ಕೇಂದ್ರ ಸರಕಾರ ನಿರಂತರ ಪೆಟ್ರೋಲ್-ಡೀಸೆಲ್ ಬೆಲೆ ಏರಿಸುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್ ಕಳೆದ ಮೂರು ದಿನಗಳಿಂದ ಬಂಟ್ವಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಪೆಟ್ರೋಲ್ ಪಂಪುಗಳ ಮುಂಭಾಗ ಪ್ರತಿಭಟನೆ ನಡೆಸುತ್ತಿರುವ ಭಾಗವಾಗಿ ಸೋಮವಾರ ಬಂಟ್ವಾಳ ಬ್ಲಾಕ್ ವ್ಯಾಪ್ತಿಗೆ ಒಳಪಟ್ಟ ಪೂಂಜಾಲಕಟ್ಟೆ-ದೈಕಿನಕಟ್ಟೆ ಪೆಟ್ರೋಲ್ ಪಂಪ್ ಮುಂಭಾಗ “ಪೆಟ್ರೋಲ್-100 ನಾಟೌಟ್” ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ಸಂದರ್ಭ ಸ್ಥಳಕ್ಕಾಗಮಿಸಿದ ಜಿ ಪಂ ನಿಕಟಪೂರ್ವ ಸದಸ್ಯ ತುಂಗಪ್ಪ ಬಂಗೇರ ನೇತೃತ್ವದ ಬಿಜೆಪಿ ಬೆಂಬಲಿತ ಯುವಕರ ತಂಡ ಕಾಂಗ್ರೆಸ್ ಕಾರ್ಯಕರ್ತರ ಮೋದಿ ವಿರುದ್ದ ಘೋಷಣೆಗೆ ಪ್ರತಿಯಾಗಿ ಮೋದಿ ಪರವಾದ ಘೋಷಣೆ ಕೂಗಲಾರಂಭಿಸಿದರು. ಈ ವೇಳೆ ಎರಡೂ ತಂಡಗಳ ನಡುವೆ ಕೆಲ ಕಾಲ ಮಾತಿನ ಚಕಮಕಿ ಹಾಗೂ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಘಟನೆ ಬಗ್ಗೆ ಪ್ರತಿಕ್ರಯಿಸಿರುವ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಅನಾವಶ್ಯಕವಾಗಿ ಉದ್ದೇಶಪೂರ್ವಕವಾಗಿಯೇ ಜಿ ಪಂ ನಿಕಟಪೂರ್ವ ಸದಸ್ಯ ತುಂಗಪ್ಪ ಬಂಗೇರ ನೇತೃತ್ವದ ಬಿಜೆಪಿಗರ ತಂಡ ಆಗಮಿಸಿದೆ. ಕಾಂಗ್ರೆಸ್ಸಿಗರ ಮೋದಿ-ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರದ ವಿರುದ್ದ ಧಿಕ್ಕಾರ ಘೋಷಣೆಗಳಿಗೆ ಪ್ರತಿಯಾಗಿ ಬಿಜೆಪಿಗರು ಮೋದಿ ಪರವಾದ ಘೋಷಣೆಗಳನ್ನು ಕೂಗಿದ್ದಾರೆ. ಈ ಸಂದರ್ಭ ನಮ್ಮ ಕಾರ್ಯಕರ್ತರು ತುಂಗಪ್ಪ ಬಂಗೇರ ಹಾಗೂ ಅವರ ನೇತೃತ್ವದ ಬಿಜೆಪಿಗರ ತಂಡಕ್ಕೂ ಧಿಕ್ಕಾರ ಕೂಗಿದ್ದಾರೆ. ಕೊನೆಗೂ ಕಾಂಗ್ರೆಸ್ಸಿಗರ ಧಿಕ್ಕಾರದಿಂದಾಗಿ ತುಂಗಪ್ಪ ಬಂಗೇರ ನೇತೃತ್ವದ ಬಿಜೆಪಿಗರ ತಂಡ ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದಿದ್ದಾರೆ.
0 comments:
Post a Comment