ಬಂಟ್ವಾಳ, ಆಗಸ್ಟ್ 27, 2021 (ಕರಾವಳಿ ಟೈಮ್ಸ್) : ಬಿಜೆಪಿ ರೈತ ಮೋರ್ಚಾ ಸಮಾವೇಶದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಅವರು ರೈತರನ್ನು ದಂಧೆಕೋರರು ಎಂಬ ಪದ ಬಳಕೆ ಮಾಡುವ ಮೂಲಕ ರೈತರನ್ನು ಅವಮಾನಿಸಿದ್ದಾರೆ. ಇದು ಅತ್ಯಂತ ಖಂಡನೀಯವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಮೋಹನ್ ಗೌಡ ಕಲ್ಮಿಂಜ ಎಂದಿದ್ದಾರೆ.
ಬಿ ಸಿ ರೋಡಿನ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ಕೃಷಿ ಕಾಯ್ದೆ ವಿರೋಧಿಸಿ ಕಳೆದೊಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿರುವ ರೈತರ ಬಗ್ಗೆ ಇದುವರೆಗೆ ಕೇಂದ್ರ ಸರಕಾರ ಯಾವುದೇ ಸ್ಪಂದನೆ ನೀಡಿಲ್ಲ ಎಂದವರು ಟೀಕಿಸಿದರು.
ಅದಾನಿ ಕಂಪೆನಿಯ ಹೈ ಪವರ್ ವಿದ್ಯುತ್ ಲೈನ್ ಸಂಪರ್ಕ ಬಂಟ್ವಾಳ ತಾಲೂಕಿನ ಕೃಷಿ ಭೂಮಿಗಳ ಮೇಲೆ ಹಾದು ಹೋದರೆ ಅನೇಕ ಕೃಷಿಕರ ಜೀವನ ನರಕವಾಗಲಿದ್ದು, ಈ ಬಗ್ಗೆ ಬಂಟ್ವಾಳ ಶಾಸಕರು ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ ಅವರು ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ, ಅಗತ್ಯ ಬಿದ್ದರೆ ಕೇರಳ ಸರಕಾರ ವಿರುದ್ಧವು ಹೋರಾಟಕ್ಕೆ ಸಿದ್ದ ಎಂದವರು ಹೇಳಿದರು.
ಬಂಟ್ವಾಳ ತಾಲೂಕಿನ 6 ಗ್ರಾಮಗಳಲ್ಲಿ ವಿದ್ಯುತ್ ಹೈಟೆನ್ಶೆನ್ ತಂತಿ ಹಾದುಹೋಗಲಿದ್ದು, ಈಗಾಗಲೇ ಸಮಾನ ಮನಸ್ಕ ಸಂಘಟನೆ ಹಾಗೂ ರೈತರ ಜೊತೆ ಸೇರಿ ಕಾಂಗ್ರೆಸ್ ಕಿಸಾನ್ ಘಟಕವು ಪ್ರತಿಭಟನೆಯಲ್ಲಿ ಭಾಗಿಯಾಗಿದೆ ಎಂದ ಮೋಹನ್ ಗೌಡ ರೈತರ ಹಿತ ಕಾಪಾಡಲು ಕಾಂಗ್ರೆಸ್ ಸರಕಾರ ಮಾತ್ರ ಬದ್ದವಾಗಿದೆ ಎಂದರು.
ಮಾಜಿ ಸಚಿವ ಬಿ ರಮಾನಾಥ ರೈ ಅವರ ಮಾರ್ಗದರ್ಶನದಲ್ಲಿ ಸಭೆ ಸೇರಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲಾಗುವುದಲ್ಲದೆ ನ್ಯಾಯಾಲಯದ ಮೊರೆ ಹೋಗಲು ಯೋಚಿಸಲಾಗುವುದು ಎಂದ ಅವರು ಪ್ರಗತಿಪರ ಕೃಷಿಕ ಎಂದೇಳಿಕೊಳ್ಳುತ್ತಿರುವ ಶಾಸಕ ರಾಜೇಶ್ ನಾಯ್ಕ್ ಈ ವಿಚಾರದಲ್ಲಿ ಮತ್ತು ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಮಸೂದೆಯನ್ನು ವಿರೋಧ ಮಾಡಿ ನಮ್ಮ ಜೊತೆ ಹೋರಾಟದಲ್ಲಿ ಭಾಗಿಯಾಗಬೇಕು ಎಂದು ಸವಾಲೆಸೆದರು.
ಈ ಸಂದರ್ಭ ನಿಕಟಪೂರ್ವ ಜಿ ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಕಿಸಾನ್ ಘಟಕದ ಪ್ರಮುಖರಾದ ಸದಾನಂದ ಶೆಟ್ಟಿ, ಸೋಮೇಶೇಖರ್ ಗೌಡ, ಪುಸರಭಾ ಸದಸ್ಯ ಜನಾರ್ದನ ಚೆಂಡ್ತಿಮಾರ್, ಹಿರಿಯ ಕಾಂಗ್ರೆಸ್ಸಿಗ ವೆಂಕಪ್ಪ ಪೂಜಾರಿ ಜೊತೆಗಿದ್ದರು.
0 comments:
Post a Comment