ಬಂಟ್ವಾಳ, ನ. 03, 2020 (ಕರಾವಳಿ ಟೈಮ್ಸ್) : ತಾಲೂಕಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಂ ಡಿ ಶ್ಯಾಮರಾವ್ (97) ಅವರು ಮಂಗಳವಾರ ಬೆಳಿಗ್ಗೆ ಶಿವಮೊಗ್ಗದ ಮೆಟ್ರೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೂಲತಃ ಬಂಟ್ವಾಳ ತಾಲೂಕಿನ ಬಿ ಮೂಡ ಗ್ರಾಮದ ಬಿ ಸಿ ರೋಡ್ ನಿವಾಸಿಯಾಗಿರುವ ಶ್ಯಾಮರಾವ್ ಕಳೆದ ಕೆಲ ತಿಂಗಳಿನಿಂದ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಶಿವಮೊಗ್ಗದ ತನ್ನ ಪುತ್ರನ ಮನೆಯಲ್ಲಿ ವಾಸವಾಗಿದ್ದರು.
1942ರ ನಂತರ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿದ್ದ ಶ್ಯಾಮರಾವ್ ಕಾಂಗ್ರೆಸ್ ಸೇವಾದಳ ಸೇರ್ಪಡೆಯಾಗಿ ಹಲವಾರು ಕಡೆ ಗುಪ್ತವಾಗಿ ಚಳುವಳಿಗಳಿಗೆ ನೆರವಾಗುತ್ತಿದ್ದರು. ಈ ಸಂಬಂಧ 1946ರಲ್ಲಿ ಬಂಧಿಯಾಗಿ ಶಿವಮೊಗ್ಗದ ಜೈಲಿನಲ್ಲಿ ಎರಡು ತಿಂಗಳ ಸೆರೆವಾಸ ಅನುಭವಿಸಿದ್ದರು. ಸ್ವಾತಂತ್ರ್ಯಾ ನಂತರವೂ ಅವರು ಗಾಂಧೀಜಿ ಮಾದರಿಯಲ್ಲಿ ರಚನಾತ್ಮಕ ಕೆಲಸಗಳ ಮೂಲಕ ಸೇವಾಕ್ಷೇತ್ರದಲ್ಲಿ ತೊಡಗಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
0 comments:
Post a Comment