ಪುತ್ತೂರು ಮನೆಯಂಗಳಕ್ಕೆ ಪ್ರವೇಶೀಸಿ ಯುವತಿಯ ಹತ್ಯೆ ಪ್ರಕರಣ : ಆರೋಪಿ ಬಂಧಿಸಿದ ಸಂಪ್ಯ ಪೊಲೀಸರು - Karavali Times ಪುತ್ತೂರು ಮನೆಯಂಗಳಕ್ಕೆ ಪ್ರವೇಶೀಸಿ ಯುವತಿಯ ಹತ್ಯೆ ಪ್ರಕರಣ : ಆರೋಪಿ ಬಂಧಿಸಿದ ಸಂಪ್ಯ ಪೊಲೀಸರು - Karavali Times

728x90

18 January 2023

ಪುತ್ತೂರು ಮನೆಯಂಗಳಕ್ಕೆ ಪ್ರವೇಶೀಸಿ ಯುವತಿಯ ಹತ್ಯೆ ಪ್ರಕರಣ : ಆರೋಪಿ ಬಂಧಿಸಿದ ಸಂಪ್ಯ ಪೊಲೀಸರು

ಪುತ್ತೂರು, ಜನವರಿ 18, 2023 (ಕರಾವಳಿ ಟೈಮ್ಸ್) : ಪುತ್ತೂರು ತಾಲೂಕು ಮುಂಡೂರು ಗ್ರಾಮದ ಕಂಪ ನಿವಾಸಿ ದಿವಂಗತ ಗುರುವ ಹಾಗೂ ಶ್ರೀಮತಿ ಗಿರಿಜಾ ದಂಪತಿಯ ಪುತ್ರಿ ಜಯಶ್ರೀ (23) ಎಂಬ ಯುವತಿಯನ್ನು ಮನೆಯಂಗಳಕ್ಕೆ ಪ್ರವೇಶಿಸಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪುತ್ತೂರು ಗ್ರಾಮಾಂತರ ಪೊಲೀಸರು ಆರೋಪಿ ಸುಳ್ಯ ತಾಲೂಕು, ಕಮಕಮಜಲು ಗ್ರಾಮದ ಮುಗೇರು ನಿವಾಸಿ ಅಂಗಾರ ಅವರ ಪುತ್ರ ಉಮೇಶ (24) ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 


ಮೃತ ಜಯಶ್ರೀ ಬಿಎಸ್ಸಿ ಪದವಿ ಮುಗಿಸಿ ಮನೆಯಲ್ಲೇ ಇದ್ದಳು. ಮಂಗಳವಾರ (ಜ 17) ಜಯಶ್ರೀ ತಾಯಿ ಗಿರಿಜಾ ತನ್ನ ತೋಟಕ್ಕೆ ತೆರಳಿದ್ದ ವೇಳೆ ಜಯಶ್ರೀ ಒಬ್ಬಳೇ ಮನೆಯಲ್ಲಿದ್ದಳು. ಈ ವೇಳೆ ಮನೆಗೆ ಪ್ರವೇಶಿಸಿದ ದುಷ್ಕರ್ಮಿ ಯಾವುದೇ ಆಯುಧದಿಂದ ಜಯಶ್ರೀ ಮೇಲೆ ದಾಳಿ ನಡೆಸಿ ಪರಾರಿಯಾಗಿದ್ದಾನೆ. ಗಂಭೀರ ಗಾಯಗೊಂಡ ಜಯಶ್ರೀ ತೋಟದಲ್ಲಿದ್ದ ತಾಯಿ ಬಳಿ ಓಡಿ ಬಂದಿದ್ದು, ತಾಯಿ ಗಿರಿಜಾ ಅವರು ತಕ್ಷಣ ಅಟೋ ರಿಕ್ಷಾದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಸಾಗಿಸಿದರಾದರೂ ಅದಾಗಲೇ ಜಯಶ್ರೀ ಮೃತಪಟ್ಟಿದ್ದಾಳೆ ಎನ್ನಲಾಗಿದೆ. 


ಜಯಶ್ರೀಯನ್ನು ಕನಕಮಜಲಿನ ಉಮೇಶ ಎಂಬಾತ ಕೆಲವು ಸಮಯದಿಂದ ಪ್ರೀತಿಸುತ್ತಿದ್ದು, ಆತ ಆಗ್ಗಾಗ್ಗೆ ಗಿರಿಜಾರವರ ಮನೆಗೂ ಬರುತ್ತಿದ್ದನು. ಆದರೆ ಇತ್ತೀಚೆಗೆ ಅವನ ಗುಣ ನಡತೆ  ಜಯಶ್ರೀಗೆ ಇಷ್ಟವಾಗದ ಕಾರಣ 2022ರ ನವೆಂಬರ್ ವೇಳೆಗೆ ಜಯಶ್ರೀ ಉಮೇಶನನ್ನು ದೂರ ಮಾಡಿರುತ್ತಾಳೆ. ಈ ವಿಷಯದಲ್ಲಿ ಸದ್ರಿ ಉಮೇಶನು ಅಸಮಾಧಾನದಿಂದ ಇದ್ದ. ಉಮೇಶನೇ ಜಯಶ್ರೀಯನ್ನು ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಶಂಕಿಸಿರುವ ಜಯಶ್ರೀ ತಾಯಿ ಗಿರಿಜಾ ಅವರು ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು. 

ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬುಧವಾರ (ಜ 18) ಬೆಳಿಗ್ಗೆ ಬಂಧಿಸಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯು ಕೃತ್ಯಕ್ಕೆ ಬಳಸಿದ ಆಯುಧ, ಕೊಲೆ ಮಾಡಿದ ಸ್ಥಳಕ್ಕೆ ಬರಲು ಬಳಸಿದ ಸ್ಕೂಟರ್ ಮತ್ತು ಇತರ ಸೊತ್ತುಗಳನ್ನು ಸದ್ರಿ ಆರೋಪಿಯಿಂದ ಸ್ವಾಧೀನಪಡಿಸಿಕೊಂಡಿರುತ್ತಾರೆ.

ಜಿಲ್ಲಾ ಎಸ್ಪಿ ಋಷಿಕೇಶ್ ಸೋನಾವಣೆ ಭಗವಾನ್, ಎಡಿಶನಲ್ ಎಸ್ಪಿ ಧರ್ಮಪ್ಪ ಎನ್ ಎಂ, ಪುತ್ತೂರು ಎಎಸ್ಪಿ ಡಾ ವೀರಯ್ಯ ಹಿರೇಮಠ್ ಅವರ ಮಾರ್ಗದರ್ಶನ ಮತ್ತು ನಿರ್ದೇಶನದಂತೆ ಪುತ್ತೂರು ಗ್ರಾಮಾಂತರ ಪೆÇಲೀಸ್ ವೃತ್ತ ನಿರೀಕ್ಷಕ ರವಿ ಬಿ ಎಸ್ ಅವರು ಮತ್ತು ಪುತ್ತೂರು ಗ್ರಾಮಾಂತರ ಠಾಣಾ ಪಿಎಸ್ಸೈ ಉದಯರವಿ ಎಂ ವೈ, ಎಎಸ್ಸೈ ಮುರುಗೇಶ್, ಸಿಬ್ಬಂದಿಗಳಾದ ಪ್ರವೀಣ ರೈ, ಹರೀಶ್ ಜಿ ಎನ್, ಅದ್ರಾಮ, ಧರ್ಣಪ್ಪ, ಸಲೀಂ,  ಶಿವಾನಂದ, ದೇವರಾಜ್, ಸತೀಶ್, ವರ್ಗೀಸ್, ಹರ್ಷಿತ್, ಗಿರೀಶ್ ರೈ, ಸದ್ದಾಂ, ಹರೀಶ್ ನಾಯ್ಕ್ ಬಿ, ನಿತಿನ್ ಕುಮಾರ್, ಅಡಿವೆಪ್ಪ ಸಂಗೊಳ್ಳಿ, ಲೋಕೇಶ್,  ಗಾಯತ್ರಿ-ಅವರನ್ನೊಳಗೊಂಡ ತಂಡವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. 

  • Blogger Comments
  • Facebook Comments

0 comments:

Post a Comment

Item Reviewed: ಪುತ್ತೂರು ಮನೆಯಂಗಳಕ್ಕೆ ಪ್ರವೇಶೀಸಿ ಯುವತಿಯ ಹತ್ಯೆ ಪ್ರಕರಣ : ಆರೋಪಿ ಬಂಧಿಸಿದ ಸಂಪ್ಯ ಪೊಲೀಸರು Rating: 5 Reviewed By: karavali Times
Scroll to Top