ಬಂಟ್ವಾಳ, 02, ಡಿಸೆಂಬರ್, 2020 (ಕರಾವಳಿ ಟೈಮ್ಸ್) : ತಾಲೂಕಿನ ನೆಟ್ಲಮುಡ್ನೂರು ಗ್ರಾಮದ ನೇರಳಕಟ್ಟೆ ಸಮೀಪದ ಪರ್ಲೊಟ್ಟು ನಿವಾಸಿ ಸಲ್ಮಾನ್ ಫಾರಿಸ್ ಹುಸೈನ್ ಅವರ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ನಗ-ನಗದು ಕಳವುಗೈದ ಘಟನೆ ಮಂಗಳವಾರ ಮುಂಜಾನೆ ಬೆಳಕಿಗೆ ಬಂದಿದೆ.
ಸಲ್ಮಾನ್ ಫಾರಿಸ್ ಕುಟುಂಬ ಸೋಮವಾರ ಗಡಿಯಾರದ ಸಂಬಂಧಿಕರ ಮನೆಗೆ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದು, ರಾತ್ರಿ ಸುಮಾರು 10 ಗಂಟೆ ವೇಳೆಗೆ ವಾಪಾಸು ಮನೆಗೆ ಬಂದು ಮಲಗಿದ್ದರು. ಮಂಗಳವಾರ ಮುಂಜಾನೆ ಅವರ ತಾಯಿ ಎದ್ದು ನೋಡಿದಾಗ ಕಪಾಟಿನಲ್ಲಿದ್ದ ಬಂಗಾರದ ಆಭರಣ ಇಡುವ ಖಾಲಿ ಬಾಕ್ಸ್ ನೆಲದ ಮೇಲೆ ಬಿದ್ದಿರುವುದು ಕಂಡು ಬಂದಿದ್ದು, ಪರಿಶೀಲನೆ ನಡೆಸಿದಾಗ ಕಳವು ಕೃತ್ಯ ಗಮನಕ್ಕೆ ಬಂದಿದೆ.
ಕಳ್ಳರು ಸುಮಾರು 200 ಗ್ರಾಂ ಚಿನ್ನಾಭರಣ, 40 ಸಾವಿರ ರೂಪಾಯಿ ನಗದು ಹಾಗೂ ಒಂದು ಮೊಬೈಲ್ ಸೆಟ್ ಕಳವುಗೈದು ಪರಾರಿಯಾಗಿದ್ದಾರೆ. ಕಳ್ಳತನವಾಗಿರುವ ಸೊತ್ತುಗಳ ಒಟ್ಟು ಮೌಲ್ಯ 6.5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಘಟನಾ ಸ್ಥಳಕ್ಕೆ ವಿಟ್ಲ ಎಸ್ಸೈ ವಿನೋದ್ ರೆಡ್ಡಿ ನೇತೃತ್ವದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಸ್ಥಳಕ್ಕೆ ಕರೆಸಲಾಗಿದೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಕಲಂ 457,380 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment