ಬಂಟ್ವಾಳ, ಅಕ್ಟೋಬರ್ 24, 2021 (ಕರಾವಳಿ ಟೈಮ್ಸ್) : ತುಳುನಾಡಿನ ಅಭಿವೃದ್ದಿಯಲ್ಲಿ ತುಳುನಾಡಿನ ಯುವಜನರಿಗೆ ದೊಡ್ಡ ಪಾಲು ನೀಡುವಂತೆ ಉದ್ಯೋಗ ಸೃಷ್ಟಿಸಿ, ಸ್ಥಳೀಯರಿಗೆ ಆದ್ಯತೆ ನೀಡುವಂತೆ ಆಗ್ರಹಿಸಿ ಡಿವೈಎಫ್ಐ ಬಂಟ್ವಾಳ ತಾಲೂಕು ಸಮಾವೇಶ ಬಿ ಸಿ ರೋಡಿನಲ್ಲಿ ಭಾನುವಾರ ನಡೆಯಿತು.
ಸಮಾವೇಶ ಉದ್ಘಾಟಿಸಿ ಮಾತನಾಡಿದ ಡಿವೈಎಫ್ಐ ರಾಜ್ಯಾದ್ಯಕ್ಷ ಮುನೀರ್ ಕಾಟಿಪಳ್ಳ, ಇಂದು ಯುವ ಜನತೆ ಉದ್ಯೋಗದ ಹಕ್ಕಿಗಾಗಿ ಬೀದಿಗಿಳಿಯಬೇಕಾಗಿದೆ. ಆದರೆ ಯುವ ಜನತೆಯನ್ನು ಧರ್ಮ ಜಾತಿಯ ಹೆಸರಿನಲ್ಲಿ ದಾರಿ ತಪ್ಪಿಸಿ ಅವರು ಬದುಕನ್ನೇ ನಿರ್ನಾಮ ಮಾಡಲು ಕೋಮುವಾದಿ ಶಕ್ತಿಗಳು ಪ್ರಯತ್ನಿಸುತ್ತಿದ್ದು, ಯುವಜನತೆ ಎಚ್ಚರಗೊಂಡು ತಮ್ಮ ನಿಜವಾದ ಸಮಸ್ಯೆಗಳ ಪರಿಹಾರಕ್ಕಾಗಿ ಸಂಘಟಿತರಾಗಬೇಕೆಂದು ಕರೆ ನೀಡಿದರು.
ಶಿಕ್ಷಣ, ಆರೋಗ್ಯದ ವ್ಯಾಪರೀಕರಣದಿಂದಾಗಿ ಜನತೆ ಸಂಕಷ್ಟಕ್ಕೀಡಾಗಿದ್ದು, 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ ಅಧಿಕಾರಕ್ಕೇರಿದ್ದ ಮೋದಿ ಸರಕಾರದ ಅವಧಿಯಲ್ಲಿ ನಿರುದ್ಯೋಗದ ಪ್ರಮಾಣ ಅತೀ ಹೆಚ್ಚಾಗಿದೆ ಎಂದು ಆರೋಪಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಪೆರ್ನಾಂಡಿಸ್ ಮಾತನಾಡಿ, ನಮ್ಮನ್ನಾಳುವ ಸರಕಾರಗಳು ಕಾಪೆರ್Çೀರೇಟ್ ಕಂಪೆನಿಗಳ ಪರವಾಗಿರುವ ಕಾರಣ ಸಾಮಾನ್ಯ ಜನತೆಗೆ ಜೀವನ ನಡೆಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕ ರಂಗದ ಎಲ್ಲಾ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುತ್ತಿರುವುದರಿಂದ ಉದ್ಯೋಗ ಕಡಿತಗೊಂಡು ಯುವ ಜನತೆ ಬೀದಿಪಾಲಾಗುತ್ತಿದ್ದಾರೆ. ಆದರೆ ಸರಕಾರವು ಅಚ್ಚೇ ದಿನದ ಹೆಸರಿನಲ್ಲಿ ಜನರನ್ನು ಮರುಳು ಮಾಡುತ್ತಿದೆ. ಈ ಬಗ್ಗೆ ಯುವಜನತೆ ಒಗ್ಗಟ್ಟಾಗಿ ಸರಕಾರದ ನೀತಿಗಳ ವಿರುದ್ಧ ಹೋರಾಡಬೇಕಾದ ಅನಿವಾರ್ಯತೆ ಇದೆ ಎಂದು ಕರೆ ನೀಡಿದರು.
ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ ನಿರುದ್ಯೋಗದ ಪ್ರಮಾಣ ಅತಿಯಾಗಿ ಯುವ ಜನತೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು ಸರಕಾರದ ಹಲವು ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಇದ್ದರೂ ಅವುಗಳನ್ನು ಭರ್ತಿ ಮಾಡಲು ಸರಕಾರ ಮುಂದಾಗುತ್ತಿಲ್ಲ. ನಿರುದ್ಯೋಗಿ ಯುವಜನತೆಯನ್ನು ರಾಜಕೀಯ ಲಾಭಕ್ಕಾಗಿ ದಾರಿ ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿದರು. ಡಿವೈಎಫ್ಐ ಈ ನಿಟ್ಟಿನಲ್ಲಿ ಉದ್ಯೋಗದ ಹಕ್ಕಿಗಾಗಿ ದೇಶದಾದ್ಯಂತ ಹೋರಾಟ ನಡೆಸುತ್ತಿದ್ದು ಬಂಟ್ವಾಳ ತಾಲೂಕಿನಲ್ಲಿ ಡಿವೈಎಫ್ಐಸಂಘಟನೆಯನ್ನು ಬಲಿಷ್ಠಗೊಳಿಸುವಂತೆ ಕರೆ ನೀಡಿದರು.
ಡಿವೈಎಫ್ಐ ಬಂಟ್ವಾಳ ತಾಲೂಕು ಅದ್ಯಕ್ಷ ಸುರೇಂದ್ರ ಕೋಟ್ಯಾನ್, ಕಾರ್ಯದರ್ಶಿ ತುಳಸೀದಾಸ್ ವಿಟ್ಲ ಮೊದಲಾದವರು ಸಮಾವೇಶದಲ್ಲಿ ಭಾಗವಹಿಸಿದ್ದರು.
ಇದೇ ವೇಳೆ ಡಿವೈಎಫ್ಐ ಬಂಟ್ವಾಳ ತಾಲೂಕು ಸಮಿತಿಯನ್ನು ಪುನರ್ ರಚಿಸಲಾಯಿತು. ಸಮಿತಿಯ ಸಲಹೆಗಾರರಾಗಿ ರಾಜ ಚೆಂಡ್ತಿಮಾರ್, ಅಧ್ಯಕ್ಷರಾಗಿ ಸುರೇಂದ್ರ ಕೋಟ್ಯಾನ್, ಕಾರ್ಯದರ್ಶಿಯಾಗಿ ತುಳಸೀದಾಸ್ ವಿಟ್ಲ ಅವರು ಪುನರಾಯ್ಕೆಯಾದರೆ, ಉಪಾಧ್ಯಕ್ಷರುಗಳಾಗಿ ಸಲ್ಮಾನ್ ಪಿ ಬಿ, ಸಾದಿಕ್ ಬಂಟ್ವಾಳ, ಜೊತೆ ಕಾರ್ಯದರ್ಶಿಗಳಾಗಿ ಶಹೀದ್ ಶೈನ್, ಶೆರೀಫ್ ಮೈಂದಾಳ, ಕೋಶಧಿಕಾರಿಯಾಗಿ ಉಮೇಶ್ ವಾಮದಪದವು ಸಹಿತ ಇತರ 10 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಆರಿಸಲಾಯಿತು.
0 comments:
Post a Comment