ಮುಂಬೈ, ಎಪ್ರಿಲ್ 18, 2021 (ಕರಾವಳಿ ಟೈಮ್ಸ್) : ಮುಂಬರುವ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಭಾರತದಲ್ಲಿ ನಡೆಯಲಿರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕ್ರೀಡಾಂಗಣಗಳನ್ನು ಗುರುತಿಸಲು ಪ್ರಾರಂಭಿಸಿದ್ದು, ಬೆಂಗಳೂರು ಸೇರಿದಂತೆ ದೇಶದ ಒಟ್ಟು ಒಂಬತ್ತು ನಗರಗಳನ್ನು ಆಯ್ಕೆ ಮಾಡಿದೆ. ಟೂರ್ನಿಗೆ ಬೇಕಾದ ತಯಾರಿ ನಡೆಸುವಂತೆ ಆಯಾ ರಾಜ್ಯದ ಕ್ರಿಕೆಟ್ ಸಂಸ್ಥೆಗಳಿಗೆ ಬಿಸಿಸಿಐ ಸೂಚಿಸಿದೆ.
ಸದ್ಯ ಭಾರತದಲ್ಲಿ 14ನೇ ಆವೃತ್ತಿಯ ಐಪಿಎಲ್ ಪಂದ್ಯಾಟಗಳು ಸಾಗುತ್ತಿವೆ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಟಿ-20 ವಿಶ್ವಕಪ್ ಭಾರತದಲ್ಲೇ ನಡೆಯಲಿದೆ. ಹಾಗಾಗಿ ಈಗಿನಿಂದಲೇ ತಯಾರಿ ಆರಂಭಿಸಿರುವ ಬಿಸಿಸಿಐ ಪಂದ್ಯಾಟ ನಡೆಸಲು, ಮುಂಬೈ, ದೆಹಲಿ, ಕೋಲ್ಕತಾ, ಬೆಂಗಳೂರು, ಚೆನ್ನೈ, ಹೈದರಾಬಾದ್, ಅಹಮದಾಬಾದ್ ಹಾಗೂ ಲಕ್ನೋ ಸೇರಿ ಒಟ್ಟು 9 ನಗರಗಳನ್ನು ಆಯ್ಕೆ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ.
ಟಿ0-20 ವಿಶ್ವಕಪ್ ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಬೇಕಾಗಿತ್ತು. ಆದರೆ ಕೊರೊನಾದಿಂದಾಗಿ 2021ಕ್ಕೆ ಮುಂದೂಡಲಾಯಿತು ಹಾಗೂ ಆತಿಥ್ಯವನ್ನು ಭಾರತಕ್ಕೆ ಸ್ಥಳಾಂತರಿಸಲಾಯಿತು. ಇದೀಗ ಭಾರತದಲ್ಲಿ ವಿಶ್ವಕಪ್ ಪಂದ್ಯಾವಳಿಗಾಗಿ ತಯಾರಿ ಆರಂಭವಾಗಿದೆ.
ಈ ಹಿಂದೆ 2016ರಲ್ಲಿ ನಡೆದ ಟಿ20 ಟೂರ್ನಿಯ ಆತಿಥ್ಯ ವಹಿಸಿಕೊಂಡಿದ್ದ ಭಾರತ ಮುಂಬೈ, ದೆಹಲಿ, ಕೋಲ್ಕತ್ತಾ, ಪಂಜಾಬ್ ಮತ್ತು ನಾಗ್ಪುರದಲ್ಲಿ ಪಂದ್ಯ ನಡೆಸಿತ್ತು. ಈ ಬಾರಿ ಚೆನ್ನೈ, ಅಹಮದಾಬಾದ್ ಮತ್ತು ಲಕ್ನೋ ಸೇರಿ ಮೂರು ಹೊಸ ಸ್ಥಳಗಳೊಂದಿಗೆ ಒಟ್ಟು 9 ನಗರಗಳನ್ನು ಆಯ್ಕೆ ಮಾಡಲಾಗಿದೆ. ಟೂರ್ನಿಯ ಫೈನಲ್ ಪಂದ್ಯ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.
0 comments:
Post a Comment