ಅಂಚೆ ಇಲಾಖೆಯಿಂದ ಮನೆ ಬಾಗಿಲಿಗೆ ಜನನ-ಮರಣ ಪ್ರಮಾಣ ಪತ್ರ : ಪ್ರಯೋಜನ ಪಡೆದುಕೊಂಡ ಸಾವಿರಕ್ಕೂ ಮಿಕ್ಕಿದ ಸಾರ್ವಜನಿಕರು - Karavali Times ಅಂಚೆ ಇಲಾಖೆಯಿಂದ ಮನೆ ಬಾಗಿಲಿಗೆ ಜನನ-ಮರಣ ಪ್ರಮಾಣ ಪತ್ರ : ಪ್ರಯೋಜನ ಪಡೆದುಕೊಂಡ ಸಾವಿರಕ್ಕೂ ಮಿಕ್ಕಿದ ಸಾರ್ವಜನಿಕರು - Karavali Times

728x90

13 July 2022

ಅಂಚೆ ಇಲಾಖೆಯಿಂದ ಮನೆ ಬಾಗಿಲಿಗೆ ಜನನ-ಮರಣ ಪ್ರಮಾಣ ಪತ್ರ : ಪ್ರಯೋಜನ ಪಡೆದುಕೊಂಡ ಸಾವಿರಕ್ಕೂ ಮಿಕ್ಕಿದ ಸಾರ್ವಜನಿಕರು

ಮಂಗಳೂರು, ಜುಲೈ 13, 2022 (ಕರಾವಳಿ ಟೈಮ್ಸ್) : ಮಂಗಳೂರು ಅಂಚೆ ವಿಭಾಗವು 2022 ರ ಮಾರ್ಚ್ 21 ರಂದು ಮಂಗಳೂರು ಮಹಾನಗರ ಪಾಲಿಕೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಕರ್ನಾಟಕದಲ್ಲೇ ಪ್ರಪ್ರಥಮ ಬಾರಿಗೆ ಸ್ಪೀಡ್ ಪೋಸ್ಟ್ ಮೂಲಕ ಜನನ/ ಮರಣ ಪ್ರಮಾಣ ಪತ್ರಗಳನ್ನು ಮನೆ ಬಾಗಿಲಿಗೆ ತಲುಪಿಸುವ ವಿಶಿಷ್ಟ ಸೇವೆಗೆ ಚಾಲನೆ ನೀಡಿತ್ತು. ಬಳಿಕ ಈ ಸೇವೆಯನ್ನು ಮಂಗಳೂರಿನ ಜಿಲ್ಲಾ ಆಸ್ಪತ್ರೆಗಳಾದ ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ಲೇಡಿಗೋಶನ್ ಸರಕಾರಿ ಆಸ್ಪತ್ರೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಾದ ಕೋಟೆಕಾರ್ ಪಟ್ಟಣ ಪಂಚಾಯತ್, ಕಿನ್ನಿಗೋಳಿ ಪಟ್ಟಣ ಪಂಚಾಯತ್, ಬಜ್ಪೆ ಪಟ್ಟಣ ಪಂಚಾಯತ್, ಮುಲ್ಕಿ ಪಟ್ಟಣ ಪಂಚಾಯತ್, ಸೋಮೆಶ್ವರ ನಗರ ಪುರಸಭೆ ಹಾಗೂ ಉಳ್ಳಾಲ ನಗರ ಪುರಸಭೆಗಳಿಗೆ ವಿಸ್ತರಿಸಲಾಯಿತು. 

ಈ ಮೊದಲು ಜನನ/ ಮರಣ ಪ್ರಮಾಣ ಪತ್ರವನ್ನು ಪಡೆಯಲು ಅರ್ಜಿದಾರರು ಸಂಬಂಧಪಟ್ಟ ಸಂಸ್ಥೆಗೆ 2 ಬಾರಿ ಭೇಟಿ ನೀಡಬೇಕಿತ್ತು. ಈ ವ್ಯವಸ್ಥೆಯಿಂದಾಗಿ ದೂರದ ಸ್ಥಳಗಳಿಂದ ಬರುವ ಸಾರ್ವಜನಿಕರು ಪ್ರಮಾಣ ಪತ್ರಗಳನ್ನು ಪಡೆಯಲು ಸಮಯ ಹಾಗೂ ಹೆಚ್ಚಿನ ಹಣವನ್ನು ವ್ಯಯಿಸಬೇಕಾಗುತ್ತಿತ್ತು. ಆದರೆ ಈ ಹೊಸ ಸೇವೆಯ ಪ್ರಾರಂಭದಿಂದ ಅರ್ಜಿದಾರರು ಜನನ/ ಮರಣ ಪ್ರಮಾಣ ಪತ್ರವನ್ನು ಮನೆಬಾಗಿಲಿನಲ್ಲಿ ಪಡೆಯಲು ಈಗ ಸಾಧ್ಯವಾಗಿದೆ. 

ಈ ಸೇವೆಯನ್ನು ಪಡೆಯಲು ಸಾರ್ವಜನಿಕರು ಜನನ/ ಮರಣ ಪ್ರಮಾಣ ಪತ್ರದ ಅರ್ಜಿಯೊಂದಿಗೆ ಮತ್ತೊಂದು ಸರಳವಾದ ಅರ್ಜಿಯನ್ನು ಭರ್ತಿಮಾಡಿಕೊಟ್ಟಲ್ಲಿ, ಜನನ/ ಮರಣ ಪ್ರಮಾಣ ಪತ್ರವನ್ನು ಕೆಲವೇ ದಿನಗಳಲ್ಲಿ ಅರ್ಜಿದಾರರ ಮನೆಬಾಗಿಲಿಗೆ ಸ್ಪೀಡ್ ಪೋಸ್ಟ್ ಮೂಲಕ ತಲುಪಿಸಲಾಗುವುದು. ಪ್ರಮಾಣ ಪತ್ರವನ್ನು ಪಡೆದುಕೊಳ್ಳುವಾಗ ಅಂಚೆ ವೆಚ್ಚ 100/- ರೂಪಾಯಿಯನ್ನು ಪೋಸ್ಟ್ ಮ್ಯಾನ್ ಮೂಲಕ ಅಂಚೆ ಇಲಾಖೆಗೆ ಪಾವತಿಸಬೇಕಾಗುತ್ತದೆ. 

ಮಂಗಳೂರು ಅಂಚೆ ವಿಭಾಗದ ಈ ವಿನೂತನ ಸೇವೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ಸೇವೆಯ ಪ್ರಯೋಜನವನ್ನು ಕಳೆದ ಮೂರುವರೆ ತಿಂಗಳಿನಲ್ಲಿ ಭಾರತದ 7 ರಾಜ್ಯಗಳ 34 ಜಿಲ್ಲೆಗಳ 1048 ಸಾರ್ವಜನಿಕರು ಪಡೆದುಕೊಂಡಿದ್ದಾರೆ. 

ಈ ಸೇವೆಯನ್ನು ಈಗ ಪುತ್ತೂರು ಅಂಚೆ ವಿಭಾಗದ ವ್ಯಾಪ್ತಿಯಲ್ಲಿರುವ ಪುತ್ತೂರು ನಗರ ಸಭೆ, ಬೆಳ್ತಂಗಡಿ ಪಟ್ಟಣ ಪಂಚಾಯತ್ ಹಾಗೂ ಸುಳ್ಯ ಪಟ್ಟಣ ಪಂಚಾಯತ್ ಗಳಿಗೆ ವಿಸ್ತರಿಸಲಾಗಿದೆ. ಈ ಸೇವೆಯನ್ನು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಪ್ರಾರಂಭಿಸುವ ಪ್ರಕ್ರಿಯೆಯು ಪ್ರಾರಂಭಗೊಂಡಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಮಂಗಳೂರು ಅಂಚೆ ವಿಭಾಗದ ಹಿರಿಯ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಅಂಚೆ ಇಲಾಖೆಯಿಂದ ಮನೆ ಬಾಗಿಲಿಗೆ ಜನನ-ಮರಣ ಪ್ರಮಾಣ ಪತ್ರ : ಪ್ರಯೋಜನ ಪಡೆದುಕೊಂಡ ಸಾವಿರಕ್ಕೂ ಮಿಕ್ಕಿದ ಸಾರ್ವಜನಿಕರು Rating: 5 Reviewed By: karavali Times
Scroll to Top