ಬಂಟ್ವಾಳ, ನ. 03, 2020 (ಕರಾವಳಿ ಟೈಮ್ಸ್) : ತಾಲೂಕಿನ ಭಂಡಾರಿಬೆಟ್ಟುವಿನ ವಸ್ತಿ ಅಪಾರ್ಟ್ಮೆಂಟ್ನಲ್ಲಿ ಹತ್ಯೆಗೀಡಾದ ಸುರೇಂದ್ರ ಭಂಡಾರಿ ಕೊಲೆಗೆ ಸಂಬಂಧಿಸಿದಂತೆ ಆರೋಪಿಗಳಿಗೆ ಸಹಾಯ ಹಾಗೂ ಆಶ್ರಯ ನೀಡಿದ ಆರೋಪದಲ್ಲಿ ಇನ್ನಿಬ್ಬರು ಅರೋಪಿಗಳಾದ ಬೆಳ್ತಂಗಡಿ ತಾಲೂಕಿನ, ಲಾಯಿಲ ಗ್ರಾಮದ ಪ್ರತೀಕ್ (27) ಹಾಗೂ ಮಂಗಳೂರು ತಾಲೂಕು ಬೋಂದೇಲ್ ಸಮೀಪದ ಕೊಂಚಾಡಿ ನಿವಾಸಿ ಜಯೇಶ್ ಅಲಿಯಾಸ್ ಸಚ್ಚು (28) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಅ. 20 ರಂದು ಮಧ್ಯಾಹ್ನ ಇಲ್ಲಿನ ವಸ್ತಿ ವಸತಿ ಸಂಕೀರ್ಣದಲ್ಲಿ ಸುರೇಂದ್ರ ಭಂಡಾರಿ ಅವರ ಮೃತದೇಹ ಕೊಚ್ಚಿ ಕೊಲೆ ಮಾಡಿದ ರೀತಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಸುದೀರ್ಘ ತನಿಖೆ ನಡೆಸಿದ ಮೂರು ಪೊಲೀಸ್ ತಂಡಗಳು ಈಗಾಗಲೇ 9 ಮಂದಿ ಅರೋಪಿಗಳನ್ನು ಬಂಧಿಸಿ ತನಿಖೆಗೊಳಪಡಿಸಿದ್ದಾರೆ. ತನಿಖೆಯ ಮುಂದುವರಿದ ಭಾಗದಲ್ಲಿ ದೊರೆತ ಮಾಹಿತಿಯಂತೆ ಈ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 11ಕ್ಕೇರಿದಂತಾಗಿದೆ. ಇನ್ನೂ ಹಲವರು ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಎಲ್ಲರ ಬಂಧನ ಶೀಘ್ರದಲ್ಲೇ ನಡೆಸಲಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಂಧಿತ ಇಬ್ಬರು ಪ್ರಮುಖ ಆರೋಪಿಗಳಾದ ಸತೀಶ್ ಹಾಗೂ ಗಿರೀಶನಿಗೆ ತಲೆಮರೆಸಿಕೊಳ್ಳಲು ಆಶ್ರಯ, ವಾಹನ ಮತ್ತು ಹಣದ ವ್ಯವಸ್ಥೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಎಲ್ಲ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿಸಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರೆದಿರುತ್ತದೆ ಎಂದಿದ್ದಾರೆ.
0 comments:
Post a Comment