ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ಇಂದು ಮುಂಜಾನೆ ನಡೆದ ಘಟನೆ
ಅಪ್ಪಚ್ಚಿಯಾಗಿ ಛಿದ್ರವಾದ ಮಕ್ಕಳು, ಮಹಿಳೆಯರ ಮೃತ ದೇಹಗಳು
ಮುಂಬೈ (ಕರಾವಳಿ ಟೈಮ್ಸ್) : ಹಳಿ ಮೇಲೆ ಮಲಗಿದ್ದ 14 ಮಂದಿ ಕೂಲಿ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದ ದಾರುಣ ಘಟನೆ ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.
ಮಕ್ಕಳು, ಮಹಿಳೆಯರು ಸೇರಿದಂತೆ 15 ಜನ ವಲಸೆ ಕಾರ್ಮಿಕರು ಔರಂಗಾಬಾದ್-ಜಲ್ನಾ ರೈಲ್ವೆ ಟ್ರ್ಯಾಕ್ ಮೇಲೆ ಮಲಗಿದ್ದರು. ನಸುಕಿನ ಜಾವ 4 ಗಂಟೆಗೆ ಬಂದ ಗೂಡ್ಸ್ ರೈಲು ಕಾರ್ಮಿಕರ ಮೇಲೆ ಹರಿದಿದೆ. ಪರಿಣಾಮ ಮಕ್ಕಳು, ಕಾರ್ಮಿಕರ ದೇಹ ತುಂಡು ತುಂಡಾಗಿ ಟ್ರ್ಯಾಕ್ ಮೇಲೆ, ಕೆಳಗೆ ಬಿದ್ದಿವೆ.
ಕರ್ಮದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದ್ದು, ಪೊಲೀಸರು ಬೆಳಗ್ಗೆ 6 ಗಂಟೆ ಸುಮಾರಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದೆ.
ವಲಸೆ ಕಾರ್ಮಿಕರು ಹಳಿ ಮೇಲೆ ಏಕೆ ಮಲಗಿದ್ದರು ಎಂಬ ಬಗ್ಗೆ ಮತ್ತು ಅಪಘಾತದ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಔರಂಗಾಬಾದ್ ಎಸ್ಪಿ ಮೊಕ್ಷಡ ಪಾಟೀಲ್ ತಿಳಿಸಿದ್ದಾರೆ.
ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಪೊಲೀಸರು ಮತ್ತು ರೈಲ್ವೆ ಪೊಲೀಸ್ ಪಡೆ ಸ್ಥಳಕ್ಕೆ ಧಾವಿಸಿದ್ದು ಪರಿಸ್ಥಿತಿ ಪರಾಮರ್ಶೆ ನಡೆಸುತ್ತಿದೆ. ಹೆಚ್ಚಿನ ಮಾಹಿತಿ ಸಿಗಬೇಕಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.
ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ರೈಲ್ವೆ ಸಚಿವಾಲಯ, ಹಳಿ ಮೇಲೆ ಕಾರ್ಮಿಕರು ಮಲಗಿರುವುದನ್ನು ಕಂಡು ಗೂಡ್ಸ್ ರೈಲಿನ ಲೊಕೊ ಪೈಲಟ್ ರೈಲನ್ನು ನಿಲ್ಲಿಸಲು ಪ್ರಯತ್ನಿಸಿದರೂ ಸಾಧ್ಯವಾಗದೆ ಆಕಸ್ಮಿಕವಾಗಿ ರೈಲು ಕಾರ್ಮಿಕರ ದೇಹದ ಮೇಲೆ ಹರಿದುಹೋಯಿತು. ಈ ಬಗ್ಗೆ ತನಿಖೆಗೆ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದೆ.
ರೈಲು ಅಪಘಾತ ತೀವ್ರ ನೋವುಂಟುಮಾಡಿದ್ದು ಈ ಬಗ್ಗೆ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರ ಬಳಿ ಮಾತನಾಡಿದ್ದೇನೆ. ಸಂಬಂಧಪಟ್ಟ ಇಲಾಖೆಗಳ ಜೊತೆ ಸಂಪರ್ಕಿಸಿದ್ದು ಕೇಂದ್ರ ಸರ್ಕಾರ ನೆರವು ನೀಡಲಿದೆ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರ ಪರಿಹಾರ
ಅಪಘಾತದಲ್ಲಿ ಮೃತಪಟ್ಟ ವಲಸೆ ಕಾರ್ಮಿಕರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಕಾರ್ಯಾಲಯ ಘೋಷಿಸಿದೆ.
0 comments:
Post a Comment