ಬಂಟ್ವಾಳ, ಸೆಪ್ಟಂಬರ್ 17, 2021 (ಕರಾವಳಿ ಟೈಮ್ಸ್) : ತಾಲೂಕಿನ ಜಕ್ರಿಬೆಟ್ಟು ಬಳಿ ಹೆದ್ದಾರಿ ಅಗಲೀಕರಣದ ಬಳಿಕ ಸಾರ್ವಜನಿಕ ಬಸ್ಸು ತಂಗುದಾಣವನ್ನು ಹೆದ್ದಾರಿ ಇಲಾಖೆ ಯಾರದೋ ಹಿತಾಸಕ್ತಿಗೆ ಮಣಿದು ಜನರಿಗೆ ಉಪಯೋಗ ಇಲ್ಲದ ಕಡೆ ಚರಂಡಿ ಸ್ಲ್ಯಾಬ್ ಮೇಲೆ ನಿರ್ಮಾಣ ಮಾಡುತ್ತಿರುವ ಬಗ್ಗೆ ಇಲ್ಲಿನ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಕ್ರಿಬೆಟ್ಟು ಜಂಕ್ಷನ್ನಿನಲ್ಲಿ ಸಾಕಷ್ಟು ಸರಕಾರಿ ಜಾಗ ಇದ್ದರೂ ಬಸ್ಸು ನಿಲುಗಡೆ ಕೂಡಾ ಅದೇ ಸ್ಥಳದಲ್ಲಾಗಿದ್ದರೂ ಅದನ್ನು ಬಿಟ್ಟು ಹೆದ್ದಾರಿಯ ನಿರ್ಜನ ಪ್ರದೇಶದಲ್ಲಿ ಅದೂ ಕೂಡಾ ಚರಂಡಿ ಸ್ಲ್ಯಾಬ್ ಮೇಲೆ ಹೆದ್ದಾರಿ ಇಲಾಖೆ ಕಾಟಾಚಾರಕ್ಕೆ ಬಸ್ಸು ತಂಗುದಾಣ ನಿರ್ಮಿಸುತ್ತಿರುವುದು ಕಂಡು ಬರುತ್ತಿದೆ. ಇಲಾಖಾಧಿಕಾರಿಗಳ ಈ ನಡೆ ಇದೀಗ ಸಾರ್ವಜನಿಕ ಸಂಶಯಕ್ಕೆ ಕಾರಣವಾಗಿದ್ದು, ಜನರಿಗೂ ಇದು ಉಪಯೋಗಕ್ಕೆ ಬಾರದ ರೀತಿಯ ಬಸ್ಸು ತಂಗುದಾಣವಾಗಿ ಮಾರ್ಪಾಡಾಗುವ ಎಲ್ಲ ಲಕ್ಷಣಗಳೂ ಕಂಡು ಬರುತ್ತಿದೆ.
ಈಗಾಗಲೇ ಇಂತಹ ಅವೈಜ್ಞಾನಿಕ ಹಾಗೂ ಲಾಬಿ ಉದ್ದೇಶದ ಹಲವು ಬಸ್ಸು ತಂಗುದಾಣಗಳು ವಿವಿಧೆಡೆ ಇದ್ದು, ಜನರಿಗೆ ಯಾವುದೇ ಉಪಯೋಗಕ್ಕೆ ಬಾರದೆ ಬೀದಿ ನಾಯಿಗಳು, ದನ-ಜಾನುವಾರು ಹಾಗೂ ಭಿಕ್ಷುಕರ ಆವಾಸ ಸ್ಥಾನವಾಗಿ ಅದು ಪಾಳು ಬಿದ್ದಿರುವುದು ಕಂಡು ಬರುತ್ತಿದೆ. ಇದೀಗ ಜಕ್ರಿಬೆಟ್ಟು ಬಸ್ಸು ತಂಗುದಾಣ ಕೂಡಾ ಅದೇ ಹಾದಿ ಹಿಡಿಯುವ ಸಾಧ್ಯತೆ ಇದೆ ಎನ್ನುವ ಸ್ಥಳೀಯರು ಖಾಸಗಿ ಜಾಗದ ಗುಡ್ಡವನ್ನೂ ಕಬಳಿಸಿ ನಿರ್ಮಿಸುವ ಈ ತಂಗುದಾಣದ ಬಗ್ಗೆ ಈಗಾಗಲೇ ಹೆದ್ದಾರಿ ಕಾಮಗಾರಿ ನಡೆಸುವ ಗುತ್ತಿಗೆದಾರರ ಗಮನಕ್ಕೆ ಸ್ಥಳೀಯರು ತಂದರೂ ಅವರು ಯಾವುದೇ ಸ್ಪಂದನೆ ನೀಡದೆ ಉಡಾಫೆ ಉತ್ತರ ನೀಡುತ್ತಾರೆ ಎಂದು ಸ್ಥಳೀಯರು ದೂರುತ್ತಾರೆ.
ಈ ಬಗ್ಗೆ ತಕ್ಷಣ ಹೆದ್ದಾರಿ ಇಲಾಖಾಧಿಕಾರಿಗಳು ಎಚ್ಚೆತ್ತು ಸೂಕ್ತ ಜಾಗದಲ್ಲಿ ಜನೋಪಯೋಗಕ್ಕೆ ಬರುವ ರೀತಿಯಲ್ಲಿ ಬಸ್ಸು ನಿಲ್ದಾಣ ನಿರ್ಮಿಸುವ ಮೂಲಕ ಸಾರ್ವಜನಿಕರೊಂದಿಗೆ ಸಹಕರಿಸುವುದರ ಜೊತೆಗೆ ಸರಕಾರದ ಹಣ ಪೋಲಾಗುವುದನ್ನು ತಪ್ಪಿಸುವಂತೆ ಆಗ್ರಹಿಸಿದ್ದಾರೆ.
0 comments:
Post a Comment