ಸಮಬಲದ ಹೋರಾಟ‌ ನೀಡಿ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದ ಮುಂಬೈ-ಬೆಂಗಳೂರು ತಂಡ - Karavali Times ಸಮಬಲದ ಹೋರಾಟ‌ ನೀಡಿ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದ ಮುಂಬೈ-ಬೆಂಗಳೂರು ತಂಡ - Karavali Times

728x90

28 September 2020

ಸಮಬಲದ ಹೋರಾಟ‌ ನೀಡಿ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದ ಮುಂಬೈ-ಬೆಂಗಳೂರು ತಂಡ

 


ಸೂಪರ್ ಓವರ್‌ನಲ್ಲಿ ಮೇಲುಗೈ ಸಾಧಿಸಿದ ಆರ್‌ಸಿಬಿಗೆ ಅರ್ಹ ಜಯ


ಕಿಶನ್, ಪೊಲಾರ್ಡ್ ಸ್ಫೋಟಕ‌‌ ಆಟ ವ್ಯರ್ಥ


ದುಬೈ, ಸೆ. 29, 2020 (ಕರಾವಳಿ ಟೈಮ್ಸ್) : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ‌‌ ನೀಡಿದ್ದ ಬೃಹತ್ ಮೊತ್ತ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಏಳು-ಬೀಳು ಕಂಡರೂ ಇಶಾನ್ ಕಿಶನ್ ಹಾಗೂ ಕೀರನ್ ಪೊಲಾರ್ಡ್ ಅವರ ಬಿರುಸಿನ ಆಟದಿಂದಾಗಿ ಇಲ್ಲಿನ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಐಪಿಎಲ್‌ ಕ್ರೀಡಾ ಕೂಟದ 20ನೇ ಪಂದ್ಯ‌ ಟೈ ಆಗುವ ಮೂಲಕ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯಿತು. ಎಬಿಡಿ ಹಾಗೂ ಕೊಹ್ಲಿ ಅವರ ಎಚ್ಚರಿಕೆ ಹಾಗೂ ಸಮಯೋಚಿತ ಆಟದಿಂದಾಗಿ ಸೂಪರ್ ಓವರಿನಲ್ಲಿ ಆರ್ಸಿಬಿ ಅರ್ಹ ಗೆಲುವು ದಾಖಲಿಸಿದೆ.

ಆರ್ ಸಿಬಿ ನೀಡಿದ್ದ 202ರನ್‍ಗಳ ಬೃಹತ್ ಮೊತ್ತ ಬೆನ್ನಟ್ಟಿದ ಮುಂಬೈ ಆರಂಭದ ಮೂರು ಓವರ್ ಗಳಲ್ಲಿ ಪ್ರಮುಖ ಎರಡು ವಿಕೆಟ್ ಕಳೆದುಕೊಂಡು ತೀವ್ರ ಹಿನ್ನಡೆ ಅನುಭವಿಸಿತು. ಆರಂಭಿಕ ಆಟಗಾರ ಇಶನ್ ಕಿಶನ್ 58 ಬಾಲ್‍ಗೆ 99 ರನ್ ಗಳಿಸಿದರಾದರೂ ತಂಡವನ್ನು‌ ದಡ ಸೇರಿಸುವಲ್ಲಿ ವಿಫಲರಾದರು. ಕಿಶನ್ ಹಾಗೂ ಪೋಲಾರ್ಡ್ ಪ್ರಯತ್ನದ ಹೊರತಾಗಿಯೂ ಪಂದ್ಯ ಸಮಬಲದಲ್ಲಿ ಅಂತ್ಯಗೊಂಡಿತು. 

ಕೊನೆಯ 2 ಓವರ್ ಗಳಲ್ಲಿ ಮುಂಬೈಗೆ ಗೆಲ್ಲಲು 31ರನ್‍ಗಳ ಅವಶ್ಯಕತೆಯಿತ್ತು. ಕೊನೆಯ ಓವರ್ ನಲ್ಲಿ 19 ರನ್‍ಗಳ ಅಗತ್ಯವಿತ್ತು. ಮೂರು ಹಾಗೂ ನಾಲ್ಕನೇ ಎಸೆತಗಳನ್ನು ಸಿಕ್ಸರ್ ಗೆ ಅಟ್ಟಿದ್ದ ಕಿಶನ್ ನಂತರದ‌ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಕೊನೆಯ ಎಸೆತವನ್ನು ಪೊಲಾರ್ಡ್ ಬೌಂಡರಿಗಟ್ಟುವ ಮೂಲಕ ಪಂದ್ಯ ರೋಚಕ‌ ಟೈಯಲ್ಲಿ ಅಂತ್ಯಗೊಂಡಿತು.

ಸೂಪರ್ ಓವರ್ ನಲ್ಲಿ ಆರ್ಸಿಬಿ ಪರವಾಗಿ ನವದೀಪ್ ಸೈನಿ ಬೌಲಿಂಗ್ ಮಾಡಿದರು. ನಾಲ್ಕನೇ ಎಸೆತವನ್ನು ಪೋಲಾರ್ಡ್ ಬೌಂಡರಿಗಟ್ಟಿದರು. ಐದನೇ ಎಸೆತದಲ್ಲಿ ಔಟ್ ಆಗಿ ಪೆವಿಲಿಯನ್ ಸೇರಿಕೊಂಡರು. ಸೂಪರ್ ಓವರ್ ಮುಕ್ತಾಯಕ್ಕೆ ಮುಂಬೈ ಇಂಡಿಯನ್ಸ್ 7 ರನ್ ಬಾರಿಸಿ ಆರ್‍ಸಿಬಿಗೆ 8ರನ್‍ಗಳ ಗುರಿ ನಿಗದಿಪಡಿಸಿತು. ಮುಂಬೈ ಪರವಾಗಿ ಜಸ್‍ಪ್ರೀತ್ ಬುಮ್ರಾ ಎಸೆತಗಾರಿಕೆ ನಡೆಸಿದರು. ಆರ್ಸಿಬಿ ಪರವಾಗಿ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಗುರಿ ತಲುಪುವಲ್ಲಿ ಯಶಸ್ವಿಯಾದರು. ಆರಂಭದ ಎರಡು ಎಸೆತಗಳಲ್ಲಿ ಒಂಟಿ ರನ್‌ ತೆಗೆದ ಇಬ್ಬರು ದಾಂಡಿಗರು, ನಾಲ್ಕನೇ ಎಸೆತವನ್ನು ಡಿವಿಲಿಯರ್ಸ್ ಬೌಂಡರಿಗಟ್ಟಿದರು. ಐದನೇ ಎಸೆತ ಮತ್ತೆ ಸಿಂಗಲ್ ಬಂತು. ಕೊನೆಯ ಎಸೆತದಲ್ಲಿ ವಿಜಯಕ್ಕೆ ಒಂದು ರನ್ ಅವಶ್ಯಕತೆ ಇದ್ದಾಗ ನಾಯಕ ವಿರಾಟ್ ಕೊಹ್ಲಿ ಚೆಂಡನ್ನು ಸೀಮಾ‌ ರೇಖೆಯ ಗಡಿ ದಾಟಿಸಿದರು. ಈ‌ ಮೂಲಕ ಆರ್ಸಿಬಿ ಸೂಪರ್ ಓವರ್ ಮೂಲಕ ಮುಂಬೈ ಇಂಡಿಯನ್ಸ್ ತಂಡವನ್ನು ಬಗ್ಗು‌ ಬಡಿಯಿತು.

ಇಶಾನ್ ಕಿಶನ್ 8 ಎಸೆತಗಳಲ್ಲಿ 9 ಸಿಕ್ಸರ್ ಹಾಗೂ 2 ಬೌಂಡರಿಗಳನ್ನೊಳಗೊಂಡ 99 ರನ್ ಗಳಿಸಿದರು. ಕಿಶನ್‍ಗೆ ಉತ್ತಮ ಸಾಥ್ ನೀಡಿದ ಪೊಲಾರ್ಡ್ 24 ಎಸೆತಗಳಲ್ಲಿ 60 ರನ್ ಸಿಡಿಸಿದರು. ಇಸುರು ಉದಾನಾ, ವಾಷಿಂಗ್ಟನ್ ಸುಂದರ್, ಚಹಲ್, ಆಡಮ್ ಝಾಂಪಾ ತಲಾ ಒಂದು ವಿಕೆಟ್ ಪಡೆದರು.









  • Blogger Comments
  • Facebook Comments

0 comments:

Post a Comment

Item Reviewed: ಸಮಬಲದ ಹೋರಾಟ‌ ನೀಡಿ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದ ಮುಂಬೈ-ಬೆಂಗಳೂರು ತಂಡ Rating: 5 Reviewed By: karavali Times
Scroll to Top