಪ್ರಕರಣವನ್ನು ಬಂಟ್ವಾಳ ನಗರ ಪೊಲೀಸರು ಬೇಧಿಸಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾಲೂಕಿನ ಸಜಿಪಮುನ್ನೂರು ಗ್ರಾಮದ ಆಲಾಡಿ ನಿವಾಸಿ, ಶರತ್ ಮಡಿವಾಳ ಅವರ ಕೊಲೆ ಆರೋಪಿ ಶರೀಫ್ ಎಂಬಾತನನ್ನು ಬೈಕ್ ಅಪಘಾತ ನಡೆಸಿದ ಮಾದರಿಯಲ್ಲಿ ಕೊಲೆ ಯತ್ನ ನಡೆಸಿದ ತಂಡ ಬಳಿಕ ಪರಾರಿಯಾಗಿತ್ತು. ಪ್ರಕರಣ ಬಳಿಕ ವಿಭಿನ್ನ ತಿರುವು ಪಡೆದುಕೊಂಡು ಚರ್ಚಾ ವಸ್ತುವಾಗಿತ್ತು. ಈ ಬಗ್ಗೆ ಪ್ರಕರಣದ ಹಿಂದೆ ಬಿದ್ದ ಬಂಟ್ವಾಳ ಪೊಲೀಸರು ಕೊನೆಗೂ ಸತ್ಯವನ್ನು ಬೇಧಿಸಿದ್ದು, ಆರೋಪಿಗಳಾದ ಯತಿನ್ ಕಲ್ಲಡ್ಕ, ರಾಜು ಕುಂಪನಮಜಲು ಹಾಗೂ ಮನೀಶ್ ಕೋಡಿಕೆರೆ ಎಂಬವರನ್ನು ಬಂಧಿಸಿ ನ್ಯಾಯಾಯಕ್ಕೆ ಹಾಜರುಪಡಿಸಿದ್ದಾರೆ. ಈ ಮೂಲಕ ಇದೊಂದು ಅಪಘಾತವಾಗಿರದೆ ಕೊಲೆಯತ್ನ ಎಂಬುದು ಸಾಬೀತಾಗಿದೆ. 

ಆಗಸ್ಟ್ 7 ರಂದು ಶುಕ್ರವಾರ ಮಧ್ಯಾಹ್ನ 12.30 ರ ವೇಳೆಗೆ ಶರತ್ ಮಡಿವಾಳ ಕೊಲೆ ಆರೋಪಿ ಆಲಾಡಿ ನಿವಾಸಿ ಶರೀಫ್ ತನ್ನ ದ್ವಿಚಕ್ರ ವಾಹನದಲ್ಲಿ ಮಸೀದಿಗೆ ತೆರಳುತ್ತಿದ್ದ ವೇಳೆ ಮತ್ತೊಂದು ಬೈಕಿನಲ್ಲಿ ಬಂದ ಆರೋಪಿಗಳು ಶರೀಫ್ ಬೈಕಿಗೆ ಗುದ್ದಿ ಅಪಘಾತ ನಡೆಸಿದಂತೆ ನಟಿಸಿ ಬಳಿಕ ತಲವಾರು ಬೀಸಿ ಕೊಲೆಗೆ ಯತ್ನಿಸಿದ್ದರು. ಈ ಸಂದರ್ಭ ಶರೀಫ್ ಹಾಗೂ ಆರೋಪಿಗಳ ಮಧ್ಯೆ ಹೊಡೆದಾಟ, ತಳ್ಳಾಟ ನಡೆದು ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಈ ಸಂದರ್ಭ ಸ್ಥಳೀಯವಾಗಿ ಓಡಾಡುತ್ತಿದ್ದ ಪರಿಸರದ ನಿವಾಸಿ ನವೀನ್ ಎಂಬಾತ ಆರೋಪಿಗಳಿಗೆ ಶರೀಫ್ ಚಲನವಲನಗಳ ಬಗ್ಗೆ ಮಾಹಿತಿ ನೀಡಿದ್ದಾನೆ ಎಂದು ಆರೋಪಿಸಿ ಶರೀಫ್ ಕಡೆಯವರು ನವೀನ್‍ಗೆ ಹಲ್ಲೆ ನಡೆಸಿದ್ದರು. ಈ ಎರಡೂ ಘಟನೆಗಳ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು. 

ಅಪಘಾತ ಘಟನೆಯನ್ನು ಕೊಲೆಯತ್ನ ಎಂಬ ರೀತಿಯಲ್ಲಿ ಪ್ರಚಾರ ಪಡಿಸಲಾಗುತ್ತಿದೆ ಎಂಬ ಸಂದೇಶಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬಂಟ್ವಾಳ ಪೊಲೀಸರು ಕೊನೆಗೂ ಆರೋಪಿಗಳ ಜಾಡು ಬೇಧಿಸುವಲ್ಲಿ ಸಫಲರಾಗಿದ್ದು, ಇದೊಂದು ಕೊಲೆಯತ್ನ ಪ್ರಕರಣ ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ಮೂರು ಮಂದಿ ಆರೋಪಿಗಳಲ್ಲದೆ ಪ್ರಕರಣದಲ್ಲಿ ಇನ್ನೂ ನಾಲ್ಕೈದು ಮಂದಿ ಭಾಗಿಯಾಗಿರುವ ಬಗ್ಗೆ ಸಂಶಯವಿದ್ದು ಅವರಿಗಾಗಿ ಪೊಲೀಸರು ತಲಾಶ್ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಬಂಟ್ವಾಳ ನಗರ ಪಿಎಸ್ಸೈ ಅವಿನಾಶ್ ಭರವಸೆ ವ್ಯಕ್ತಪಡಿಸಿದ್ದಾರೆ. 











  • Blogger Comments
  • Facebook Comments

0 comments:

Post a Comment

Item Reviewed: ಅಪಘಾತ ಎಂದು ಬಿಂಬಿಸಿ ಮುಚ್ಚಿ ಹೋಗಬಹುದಾಗಿದ್ದ ಕೊಲೆ ಯತ್ನ ಪ್ರಕರಣ ಬೇಧಿಸಿದ ಬಂಟ್ವಾಳ ಪೊಲೀಸ್ : 3 ಮಂದಿ ಅರೆಸ್ಟ್ Rating: 5 Reviewed By: karavali Times
Scroll to Top