ಮಂಗಳೂರು, ಮೇ 30, 2022 (ಕರಾವಳಿ ಟೈಮ್ಸ್) : ವಿದ್ಯಾರ್ಥಿಗಳು ಭವಿಷ್ಯದಲ್ಲಿ ಯಾವುದೇ ಧರ್ಮವನ್ನು ಅನುಸರಿಸದೇ ನಾವೆಲ್ಲರೂ ಮನುಷ್ಯರು, ಮನುಷ್ಯ ಧರ್ಮವೇ ಮೇಲು ಎಂದು ಭಾವಿಸುವ ಮೂಲಕ ವೈದ್ಯ ವಿದ್ಯಾರ್ಥಿಗಳು ಮಾನವ ಧರ್ಮ ಪಾಲನೆ ಮಾಡಬೇಕು ಎಂದು ವಿನಯಾ ಹಾಸ್ಪಿಟಲ್ ಎಂಡ್ ರಿಸರ್ಚ್ ಸೆಂಟರ್ ನಿರ್ದೇಶಕ ಡಾ ಹಂಸರಾಜ್ ಆಳ್ವ ಕರೆ ನೀಡಿದರು.
ಶ್ರೀದೇವಿ ಶಿಕ್ಷಣ ಸಂಸ್ಥೆಗಳ ಫಾರ್ಮಸಿ, ಫಿಸಿಯೋಥೆರಪಿ, ನರ್ಸಿಂಗ್ ಮತ್ತು ಸೋಶಿಯಲ್ ವರ್ಕ್ ಕಾಲೇಜಿನ ಪದವಿ ಪ್ರದಾನ ಹಾಗೂ ನರ್ಸಿಂಗ್ ಕಾಲೇಜಿನ ಜ್ಯೋತಿ ಬೆಳಗಿಸುವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವೈದ್ಯರಿಗೆ ರೋಗಿಗಳೇ ದೇವರು, ಆಸ್ಪತ್ರೆಯೇ ದೇವಾಲಯ ಎಂಬ ದೃಷ್ಟಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಸಿಟಿ ಹಾಸ್ಪಿಟಲ್ ರಿಸರ್ಚ್ ಎಂಡ್ ಡಯಾಗ್ನೋಸ್ಟಿಕ್ ಸೆಂಟರ್ ನಿರ್ದೇಶಕ ಡಾ ರೋಶನ್ ಶೆಟ್ಟಿ ಮಾತನಾಡಿ ಪದವಿ ಪಡೆದ ವಿದ್ಯಾರ್ಥಿಗಳು ತಮ್ಮ ಯಶಸ್ಸಿನ ಹಿಂದೆ ಕೇವಲ ತಮ್ಮ ಪ್ರಯತ್ನ ಮಾತ್ರ ಇದೆ ಎಂದು ಭಾವಿಸದೆ ಹೆತ್ತವರು ಹಾಗೂ ಶಿಕ್ಷಕರ ಕೊಡುಗೆ ಕೂಡಾ ಇದೆ ಎಂಬುದನ್ನು ಮರೆಯಬಾರದು ಎಂದು ಕಿವಿ ಮಾತು ಹೇಳಿದರು.
ಶ್ರೀದೇವಿ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ನಿಧೀಶ್ ಎಸ್ ಶೆಟ್ಟಿ, ಫಿಸಿಯೋಥೆರಪಿ ಪ್ರಾಂಶುಪಾಲರಾದ ಡಾ ವಿಜಯ್, ಉಪನ್ಯಾಸಕರಾದ ಆಡ್ವಿನಾ, ಸ್ಮಿತಾ, ಮನಿಷಾ, ಲೈನಲ್ ಸಲ್ದಾನ ಮೊದಲಾದವರು ಭಾಗವಹಿಸಿದ್ದರು.
ಇದೇ ವೇಳೆ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯ ನಡೆಸಿದ ಬಿ ಫಾರ್ಮಾ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದ ಆಯೇಶಾ ಮಿನಾಜ್, ಎಂ ಫಾರ್ಮಾ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ದುರ್ಗಪ್ರಿಯಾ, ಬಿ ಫಾರ್ಮಾ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ಅಕ್ಷತಾ, ಫಾರ್ಮ ಡಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ನವ್ಯ ನಾರಾಯಣ್ ಹಾಗೂ ಬಿಎಸ್ಸಿ ನರ್ಸಿಂಗ್ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ಬ್ಲೆಸ್ಸಿ ಥೋಮಸ್ ಅವರನ್ನು ಗೌರವಿಸಲಾಯಿತು. ಶ್ರೀದೇವಿ ಶಿಕ್ಷಣ ಸಂಸ್ಥೆಗಳ 208 ಫಾರ್ಮಸಿ, 175 ಫಿಸಿಯೋಥೆರಪಿ, 90 ನರ್ಸಿಂಗ್ ಹಾಗೂ 28 ಸೋಶಿಯಲ್ ವರ್ಕ್ ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು.
0 comments:
Post a Comment