ಬಂಟ್ವಾಳ, ಫೆಬ್ರವರಿ 28, 2022 (ಕರಾವಳಿ ಟೈಮ್ಸ್) : ತಾಲೂಕಿನ ಕಳ್ಳಿಗೆ ಗ್ರಾಮದ ದೇವಂದಬೆಟ್ಟು ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ರಾಷ್ಟ್ರಧ್ವಜಕ್ಕೆ ಅವಮಾನವಾಗುವ ರೀತಿ ಹಾಗೂ ಧರ್ಮವನ್ನು ನಿಂದಿಸಿ ಸಾಮಾಜಿಕ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಪ್ರಚೋದನಕಾರಿ ಭಾಷಣ ಮಾಡಿದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳವಂತೆ ಬಂಟ್ವಾಳ ಬ್ಲಾಕ್ ಯುವ ಕಾಂಗ್ರೆಸ್ ಪೊಲೀಸ್ ದೂರು ದಾಖಲಿಸಿದೆ.
ಬಂಟ್ವಾಳ ನಗರ ಠಾಣೆಗೆ ಈ ಬಗ್ಗೆ ದೂರು ನೀಡಿರುವ ಬಂಟ್ವಾಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಪೂಜಾರಿ ಜೋರಾ ಅವರು, ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಇತ್ತೀಚೆಗೆ ಕಳ್ಳಿಗೆ ಗ್ರಾಮದ ದೇವಂದಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ದೇಶದ ರಾಷ್ಟ್ರಧ್ವಜದ ಬಗ್ಗೆ ಅವಹೇಳನ ಮಾಡಿದ್ದಲ್ಲದೆ ಧರ್ಮವನ್ನು ನಿಂದಿಸಿ ದೇವಸ್ಥಾನದ ಧಾರ್ಮಿಕ ಸಭೆಯಲ್ಲಿ ಪ್ರಚೋದನಕಾರಿಯಾಗಿ ಭಾಷಣ ಮಾಡಿ ಸಾಮಾಜಿಕ ಅಶಾಂತಿ ಸೃಷ್ಟಿಸುವ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ದೂರಿದ್ದಾರೆ. ಅಲ್ಲದೆ ಪ್ರಚೋದನಕಾರಿ ಭಾಷಣದ ವೀಡಿಯೋ ತುಣುಕನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಅಪ್ಲೋಡ್ ಮಾಡಿ ವೈರಲ್ ಮಾಡಲಾಗಿದೆ.
ಪ್ರಭಾಕರ್ ಭಟ್ ಅವರ ವಿರುದ್ದ ಪ್ರಚೋದನಕಾರಿ ಭಾಷಣ ಮಾಡಿದ ಬಗ್ಗೆ ಈಗಾಗಲೇ ತಾಲೂಕು, ಜಿಲ್ಲೆ, ರಾಜ್ಯಾದ್ಯಂತ ವಿವಿಧ ಠಾಣೆಗಳನ್ನು ಪ್ರಕರಣ ದಾಖಲಾಗಿ ನ್ಯಾಯಾಲಯದಲ್ಲಿ ತನಿಖಾ ಹಂತದಲ್ಲಿರುತ್ತದೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ರೀತಿ ಭಾಷಣ ಮಾಡುವುದೇ ಇವರ ಕೆಲಸವಾಗಿರುತ್ತದೆ.
ಈ ಬಗ್ಗೆ ಡಾ ಪ್ರಭಾಕರ್ ವಿರುದ್ದ ಸೂಕ್ತ ಕಲಂಗಳಡಿ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಸುರೇಶ್ ಪೂಜಾರಿ ಜೋರಾ ಅವರು ಬಂಟ್ವಾಳ ನಗರ ಪೊಲೀಸರನ್ನು ಆಗ್ರಹಿಸಿದ್ದಾರೆ.
0 comments:
Post a Comment