ಮಂಗಳೂರು, ಆಗಸ್ಟ್ 19, 2022 (ಕರಾವಳಿ ಟೈಮ್ಸ್) : ಕೊಡಗು ಪ್ರವಾಸದಲ್ಲಿದ್ದ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದಾರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದ ಬಿಜೆಪಿಯ ನಡೆ ಅತ್ಯಂತ ಖಂಡನೀಯವಾಗಿದೆ. ಇದಕ್ಕೆ ರಾಜ್ಯದ ಜನತೆಯೇ ಮುಂದಿನ ದಿನಗಳಲ್ಲಿ ತಕ್ಕ ಪ್ರತ್ಯುತ್ತರವ ನೀಡಲಿದ್ದಾರೆ ಎಂದು ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ವಹಾಬ್ ಕುದ್ರೋಳಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ನಡೆದ ಸಿದ್ದಾರಾಮಯ್ಯ ಜನ್ಮದಿನದ ಅಮೃತಮಹೋತ್ಸವ ಕಾರ್ಯಕ್ರಮಕ್ಕೆ ಸೇರಿದ ಜನಸಾಗರ ಕರ್ನಾಟಕ ಬಿಜೆಪಿಯ ನಿದ್ದೆಗೆಡಿಸಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಈ ಬಗ್ಗೆ ಸಹಿಸಲಾಗದ ಹಿನ್ನಲೆಯಲ್ಲಿ ಬಿಜೆಪಿ ಮೊಟ್ಟೆ ಎಸೆಯುವ ಮೂಲಕ ಸಿದ್ದಾರಾಮಯ್ಯ ಅವರ ಜನಪ್ರಿಯತೆಗೆ ಧಕ್ಕೆ ತರುವ ಹುಚ್ಚು ಪ್ರಯತ್ನ ನಡೆಸುತ್ತಿದೆ. ಆದರೆ ಆಡಳಿತದಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಬಿಜೆಪಿಗರ ಯಾವ ತಂತ್ರವೂ ಮುಂದಿನ ದಿನಗಳಲ್ಲಿ ಫಲ ನೀಡದು. ಬಿಜೆಪಿಯ ಕುಟಿಲ ತಂತ್ರದ ವಿರುಧ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸಲಿದ್ದಾರೆ. ಇಂತಹ ಗೂಂಡಾರಾಜ್ ಯುಪಿಯಲ್ಲಿ ಕಂಡಿದ್ದೆವು. ಇವತ್ತು ಮುಖ್ಯಮಂತ್ರಿ ಬೊಮ್ಮಾಯಿ ಯೋಗಿ ಮಾದರಿ ಅಂತ ಹೇಳಿದ್ದಾರೆ. ಅದೇ ರೀತಿ ಅವರ ಸರಕಾರ ಅದನ್ನು ಕಾರ್ಯಗತಗೊಳಿಸುತ್ತಿದೆ. ಇಂತಹ ಬೆದರಿಕೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಗ್ಗುವುದಿಲ್ಲ. ನಾವೆಲ್ಲರೂ ಸಿದ್ದಾರಾಮಯ್ಯನವರ ಬೆಂಬಲಕ್ಕೆ ನಿಂತಿದ್ದೇವೆ. ಸರಕಾರ ರಕ್ಷಣೆ ನೀಡಲು ವಿಫಲವಾದರೂ ಕಾಂಗ್ರೆಸ್ ಪಕ್ಷದ ಸಹಸ್ರ ಸಂಖ್ಯೆಯ ಕಾರ್ಯಕರ್ತರು ನಮ್ಮ ನಾಯಕರನ್ನು ಯಾವ ರೀತಿ ರಕ್ಷಿಸಬೇಕು ಎಂಬುದನ್ನು ತಿಳಿದಿದ್ದೇವೆ. ಇಂತಹ ಗೂಂಡಾಗಿರಿ ವಿರುಧ್ದ ಉಗ್ರ ಹೋರಾಟ ನಡೆಸಿಯೇ ತೀರುತ್ತೇವೆ. ಈ ಅಹಿತಕರ ಘಟನೆಗೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಬೊಮ್ಮಾಯಿ ರಾಜೀನಾಮೆ ನೀಡಲಿ ಎಂದು ವಹಾಬ್ ಕುದ್ರೋಳಿ ಆಗ್ರಹಿಸಿದ್ದಾರೆ.
0 comments:
Post a Comment