ಕೇವಲ ಒಂದು ದಿನ ಬಾವುಟ ಹಾರಿಸುವುದು ಸ್ವತಂತ್ರವಲ್ಲ. ವರ್ಷ ಪೂರ್ತಿ ನೆಮ್ಮದಿಯಿಂದ ಜೀವಿಸುವುದು ನಿಜವಾದ ಸ್ವತಂತ್ರ. - Karavali Times ಕೇವಲ ಒಂದು ದಿನ ಬಾವುಟ ಹಾರಿಸುವುದು ಸ್ವತಂತ್ರವಲ್ಲ. ವರ್ಷ ಪೂರ್ತಿ ನೆಮ್ಮದಿಯಿಂದ ಜೀವಿಸುವುದು ನಿಜವಾದ ಸ್ವತಂತ್ರ. - Karavali Times

728x90

14 August 2022

ಕೇವಲ ಒಂದು ದಿನ ಬಾವುಟ ಹಾರಿಸುವುದು ಸ್ವತಂತ್ರವಲ್ಲ. ವರ್ಷ ಪೂರ್ತಿ ನೆಮ್ಮದಿಯಿಂದ ಜೀವಿಸುವುದು ನಿಜವಾದ ಸ್ವತಂತ್ರ.

ಸರ್ವ ಜನಾಂಗದ ಶಾಂತಿಯುತವಾದ ತೋಟಕ್ಕೆ ಬೆಂಕಿ ಹಚ್ಚಿ ಕಾಯಿ ಕದ್ದು ತಿನ್ನುವುದು ಸ್ವತಂತ್ರವಲ್ಲ.. 




ಗಾಂಧಿಯವರು ಹೇಳಿದ್ದು ಮಧ್ಯರಾತ್ರಿ ಒಂದು ಹೆಣ್ಣು ನಡೆದಾಡಿದರೆ ಅದುವೇ ಸ್ವಾತಂತ್ರ್ಯ ಎಂದು. ಆದರೆ ಇಂದು ಒಬ್ಬ ಪುರುಷ ಸಂಜೆ ಹೊತ್ತಿಗೆ ನಡೆದಾಡಲು ಭಯಪಡುವ ವಾತಾವರಣ ಸೃಷ್ಟಿಯಾಗುತ್ತಿವೆ. ಕೊಲೆ, ದರೋಡೆ, ಅತ್ಯಾಚಾರಗಳಂತಹ ಹೀನ ಕೃತ್ಯಗಳಿಂದಾಗಿ ಪ್ರಜೆಗಳೆಲ್ಲ ತಮ್ಮ ಸ್ವತಂತ್ರವನ್ನು ಕಳೆದುಕೊಳ್ಳುತ್ತಿದ್ದಾರೆ. ಅಧಿಕಾರಿಗಳ ಇಷ್ಟದ ಪ್ರಕಾರ ಕಾನೂನುಗಳನ್ನು ಜಾರಿಗೆ ತರುತ್ತಾರೆ. ಆರೋಪಿಗಳೆಲ್ಲ ವಿಐಪಿಗಳಾಗಿ ಸ್ವತಂತ್ರವಾಗಿ ಓಡಾಡಿದರೆ, ಅಮಾಯಕರು ಮಾತ್ರ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಸರಿಯಾದ ನ್ಯಾಯವಿಲ್ಲ, ಆರೋಪಿಗಳಿಗೆ ಕಠಿಣ ಶಿಕ್ಷೆ ಇಲ್ಲ. ಒಂದೇ ಜಾತಿ ಧರ್ಮಕ್ಕೆ ಸೀಮಿತದಂತೆ ಸರಕಾರ ಮುಂದುವರಿಯುತ್ತಿದೆ. ಭ್ರಷ್ಟಾಚಾರ,  ಕೋಮುವಾದ ಇನ್ನೂ ಕೂಡ ಮುಂದುವರಿಯುತ್ತಿದೆ. ನ್ಯಾಯದ ಪರ ಯಾರಾದರೂ ಧ್ವನಿ ಎತ್ತಿದರೆ ಅವನು ದೇಶ ದ್ರೋಹಿ ಎಂಬ ಆರೋಪ ಹೊರುತ್ತಾನೆ. ಸ್ವತಂತ್ರವಾಗಿ ಪ್ರಜೆಗಳು ಇಲ್ಲ ಎಂಬುದು ಸಾಬೀತಾಗಿದೆ.

ನಮಗೆ ನಿಜಕ್ಕೂ ಸ್ವಾತಂತ್ರ್ಯ ದೊರೆತಿದೆಯೆ? ಭಯೋತ್ಪಾದಕರಿಂದ, ಗಲಭೆಗಾರರಿಂದ ನಮಗಿಂದು ರಸ್ತೆಗಳಲ್ಲಿ ಓಡಾಡಲೂ ಭಯವಾಗುತ್ತಿದೆಯಲ್ಲಾ, ಎಂಥ ಸ್ವಾತಂತ್ರ್ಯ ನಮ್ಮದು? ಕಳ್ಳ, ಆರೋಪಿ, ಉಗ್ರರನ್ನು ಮಟ್ಟಹಾಕಲಾರದ ಸರ್ಕಾರಗಳನ್ನು ಅನುಭವಿಸುತ್ತಿದ್ದೇವಲ್ಲಾ, ನಮ್ಮದೆಂಥ ಸರ್ವತಂತ್ರ ಸ್ವತಂತ್ರ ಪ್ರಜಾಪ್ರಭುತ್ವ? ಕೋಮು ದ್ವೇಷ, ವರ್ಗ ಶೋಷಣೆ, ಹಲವೆಡೆ ಶೋಷಣೆಯ ಮಿಥ್ಯಾಪವಾದ, ಇವುಗಳಿಂದ ಬೆಂದುಹೋಗುತ್ತಿದ್ದೇವಲ್ಲಾ, ಎಲ್ಲಿದೆ ನಮಗೆ ಹಾಯಾಗಿ ಜೀವಿಸುವ ಸ್ವಾತಂತ್ರ್ಯ? ಇಂಥ ಬೇಯುವಿಕೆಗಳಿಂದ ನಮ್ಮನ್ನು ಪಾರುಮಾಡಬೇಕಾದ ನಮ್ಮ ಧುರೀಣರೇ ಈ ಬೆಂಕಿಗೆ ತುಪ್ಪ ಸುರಿಯುತ್ತ ನಮ್ಮ ಬಾಳನ್ನು ಅಸಹನೀಯವಾಗಿಸಿದ್ದಾರಲ್ಲಾ, ಇದಾ ನಮಗೆ ಸಿಕ್ಕಿರುವ ಸ್ವಾತಂತ್ರ್ಯ? ಇಷ್ಟಾಗಿಯೂ ನಾವು ಕುರಿಗಳಂತೆ ಈ ಖೂಳರಿಗೆ ತಲೆ ಕೊಟ್ಟುಕೊಂಡಿದ್ದೇವಲ್ಲಾ, ಇದಾ ಸ್ವಾತಂತ್ರ್ಯ?

ನಮ್ಮ ಧರ್ಮಾಚರಣೆಗಾದರೂ ನಮಗಿಲ್ಲಿ ಸ್ವಾತಂತ್ರ್ಯವಿದೆಯೆ? ‘ಮೂಲಭೂತವಾದ’ ಮತ್ತು ‘ಕೋಮುವಾದ’ಗಳಿಗೆ ಕಾರಣವೇನೇ ಇರಲಿ, ಹಿನ್ನೆಲೆ ಏನೇ ಇರಲಿ, ಈ ಎರಡು ತಥಾಕಥಿತ ವಾದಗಳಿಂದಾಗಿ ನಮಗಿಂದು ಈ ದೇಶದಲ್ಲಿ ಸ್ವಧರ್ಮಾಚರಣೆಗೂ ಅನೇಕ ಅಡ್ಡಿ-ಆತಂಕಗಳು ಎದುರಾಗುತ್ತಿಲ್ಲವೆ? ನಮ್ಮ ಪಾಡಿಗೆ ನಾವು ಧರ್ಮಾಚರಣೆ ಮಾಡಿಕೊಂಡಿದ್ದುದೂ ಎಷ್ಟೋ ಸಲ ಕೋಮುವಾದವೆಂಬ ಆರೋಪಕ್ಕೆ ಗುರಿಯಾಗಲಿಲ್ಲವೆ? ಧರ್ಮಾಚರಣೆಯ ಸ್ವಾತಂತ್ರ್ಯವೂ ಇಲ್ಲದ ನಮ್ಮದು ಅದೆಂಥ ಸ್ವಾತಂತ್ರ್ಯ?

‘ಸತ್ಯಂ ವದ; ಧರ್ಮಂ ಚರ’ ಎಂಬ ಸೂಕ್ತಿಯಿದೆ. ಆದರೆ ನಮಗಿಂದು ಸತ್ಯ ಹೇಳಲು ಭಯ! ಧರ್ಮಾಚರಣೆ ಮಾಡಲು ಹಿಂದೆ ಮುಂದೆ ನೋಡಬೇಕಾದ ಪರಿಸ್ಥಿತಿ! ನಮಗಿಂದಿಲ್ಲಿ ಯಾವ ಸ್ವಾತಂತ್ರ್ಯವೂ ಇಲ್ಲ. ಸ್ವಾತಂತ್ರ್ಯವನ್ನು ಮೀರಿದ ಸ್ವೇಚ್ಛೆ ಹೊಂದಿರುವ ಮುಷ್ಟಿಭರ್ತಿ ರಾಜಕಾರಣಿಗಳು, ಉನ್ನತಾಧಿಕಾರಿಗಳು ಮತ್ತು ಬಂಡವಾಳಶಾಹಿಗಳ ಮುಷ್ಟಿಯೊಳಗೆ ಸಿಕ್ಕಿ ಈ ದೇಶದ ಕೋಟ್ಯಂತರ ಶ್ರೀಸಾಮಾನ್ಯರಾದ ನಾವಿಂದು ನರಳುತ್ತಿದ್ದೇವೆ!

ಅವನು ಬಾವುಟ ಹಾರಿಸುತ್ತಾನೆಂದು ಇವನು ಕೂಡ ಒಂದು ಖರೀದಿಸಿ ಹಾರಿಸುತ್ತಿದ್ದಾನೆ ಅಷ್ಟೇ. ಅದು ಬಿಟ್ಟರೆ ಸ್ವತಂತ್ರವಾಗಿ ಹಾರಿಸುತ್ತಿಲ್ಲ. ಪ್ರತಿಯೊಬ್ಬ ಪ್ರಜೆಯು ಒಂದಲ್ಲ ಒಂದು ಕಷ್ಟ ನಷ್ಟದಲ್ಲಿ ಜೀವಿಸುತ್ತಿದ್ದಾನೆ. ಸ್ವತಂತ್ರವಾಗಿ ಇರಲು ಭಯಪಡುತ್ತಾನೆ. ದುಡಿದು ಬಂದರು ನೆಮ್ಮದಿಲ್ಲ. ಸಿಗುವ ಸಾವಿರಾರು ಸಂಬಳದಲ್ಲಿ ಹೇಗೆ ಜೀವಿಸಲಿ ಎಂಬುದು ಚಿಂತೆ. ಹೆಂಡತಿ ಮಕ್ಕಳೊಂದಿಗೆ ಪ್ರೀತಿಯಿಂದ ಜೀವಿಸಲು ಹಣದ ಕೊರತೆ ದುಬಾರಿಯಾದ ದಿನಬಳಕೆಯ ಬೆಲೆಗಳು. ಮಗು ತಿನ್ನುವ ಚಾಕೊಲೇಟಿಗೂ ತೆರಿಗೆ, ತಿಂದ ಆಹಾರದಿಂದ ಆರೋಗ್ಯ ಕೆಟ್ಟು ಆಸ್ಪತ್ರೆಗೆ ಹೋದರೆ ಅಲ್ಲಿಯೂ ತೆರಿಗೆ. ನೆಮ್ಮದಿಯಾಗಿ ಸ್ವತಂತ್ರವಾಗಿ ಓಡಾಡಲು ಕೂಡ ಭಯ ಇಂತಹ ಕಷ್ಟ ನೋವುಗಳಿಂದ ಭವ್ಯ ಭಾರತದ ಪ್ರೀತಿಯಿಂದ ಸ್ವತಂತ್ರ ದಿನವನ್ನು ಆಚರಿಸುತ್ತಾರೆ ವಿನಃ ಸ್ವತಂತ್ರವಾಗಿ ಆಚರಿಸುತ್ತಿಲ್ಲ ಎಂಬುದು ಕಹಿ ಸತ್ಯ.

ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ ಇನ್ನೂ ಕಡಿಮೆಯಾಗಿಲ್ಲ. ಸ್ವತಂತ್ರವಾಗಿ ಓಡಾಡಲು ಕೂಡ ಅವಳಿಗೆ ಭಯ. ಒಂಟಿಯಾಗಿ ಇರಲು ಕೂಡ ಅಸಾಧ್ಯವಾಗಿದೆ. ಅವಳು ಅವಳ ಸ್ವತಂತ್ರ ಕೇಳಲು ನ್ಯಾಯಾಲಯದ ಮೆಟ್ಟಿಲು ಏರಬೇಕು. ಆದರೂ ಅಲ್ಲಿಯೂ ಕೂಡ ಕೆಲವೊಮ್ಮೆ ನ್ಯಾಯ ವಂಚಿತಳಾಗುತ್ತಾಳೆ. ತಾಯಿಗೆ ತನ್ನ ಮಗಳನ್ನು ಒಂಟಿಯಾಗಿ ಕಳುಹಿಸಲು ಭಯ ಎಲ್ಲಿ ಕಾಮುಕರ ಆಹಾರವಾಗುತ್ತಾಳೆ ಎಂಬುದೇ ಚಿಂತೆ. ನೆಮ್ಮದಿಯಿಂದ ವಿವಾಹ ಮಾಡಿಕೊಟ್ಟರೆ ಕೆಲವೊಂದು ಪತಿ ಕುಟುಂಬದ ಕಿರುಕುಳ ದೌರ್ಜನ್ಯ ಕಷ್ಟನೋವು ಎಲ್ಲವನ್ನೂ ಅನುಭವಿಸುತ್ತಿರುತ್ತಾಳೆ. ಸ್ವತಂತ್ರ ಭಾರತದಲ್ಲಿ ಇದ್ದರು ಅವಳು ಮಾತ್ರ ಸ್ವತಂತ್ರವಾಗಿರುವುದಿಲ್ಲ. ಎಲ್ಲವೂ ಕೊನೆಗೊಳ್ಳಲಿ. ಸ್ವತಂತ್ರ ಭಾರತದ ಅಮೃತ ಮಹೋತ್ಸವ ಆಚರಿಸುವುದರೊಂದಿಗೆ ಅಮೃತ ಕೂಡ ಸ್ವತಂತ್ರವಾಗಿರಲಿ... ದ್ವೇಷ, ಅಸೂಯೆ, ಜಾತಿ ಭೇದ, ಕೋಮುವಾದ ಎಲ್ಲವೂ ಕೊನೆಗೊಳ್ಳಲಿ... ಇದು ಸ್ವತಂತ್ರ ಭೂಮಿ, ಸರ್ವ ಜನಾಂಗದವರ ಶಾಂತಿಯ ತೋಟವಾಗಿದೆ. ಇಲ್ಲಿ ಭ್ರಷ್ಟಾಚಾರ, ಅತ್ಯಾಚಾರ, ಕೋಮು ಗಲಭೆ, ಕೊಲೆ, ದರೋಡೆಗಳನ್ನು ಮಾಡುವವರಿಗೆ ಕಠಿಣ ಶಿಕ್ಷೆಯಾಗಲಿ. ಎಲ್ಲರಿಗೂ ಒಂದೇ ನ್ಯಾಯ, ಕಾನೂನು ಜಾರಿಯಾಗಲಿ..  ಭಾರತೀಯರು ಎಲ್ಲ ಒಂದೇ ತಾಯಿ ಮಕ್ಕಳು ನಮ್ಮ ದೇಶಕ್ಕೆ ಇರುವ ಬೆಲೆ ಗೌರವ ಆಚಾರ ವಿಚಾರಗಳಿಗೆ ಇರುವಷ್ಟು ಬೇರೆ ದೇಶಕ್ಕೆ ಇಲ್ಲ. ಕೆಲವೊಂದು ರಾಜಕಾರಣಿ, ಅಧಿಕಾರಿಗಳ ದುರಾಡಳಿತಕ್ಕೆ ಪ್ರಜೆಗಳು ಸ್ವತಂತ್ರ ಕಳೆದುಕೊಳ್ಳುತ್ತಿದ್ದಾರೆ. ಎಲ್ಲವೂ ಕೊನೆಗೊಳ್ಳಲಿ.. ದೇಶದ ಬಾವುಟ ಹಾರುವುದರೊಂದಿಗೆ ನಮ್ಮಲ್ಲಿ ಅಡಗಿರುವ ಕಳಂಕ ಮನೋಭಾವಗಳು ಹಾರಿ ಹೋಗಲಿ.. ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ಇಲ್ಲಿ ಜೀವಿಸುವ.. ಭಾರತಕ್ಕೆ ಅನ್ಯಾಯ ಮಾಡುವವರನ್ನು ಬ್ರಿಟಿಷರನ್ನು ಓಡಿಸಿದಂತೆ ಓಡಿಸುವ.


ಸರ್ವರಿಗೂ ಸ್ವತಂತ್ರ ಭಾರತದ ಅಮೃತ ಮಹೋತ್ಸವದ ಶುಭಾಶಯಗಳು..


- ಡಿ.ಎಸ್.ಐ.ಬಿ ಪಾಣೆಮಂಗಳೂರು

  • Blogger Comments
  • Facebook Comments

0 comments:

Post a Comment

Item Reviewed: ಕೇವಲ ಒಂದು ದಿನ ಬಾವುಟ ಹಾರಿಸುವುದು ಸ್ವತಂತ್ರವಲ್ಲ. ವರ್ಷ ಪೂರ್ತಿ ನೆಮ್ಮದಿಯಿಂದ ಜೀವಿಸುವುದು ನಿಜವಾದ ಸ್ವತಂತ್ರ. Rating: 5 Reviewed By: karavali Times
Scroll to Top