ಬಂಟ್ವಾಳ, ಅ. 07, 2020 (ಕರಾವಳಿ ಟೈಮ್ಸ್) : ನರೇಂದ್ರ ಮೋದಿ ಸರಕಾರದ ಪೊಲೀಸರು ಇಂದು ಗಂಭೀರ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ. ಇದೇ ಪೊಲೀಸರು ಮುಂದೊಂದು ದಿನ ಸಂಘ ಪರಿವಾರದ ನಾಯಕರು-ಕರ್ಯಕರ್ತರ ಕೊರಳ ಪಟ್ಟಿ ಹಿಡಿದು ಅಟ್ಟಾಡಿಸುವ ದಿನ ದೂರವಿಲ್ಲ ಎಂದು ಬಂಟ್ವಾಳ ಪುರಸಭಾ ಸದಸ್ಯ, ದಲಿತ ಮುಖಂಡ ಜನಾರ್ದನ ಚೆಂಡ್ತಿಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ಪ್ರದೇಶದ ಹತ್ರಾಸ್ ಪ್ರದೇಶದಲ್ಲಿ ದಲಿತ ಯುವತಿಯ ಮೇಲೆ ನಡೆದಿರುವ ಅತ್ಯಾಚಾರ ಹಾಗೂ ಆ ಬಳಿಕ ನಡೆದ ಅಮಾನವೀಯ ಘಟನೆ ಖಂಡಿಸಿ ಬಂಟ್ವಾಳ ತಾಲೂಕು ಅಂಬೇಡ್ಕರ್ ಯುವ ವೇದಿಕೆಯ ಆಶ್ರಯದಲ್ಲಿ ಸಮಾನ ಮನಸ್ಕ ಸಂಘಟನೆಗಳ ಸಹಯೋಗದೊಂದಿಗೆ ಬಿ ಸಿ ರೋಡಿನ ಮಿನಿ ವಿಧಾನಸೌಧ ಮುಂಭಾಗ ಬುಧವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಹತ್ರಾಸ್ ಯುವತಿಯ ಅತ್ಯಾಚಾರ ಪ್ರಕರಣದ ಬಳಿಕ ಶವವನ್ನು ಹೊತ್ತಿಸಿದ ಅಲ್ಲಿನ ಪೊಲೀಸರ ಅಮಾನವೀಯ ಕೃತ್ಯ ಅತ್ಯಂತ ಖಂಡನೀಯ ಎಂದ ಅವರು ಪೊಲೀಸರೇ ನಿಮಗೆ ಇಲ್ಲಿ ಯಾರೂ ಶವ ಹೊತ್ತಿಸುವ ಕೆಲಸ ನೀಡಿಲ್ಲ, ಬದಲಾಗಿ ನೊಂದ, ಶೋಷಣೆಗೆ ಒಳಗಾಗಿರುವ ಕುಟುಂಬಗಳಿಗೆ ರಕ್ಷಣೆ ನೀಡುವ ಕೆಲಸ ಮಾತ್ರ ನೀಡಲಾಗಿದೆ. ಇದನ್ನು ನೆನಪಿನಲ್ಲಿಟ್ಟುಕೊಂಡು ಮಾನವೀಯತೆಯಿಂದ ಕಾರ್ಯನಿರ್ವಹಿಸಿ ಎಂದು ಸಲಹೆ ನೀಡಿದರು.
ಈ ದೇಶಕ್ಕೆ ಅಸ್ತಿತ್ವ ನೀಡಿದ್ದೇ ಅಂಬೇಡ್ಕರ್ ಅವರಾಗಿದ್ದಾರೆ. ಅವರ ಅನುಯಾಯಿಗಳಿಗೆ ಯಾರೇ ಅನ್ಯಾಯ ಮಾಡಿದರೂ ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಚೆಂಡ್ತಿಮಾರ್ ದಲಿತರಿಗೆ ಯಾವುದೇ ಆಸ್ತಿ-ಅಂತಸ್ತು ಬೇಕಾಗಿಲ್ಲ. ಘನತೆ-ಗೌರವದ ಬದುಕು ಈ ಮಣ್ಣಿನಲ್ಲಿ ಬೇಕಾಗಿದೆ. ಅದು ಸಿಗದಿದ್ದಲ್ಲಿ ಹೋರಾಟ ಉಗ್ರಾವತಾರ ತಾಳಲಿದೆ ಎಂದು ಎಚ್ಚರಿಸಿದರು.
ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಬಿ ರಮಾನಾಥ ರೈ, ಹತ್ರಾಸ್ ಘಟನೆಯ ಬಳಿಕ ದೇಶಾದ್ಯಂತ ಆಕ್ರೋಶ ಭುಗಿಲೇಳುತ್ತಿದ್ದರೂ ಸರಕಾರಗಳು ಮಾತ್ರ ಇಡೀ ಪ್ರಕರಣವನ್ನು ಮುಚ್ಚಿ ಹಾಕುವ ಪಯತ್ನ ನಡೆಸುತ್ತಿದೆ. ಇದು ಅತ್ಯಂತ ಖಂಡನೀಯವಾಗಿದ್ದು, ಸರಕಾರ ನ್ಯಾಯಾಧೀಶರ ಸಮ್ಮುಖದಲ್ಲಿ ಇಡೀ ಪ್ರಕರಣದ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.
ಕಾಂಗ್ರೆಸ್, ಜೆಡಿಎಸ್, ಸಿಪಿಐ(ಎಂ), ಡಿವೈಎಫ್ಐ, ಎನ್ಎಸ್ಯುಐ ಮೊದಲಾದ ಜಾತ್ಯಾತೀತ ಸಮಾನಮನಸ್ಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು, ಮುಖಂಡರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ಎಂ ಅಬ್ಬಾಸ್ ಅಲಿ, ಸದಾಶಿವ ಬಂಗೇರ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಶ್ರೀ ಶೈಲ, ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಮಲ್ಲಿಕಾ ಶೆಟ್ಟಿ, ಮುಹಮ್ಮದ್ ನಂದರಬೆಟ್ಟು, ಹಾರೂನ್ ರಶೀದ್ ಬಂಟ್ವಾಳ, ಮಧುಸೂಧನ್ ಶೆಣೈ, ಜಯಂತಿ ಪೂಜಾರಿ, ಸಿದ್ದೀಕ್ ಸರವು, ರಾಜಾ ಪಲ್ಲಮಜಲು, ಮುಹಮ್ಮದ್ ನಂದಾವರ, ಸತೀಶ್ ಅರಳ, ರಾಮಣ್ಣ ವಿಟ್ಲ, ಭಾನುಚಂದ್ರ ಕೃಷ್ಣಾಪುರ, ಶೇಖರ ಕುಕ್ಕೇಡಿ, ತುಳಸೀದಾಸ್ ವಿಟ್ಲ, ಗಝ್ಝಾಲಿ ಕುಡ್ತಮುಗೇರು, ಸುರೇಂದ್ರ ಕೋಟ್ಯಾನ್, ಪದ್ಮನಾಭ ನರಿಂಗಾನ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ತಹಶೀಲ್ದಾರ್ಗೆ ಮನವಿ ಕೊಟ್ಟರೆ ಕಸದ ಬುಟ್ಟಿ ಸೇರುತ್ತೆ
ತಾಲೂಕು ಕಛೇರಿ ಮುಂದೆ ಪ್ರತಿಭಟನೆ ನಡೆದ ಬಳಿಕ ಸಾಮಾನ್ಯವಾಗಿ ತಾಲೂಕು ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸುವುದು ವಾಡಿಕೆ, ಆದರೆ ಅಂಬೇಡ್ಕರ್ ಯುವ ವೇದಿಕೆಯ ಪ್ರತಿಭಟನೆಯ ಕೊನೆಯಲ್ಲಿ ಮಾತನಾಡಿದ ದಲಿತ ಮುಖಂಡ ಭಾನುಚಂದ್ರ ಕೃಷ್ಣಾಪುರ ಅವರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರೆ ಅದು ಎಲ್ಲಿಗೂ ತಲುಪದೆ ಕಸದ ಬುಟ್ಟಿ ಸೇರುವುದು ಗ್ಯಾರಂಟಿ ಎಂಬ ಪ್ರಜ್ಞೆ ನಮಗಿದ್ದು, ಇದರಿಂದಾಗಿ ನಮ್ಮ ಇಂದಿನ ಪ್ರತಿಭಟನೆಯ ಮನವಿಯನ್ನು ನೇರವಾಗಿ ಅಂಚೆ ಮೂಲಕ ರಾಷ್ಟ್ರಪರಿಯವರಿಗೆ ಸಲ್ಲಿಸಲಾಗುವುದು ಎಂದು ಘೋಷಿಸಿದರು.
0 comments:
Post a Comment