ಬಂಗ್ಲೆಗುಡ್ಡೆ ಸರಕಾರಿ ಇಲಾಖೆಗಳ ಜಮೀನು-ಕಂಪೌಂಡ್ ಗೊಂದಲ : ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಸೂಚಿಸಿದ ಶಾಸಕ ರಾಜೇಶ್ ನಾಯಕ್ - Karavali Times ಬಂಗ್ಲೆಗುಡ್ಡೆ ಸರಕಾರಿ ಇಲಾಖೆಗಳ ಜಮೀನು-ಕಂಪೌಂಡ್ ಗೊಂದಲ : ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಸೂಚಿಸಿದ ಶಾಸಕ ರಾಜೇಶ್ ನಾಯಕ್ - Karavali Times

728x90

3 January 2022

ಬಂಗ್ಲೆಗುಡ್ಡೆ ಸರಕಾರಿ ಇಲಾಖೆಗಳ ಜಮೀನು-ಕಂಪೌಂಡ್ ಗೊಂದಲ : ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಸೂಚಿಸಿದ ಶಾಸಕ ರಾಜೇಶ್ ನಾಯಕ್

ಬಂಟ್ವಾಳ, ಜನವರಿ 03, 2022 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಸಮೀಪದ ಬಂಗ್ಲೆಗುಡ್ಡೆ ಬಳಿ ಸರಕಾರಿ ಇಲಾಖೆಗಳ ಸಮೂಹ ಕಟ್ಟಡ ಇರುವ ಸರಕಾರಿ ಜಮೀನಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ನಿರ್ದೇಶನದ ಮೇರೆಗೆ ನಿರ್ಮಿಸಲಾಗುತ್ತಿರುವ ಆವರಣ ಗೋಡೆ ಕಾಮಗಾರಿ ಬಳಿಕ ಇಲ್ಲಿನ ಅಂಗನವಾಡಿ ಕೇಂದ್ರ ಸಹಿತ ಇತರ ಇಲಾಖೆಗಳ ನಡುವೆ ಏರ್ಪಟ್ಟ ಗೊಂದಲದ ಪರಿಸ್ಥಿತಿಯನ್ನು ಸೋಮವಾರ ಖುದ್ದು ಶಾಸಕ ಯು ರಾಜೇಶ್ ನಾಯಕ್ ಅವರು ಭೇಟಿ ನೀಡಿ ಪರಿಶೀಲಿಸಿ ತಾತ್ಕಾಲಿಕ ಪರಿಹಾರ ಕಂಡುಕೊಂಡರು. 

ಸ್ಥಳಕ್ಕೆ ಸೋಮವಾರ ಭೇಟಿ ನೀಡಿದ ಶಾಸಕ ರಾಜೇಶ್ ನಾಯಕ್ ಅವರು ಬಂಟ್ವಾಳ ತಹಶೀಲ್ದಾರ್ ಸಹಿತ ಇಲ್ಲಿನ ಎಲ್ಲಾ ಸರಕಾರಿ ಇಲಾಖಾ ಕಟ್ಟಡಗಳ ಇಲಾಖಾ ತಾಲೂಕು ಮಟ್ಟದ ಅಧಿಕಾರಿಗಳನ್ನು ಕರೆಸಿ ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ ಸಮನ್ವಯತೆ ಹಾಗೂ ಮಾನವೀಯತೆ ಮುಂದಿಟ್ಟುಕೊಂಡು ಕಾರ್ಯನಿರ್ವಹಿಸುವಂತೆ ತಾಕೀತು ಮಾಡಿದರು. 

ಬಳಿಕ ಸದ್ಯ ಮಂಜೂರಾಗಿರುವ ಜಮೀನಿನ ನಕ್ಷೆಯನ್ನು ತಿದ್ದುಪಡಿ ಮಾಡಿ ಪರಿಷೃತ ಆದೇಶ ಮಾಡುವ ನಿಟ್ಟಿನಲ್ಲಿ ಇಲಾಖಾ ಕ್ರಮದಂತೆ ಕೈಗೊಳ್ಳಲು ತಾಲೂಕು ತಹಶೀಲ್ದಾರ್ ರಶ್ಮಿ ಎಸ್ ಆರ್ ಅವರಿಗೆ ಸೂಚಿಸಿದ ಶಾಸಕ ನಾಯಕ್ ಎಲ್ಲಾ ಇಲಾಖಾ ಕಟ್ಟಡಗಳಿಗೂ ಬೇಕಾದ ಸಹಕಾರವನ್ನು ಶಾಸಕನ ನೆಲೆಯಲ್ಲಿ ನೀಡುವುದಾಗಿ ಇದೇ ವೇಳೆ ಭರವಸೆ ನೀಡಿದರು. 

ಬಂಟ್ವಾಳ ಪುರಸಭೆಯ ವಾರ್ಡ್ ಸಂಖ್ಯೆ 24 ರ ವ್ಯಾಪ್ತಿಗೆ ಬರುವ ಬಂಟ್ವಾಳ ತಾಲೂಕು ಪಾಣೆಮಂಗಳೂರು ಗ್ರಾಮದ ಸರ್ವೆ ನಂಬ್ರ 29-3ಎಪಿ1 ರಲ್ಲಿ 0.25 ಎಕ್ರೆ ಜಮೀನು ಬಿಸಿಎಂ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯಕ್ಕಾಗಿ ಮಂಜೂರು ಆಗಿರುತ್ತದೆ. ಪ್ರಕೃತ ಸದ್ರಿ ಇಲಾಖೆಯವರು ಇಲಾಖೆಗೆ ಮಂಜೂರುಗೊಂಡಿರುವ ಸ್ಥಳಕ್ಕೆ ಕಂಪೌಂಡ್ ನಿರ್ಮಿಸುವ ಬಗ್ಗೆ ಕಾಮಗಾರಿ ಆರಂಭಿಸುವ ಹಂತದಲ್ಲಿದ್ದು, ಸದ್ರಿ ಇಲಾಖೆಯವರು ಈ ಜಾಗದಲ್ಲಿ ಕಂಪೌಂಡ್ ನಿರ್ಮಿಸಿದೇ ಆದಲ್ಲಿ ಇದೇ ಜಮೀನಿಗೆ ಹೊಂದಿಕೊಂಡು ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರ, ಹಾಗೂ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‍ಗೂ ಬಹಳಷ್ಟು ತೊಂದರೆ ಆಗುತ್ತಿದೆ. ಅಂಗನವಾಡಿ ಕೇಂದ್ರಕ್ಕೆ ಆಹಾರ ಸಾಮಾಗ್ರಿ ಸಾಗಾಟ ಮಾಡುವರೇ, ಪುಟಾಣಿ ಮಕ್ಕಳನ್ನು ಪೋಷಕರು ಕರೆ ತರುವ ದಾರಿಗೂ ಅನಾನುಕೂಲವಾಗುತ್ತದೆ. ಈ ಬಗ್ಗೆ ಪರಿಶೀಲನೆ ನಡೆಸಿ ಬಿಸಿಎಂ ಇಲಾಖೆಗೆ ಮಂಜೂರುಗೊಂಡಿರುವ ಜಮೀನಿನ ನಕ್ಷೆಯನ್ನು ತಿದ್ದುಪಡಿ ಮಾಡಿ ಪರಿಷ್ಕøತ ಆದೇಶ ಮಾಡಿ ಅಂಗನವಾಡಿ ಕೇಂದ್ರಕ್ಕೆ ಹೊಂದಿಕೊಂಡಿರುವ ಜಾಗವನ್ನು ಅಂಗನವಾಡಿ ಕೇಂದ್ರಕ್ಕೆ ಸಂಬಂಧಪಟ್ಟ ಇಲಾಖೆಗೆ ಮಂಜೂರು ಮಾಡಿ ಸದ್ರಿ ಜಾಗ ಅಂಗನವಾಡಿ ಕೇಂದ್ರದ ಅನುಕೂಲಕ್ಕಾಗಿ ದೊರೆಯುವಂತೆ ಕ್ರಮ ಕೈಗೊಂಡು ಪರಿಷ್ಕøತ ಆದೇಶ ಮಾಡುವಂತೆ ಎಂದು ಸ್ಥಳೀಯ ಪುರಸಭಾ ಕೌನ್ಸಿಲರ್ ಅಬೂಬಕ್ಕರ್ ಸಿದ್ದೀಕ್ ಅವರು ಶಾಸಕರು ಹಾಗೂ ಜಿಲ್ಲಾಧಿಕಾರಿಗೆ ಲಿಖಿತವಾಗಿ ಕೋರಿದ್ದರು. 

ಕೌನ್ಸಿಲರ್ ಸಿದ್ದೀಕ್ ಅವರ ಕೋರಿಕೆಗೆ ಮನ್ನಣೆ ನೀಡಿದ ಶಾಸಕ ರಾಜೇಶ್ ನಾಯಕ್ ಅವರು ಅಂಗನವಾಡಿಗೆ ಲಗ್ತಿ ಇರುವ ಜಾಗವನ್ನು ಅಂಗನವಾಡಿ ಕೇಂದ್ರಕ್ಕೇ ದಕ್ಕುವಂತೆ ಪರಿಷ್ಕøತ ಮಂಜೂರಾತಿ ಆದೇಶಕ್ಕೆ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲೇ ತಹಶೀಲ್ದಾರ್ ರಶ್ಮಿ ಅವರಿಗೆ ಸೂಚಿಸಿದರು. 

ಬಂಟ್ವಾಳ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಗ್ರಾಮದ ಬಂಗ್ಲೆಗುಡ್ಡೆಯಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಪರಿಶಿಷ್ಟ ಜಾತಿ ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್ ಕಟ್ಟಡ, ದೇವರಾಜು ಅರಸು ಹಿಂದುಳಿದ ವರ್ಗಗಳ ಇಲಾಖೆಗೆ ಸೇರಿದ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್ ಕಟ್ಟಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೇರಿದ ಅಂಗನವಾಡಿ ಕಟ್ಟಡ ಹಾಗೂ ಆರೋಗ್ಯ ಇಲಾಖೆಗೆ ಸೇರಿದ ದಾದಿಯರ ಕೇಂದ್ರ ಮೊದಲಾದ ಸರಕಾರಿ ಇಲಾಖೆಗಳ ಸಮೂಹ ಕಟ್ಟಡ ಒಂದೆಡೆ ಸರಕಾರಿ ಜಮೀನಿನಲ್ಲಿ ಕಾರ್ಯಾಚರಿಸುತ್ತಿದೆ. ಈ ಎಲ್ಲಾ ಇಲಾಖೆಗಳ ಕಟ್ಟಡಗಳಿಗೆ ಯಾವುದೇ ಪ್ರತ್ಯೇಕ ಕಂಪೌಂಡ್ ಇಲ್ಲದೆ ಇದ್ದು, ಈ ಹಿನ್ನಲೆಯಲ್ಲಿ ಬುಧವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಂಟ್ವಾಳ ತಾಲೂಕು ಅಧಿಕಾರಿ ತಮ್ಮ ಇಲಾಖೆಯ ಒಂದೇ ಕಟ್ಟಡಕ್ಕೆ ಸೀಮಿತಗೊಂಡಂತೆ ಕಂಪೌಂಡ್ ಕಟ್ಟಲು ಮುಂದಾಗುತ್ತಿದ್ದಂತೆ ಸ್ಥಳೀಯವಾಗಿ ಸಮಸ್ಯೆ ಹಾಗೂ ಗೊಂದಲ ಏರ್ಪಟ್ಟಿತ್ತು. ಈ ಬಗ್ಗೆ ಅಂಗನವಡಿ ಕೇಂದ್ರದ ಸಿಬ್ಬಂದಿಗಳ ಅಹವಾಲಿನಂತೆ ಕೌನ್ಸಿಲರ್ ಸಿದ್ದೀಕ್ ಅವರು ಮಧ್ಯಪ್ರವೇಶಿಸಿ ಸಮಸ್ಯೆ ಪರಿಹಾರಕ್ಕಾಗಿ ಶಾಸಕರನ್ನು ಕೋರಿದ ಹಿನ್ನಲೆಯಲ್ಲಿ ಶಾಸಕರು ಭೇಟಿ ಇದೀಗ ಜಟಿಲ ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ.

ಇದೇ ವೇಳೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲಿಗೆ ಎರಡನೇ ಮಹಡಿ ಕಟ್ಟಡ ನಿರ್ಮಾಣಕ್ಕೆ ಅಧಿಕಾರಿ ಬಿಂದಿಯಾ ಅವರು ಶಾಸಕರೊಂದಿಗೆ ಮನವಿ ಸಲ್ಲಿಸಿದ್ದು, ಶಾಸಕರು ತಕ್ಷಣ ಒದಗಿಸುವ ಭರವಸೆ ನೀಡಿದ್ದಾರೆ. ಬಳಿಕ ಹಿಂದುಳಿದ ವರ್ಗದ ಬಾಲಕಿಯರ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಬಾಲಕಿಯ ಹಾಸ್ಟೆಲಿಗೂ ಭೇಟಿ ನೀಡಿದ ಶಾಸಕರು ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದರು. ಅಂಗನವಾಡಿ ಕೇಂದ್ರಕ್ಕೂ ಭೇಟಿ ನೀಡಿ ಅಲ್ಲಿನ ಪುಟಾಣಿ ಮಕ್ಕಳೊಂದಿಗೆ ಕೆಲ ಸಮಯ ಕಳೆದರು.  

ಈ ಸಂದರ್ಭ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ತಾಲೂಕು ತಹಶೀಲ್ದಾರ್ ರಶ್ಮಿ ಎಸ್ ಆರ್, ಪ್ರಭಾರ ಕಂದಾಯ ನಿರೀಕ್ಷಕ ಧರ್ಮ ಸಾಮ್ರಾಜ್, ಬಿಸಿಎಂ ಇಲಾಖೆಯ ತಾಲೂಕು ಅಧಿಕಾರಿ ಶ್ರೀಮತಿ ಬಿಂದಿಯಾ, ಹಾಸ್ಟೆಲ್ ನಿರ್ವಾಹಕಿ ಭವಾನಿ, ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಜಯಶ್ರೀ, ಹಾಸ್ಟೆಲ್ ವಾರ್ಡನ್ ಪ್ರಮೀಳಾ, ಶಿಶು ಅಭಿವೃದ್ದಿ ಇಲಾಖಾಧಿಕಾರಿ ಗಾಯತ್ರಿ ಕಂಬಳಿ, ಪಾಣೆಮಂಗಳೂರು ಗ್ರಾಮಕರಣಿಕೆ ವಿಜೇತಾ, ಗ್ರಾಮ ಸಹಾಯಕಿ ಯಶೋದಾ, ಅಂಗನವಾಡಿ ಕಾರ್ಯಕರ್ತೆ ಪ್ರೇಮಾ, ಸಹಾಯಕಿ ಜ್ಯೋತಿ ಮೊದಲಾದವರು ಜೊತೆಗಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಬಂಗ್ಲೆಗುಡ್ಡೆ ಸರಕಾರಿ ಇಲಾಖೆಗಳ ಜಮೀನು-ಕಂಪೌಂಡ್ ಗೊಂದಲ : ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಸೂಚಿಸಿದ ಶಾಸಕ ರಾಜೇಶ್ ನಾಯಕ್ Rating: 5 Reviewed By: karavali Times
Scroll to Top