ನವದೆಹಲಿ, ಆಗಸ್ಟ್ 15, 2021 (ಕರಾವಳಿ ಟೈಮ್ಸ್) : ಅಧಿಕಾರಕ್ಕೇರಿದ ಏಳೂ ವರ್ಷಗಳಿಂದಲೂ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲೂ ಹೇಳಿದ್ದನ್ನೇ ಹೇಳುವ ಮೂಲಕ ಕೇವಲ ಭರವಸೆ ನೀಡುತ್ತಾರೆಯೇ ಹೊರತು ಯಾವುದನ್ನು ಸಮರ್ಪಕ ಜಾರಿಗೆ ಪ್ರಯತ್ನವನ್ನೇ ಮಾಡಿಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ, ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜನ ಖರ್ಗೆ ಕುಟುಕಿದ್ದಾರೆ.
ಸ್ವಾಂತಂತ್ರ ಅಮೃತ ಮಹೋತ್ಸವದ ದಿನ ಪ್ರಧಾನಿಗಳು ಮಾಡಿದ ಭಾಷಣದ ಬಗ್ಗೆ ಪ್ರತಿಕ್ರಯಿಸಿದ ಅವರು ಪ್ರಧಾನಿ ಮೋದಿ ಹೇಳುವುದು ಒಂದು ಮಾಡುವುದು ಮತ್ತೊಂದು ಎಂಬಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ರೈತರ ಭವಿಷ್ಯಕ್ಕೆ ಹಾನಿಯಾಗುವ 3 ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಒತ್ತಾಯ ಮಾಡಿ ದೇಶದ ರೈತರು ಒಂದು ವರ್ಷದಿಂದ ನಿರಂತರವಾಗಿ ಪ್ರತಿಭಟನೆ ಮಾಡುತ್ತಿದ್ದರೂ ಮೋದಿ ಸರಕಾರ ಕ್ಯಾರೇ ಎನ್ನುತ್ತಿಲ್ಲ. ರೈತ ನಾಯಕರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವ ಯಾವುದೇ ಪ್ರಾಮಾಣಿಕ ಪ್ರಯತ್ನವನ್ನು ಪ್ರಧಾನಿ ಮಾಡಿಲ್ಲ. ಕೇವಲ ಘೋಷಣೆಗಳಿಂದ ಮಾತ್ರ ಜನರನ್ನು ಮರಳು ಮಾಡುವುದೇ ಮೋದಿ ಸರಕಾರದ ನೀತಿಗಳು ಅಡಗಿದಂತಿದೆ ಎಂದು ಖರ್ಗೆ ಟೀಕಿಸಿದ್ದಾರೆ.
ಕಳೆದ 7 ವರ್ಷಗಳಿಂದ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಹಿಂದೆ ಹೇಳಿದ ವಿಷಯಗಳನ್ನು ಮತ್ತೆ, ಮತ್ತೆ ಪ್ರಸ್ತಾಪ ಮಾಡುತ್ತಿದ್ದಾರೆ. ದುರ್ಬಲ ವರ್ಗಗಳಿಗೆ ಮತ್ತು ಸಣ್ಣ ರೈತ ಕುಟುಂಬಗಳಿಗೆ ಅನುಕೂಲವಾಗುವಂತಹ ಯಾವುದೇ ಹೊಸ ಯೋಜನೆಗಳನ್ನು ಜಾರಿಗೆ ತಂದಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಝಾಡಿಸಿದ್ದಾರೆ.
0 comments:
Post a Comment