ಬಂಟ್ವಾಳ, ನ. 04, 2020 (ಕರಾವಳಿ ಟೈಮ್ಸ್) : ಇಲ್ಲಿನ ನಗರ ಠಾಣಾ ವ್ಯಾಪ್ತಿಯ ಪಾಣೆಮಂಗಳೂರು ಸಮೀಪದ ನಂದಾವರದಲ್ಲಿ ಮಂಗಳವಾರ ರಾತ್ರಿ ಮನೆ ಲೀಸ್ ವಿಚಾರದಲ್ಲಿ ಎರಡು ಗುಂಪಿನ ನಡುವೆ ಚಕಮಕಿ ನಡೆದು ಮನೆ ಮಾಲಕನ ತಂದೆ ಹಾಗೂ ಸಹೋದರನ ಮೇಲೆ ತಂಡವೊಂದು ಹಲ್ಲೆ ನಡೆಸಿದೆ.
ಹಲ್ಲೆಯಿಂದ ಮನೆ ಮಾಲಕನ ತಂದೆ ಅಬ್ದುಲ್ ಖಾದರ್ ಯಾನೆ ಉಂಞÁಕ (70) ಹಾಗೂ ಅವರ ಪುತ್ರ ಮುಝಫರ್ (21) ಅವರು ಗಾಯಗೊಂಡಿದ್ದು, ಮಂಗಳೂರು ಹಾಗೂ ಬಂಟ್ವಾಳದ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳ ಪೈಕಿ ಅಬ್ದುಲ್ ಖಾದರ್ ಅವರ ಎದೆ ಹಾಗೂ ಇತರ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಂದಾವರ ನಿವಾಸಿ ಮುಸ್ತಫಾ ಎಂಬವರಿಗೆ ಸೇರಿದ ವಸತಿ ಸಂಕೀರ್ಣದಲ್ಲಿ ಕುಪ್ಪೆಪದವು ನಿವಾಸಿ ಇಬ್ರಾಹಿಂ ಎಂಬವರು ವರ್ಷದ ಹಿಂದೆ 6 ಲಕ್ಷ ರೂಪಾಯಿ ಮೊತ್ತಕ್ಕೆ 3 ವರ್ಷಗಳ ಲೀಸ್ ಕರಾರಿನಂತೆ ಮನೆಯಲ್ಲಿ ವಾಸವಾಗಿದ್ದರು. ಆದರೆ ಇದೀಗ ಏಕಾಏಕಿ ಮನೆ ತೆರವುಗೊಳಿಸುವುದಾಗಿ ಮನೆ ಮಾಲಕರಲ್ಲಿ ಹಣ ವಾಪಾಸು ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಎರಡೂ ಕಡೆಯವರ ಮಧ್ಯೆ ಒಂದು ಸುತ್ತಿನ ಮಾತುಕತೆ ನಡೆದು 2 ತಿಂಗಳ ವಾಯಿದೆ ಪಡೆದುಕೊಂಡು ಆ ಸಂದರ್ಭ ಮನೆ ತೆರವು ಹಾಗೂ ಹಣ ವಾಪಾಸು ನೀಡುವ ಬಗ್ಗೆ ಒಪ್ಪಿಕೊಳ್ಳಲಾಗಿತ್ತು. ಆದರೆ ರಾತ್ರಿ ವೇಳೆಗೆ ಇಬ್ರಾಹಿಂ ಅವರ ಸಂಬಂಧಿಕರು ಎನ್ನಲಾದ ಗುಂಪೊಂದು ಬಂದು ಈ ಸಂಬಂಧ ಮತ್ತೆ ತಗಾದೆ ತೆಗೆದು ಅಬ್ದುಲ್ ಖಾದರ್ ಹಾಗೂ ಅವರ ಪುತ್ರನ ಮೇಲೆ ಹಲ್ಲೆ ನಡೆಸಿದ್ದು, ಈ ಸಂದರ್ಭ ಸ್ಥಳದಲ್ಲಿ ಹೊಡೆದಾಟ ನಡೆದಿದೆ ಎನ್ನಲಾಗಿದೆ. ಈ ವೇಳೆ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣಗೊಂಡಿದ್ದು, ಸುದ್ದಿ ತಿಳಿದು ತಕ್ಷಣ ಹೆಚ್ಚುವರಿ ಪೊಲೀಸರೊಂದಿಗೆ ಸ್ಥಳಕ್ಕಾಗಮಿಸಿದ ಬಂಟ್ವಾಳ ನಗರ ಠಾಣಾ ಎಸ್ಸೈ ಅವಿನಾಶ್ ಅವರು ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಆರೋಪಿಗಳ ಪೈಕಿ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಘಟನೆ ನಡೆದ ಸ್ಥಳದಲ್ಲಿರುವ ಸೀಸಿ ಟಿವಿ ಫೂಟೇಜ್ಗಳನ್ನು ಪಡೆದುಕೊಂಡಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾದ ಬಗ್ಗೆ ಪೊಲೀಸರು ಮಾಹಿತಿ ನೀಡಿಲ್ಲ.
0 comments:
Post a Comment