ಅಂಕಪಟ್ಟಿಯಲ್ಲಿ ಅಗ್ರಪಟ್ಟಕ್ಕೇರಿದ ಮುಂಬೈ
ಅಬುಧಾಬಿ, ಅ. 07, 2020 (ಕರಾವಳಿ ಟೈಮ್ಸ್) : ಆಲ್ರೌಂಡರ್ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್ ತಂಡ ಇಲ್ಲಿನ ಮೈದಾನದಲ್ಲಿ ಮಂಗಳವಾರ ರಾತ್ರಿ ನಡೆದ ಐಪಿಎಲ್ ಪಂದ್ಯಾಟದಲ್ಲಿ ರಾಜಸ್ಥಾನ ತಂಡವನ್ನು 57 ರನ್ಗಳಿಂದ ಪರಾಭವಗೊಳಿಸುವ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಸೂರ್ಯಕುಮಾರ್ ಯಾದವ್ ಅವರ ಭರ್ಜರಿ ಬ್ಯಾಟಿಂಗಿನಿಂದ ನಿಗದಿತ 20 ಓವರಿನಲ್ಲಿ 192 ಗಳಿಸಿ ರಾಜಸ್ಥಾನ್ ರಾಯಲ್ಸ್ಗೆ 193 ರನ್ಗಳ ಗುರಿ ನೀಡಿತು. ಗುರಿ ಬೆನ್ನತ್ತಿದ್ದ ರಾಜಸ್ಥಾನ್ ತಂಡ ಮುಂಬೈ ಬೌಲರ್ಗಳ ನಿಖರ ದಾಳಿಗೆ ನಲುಗಿ 18.1 ಓವರಿನಲ್ಲಿ 136 ರನ್ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಮುಕ್ತಾಯಗೊಳಿಸಿತು.
ಇನ್ನಿಂಗ್ಸ್ನ ಮೊದಲ ಓವರಿನಿಂದಲೇ ಮುಂಬೈ ಬೌಲರ್ಗಳು ಮೇಲುಗೈ ಸಾಧಿಸಿದರು. ಟ್ರೆಂಟ್ ಬೌಲ್ಟ್ ನಾಲ್ಕು ಓವರ್ಗಳಲ್ಲಿ 26 ರನ್ ನೀಡಿ 2 ವಿಕೆಟ್ ಕಬಳಿಸಿದರೆ, ಜಸ್ಪ್ರೀತ್ ಬುಮ್ರಾ 4 ಓವರ್ಗಳಲ್ಲಿ 20 ರನ್ ನೀಡಿ 4 ವಿಕೆಟ್ ಕಿತ್ತರು. ಜೇಮ್ಸ್ ಪ್ಯಾಟಿನ್ಸನ್ 2, ಕೀರನ್ ಪೆÇಲಾರ್ಡ್ ಮತ್ತು ರಾಹುಲ್ ಚಾಹರ್ ತಲಾ 1 ವಿಕೆಟ್ ಉರುಳಿಸಿ ರಾಜಸ್ಥಾನ ತಂಡವನ್ನು ಕಟ್ಟಿ ಹಾಕಿದರು.
ದೊಡ್ಡ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಶೂನ್ಯಕ್ಕೆ ಔಟಾಗಿ ಪೆವಿಲಿಯನ್ ಸೇರಿದರು. ನಂತರ ದಾಳಿಗಿಳಿದ ಜಸ್ಪ್ರೀತ್ ಬುಮ್ರಾ ಆರು ರನ್ ಗಳಿಸಿದ ನಾಯಕ ಸ್ಟೀವ್ ಸ್ಮಿತ್ ಅವರನ್ನು ಇನ್ ಸ್ವಿಂಗ್ ಬೌಲ್ ಮೂಲಕ ಔಟ್ ಮಾಡಿದರು. ಬಳಿಕ ಬಂದ ಸಂಜು ಸ್ಯಾಮ್ಸನ್ ಅವರನ್ನು ಶೂನ್ಯಕ್ಕೆ ಬೌಲ್ಟ್ ಬಲಿ ಪಡೆದರು. ನಂತರ ಬಟ್ಲರ್ ಮತ್ತು ಮಹಿಪಾಲ್ ಲೋಮರ್ ತಾಳ್ಮೆಯ ಆಟಕ್ಕೆ ಮುಂದಾದರು. ದೊಡ್ಡ ಮೊತ್ತ ಬೆನ್ನಟ್ಟುವಲ್ಲಿ ಆರಂಭದಲ್ಲೇ ಎಡವಿದ ರಾಜಸ್ಥಾನ್ ತಂಡ ಪವರ್ ಪ್ಲೇ ಮುಕ್ತಾಯಕ್ಕೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಕೇವಲ 31 ರನ್ ಗಳಿಸಿತ್ತು.
ನಂತರ ಬಟ್ಲರ್ ಮತ್ತು ಲೋಮರ್ ಸೇರಿಕೊಂಡು ಉತ್ತಮ ಜೊತೆಯಾಟವಾಡುವ ಮುನ್ಸೂಚನೆ ನೀಡಿದರು. ಆದರೆ 8ನೇ ಓವರಿನ ಮೊದಲನೇ ಬಾಲಿನಲ್ಲಿ ಮಹಿಪಾಲ್ ಲೋಮರ್ ಬದಲಿ ಆಟಗಾರ ಅನುಕುಲ್ ರಾಯ್ ಹಿಡಿದ ಉತ್ತಮ ಕ್ಯಾಚಿಗೆ ಬಲಿಯಾಗಿ ಹೊರನಡೆದರು. ಈ ನಡುವೆ ಆರಂಭದಿಂದ ಉತ್ತಮವಾಗಿ ಆಡಿಕೊಂಡು ಬಂದ ಜೋಸ್ ಬಟ್ಲರ್ ಅವರು 34 ಎಸೆತದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು.
70 ರನ್ ಗಳಿಸಿ ಆಕ್ರಮಣಕಾರಿಯಾಗಿ ಆಡುತ್ತಿದ್ದ ಬಟ್ಲರ್ ಅವರು ಕೀರನ್ ಪೆÇಲಾರ್ಡ್ ಅವರು ಹಿಡಿದ ಅತ್ಯುತ್ತಮ ಕ್ಯಾಚಿಗೆ ಬಲಿಯಾದರು. ಈ ಮೂಲಕ 44 ಬಾಲಿಗೆ ಐದು ಸಿಕ್ಸರ್ ಮತ್ತು 4 ಫೆÇೀರ್ ಸಮೇತ 70 ರನ್ ಸಿಡಿಸಿ ಪ್ಯಾಟಿನ್ಸನ್ ಅವರಿಗೆ ವಿಕೆಟ್ ಒಪ್ಪಿಸಿದರು. ನಂತರ 14ನೇ ಓವರಿನಲ್ಲಿ ಟಾಮ್ ಕುರ್ರನ್ ಅವರು ಪೆÇಲಾರ್ಡ್ ಬೌಲಿಂಗ್ಗೆ ಕ್ಯಾಚ್ ನೀಡಿದರು. ರಾಹುಲ್ ಟಿವಾಟಿಯಾ ಅವರು ಬುಮ್ರಾಗೆ ಬೌಲ್ಡ್ ಆದರು. ನಂತರ ಬಂದ ಶ್ರೇಯಾಸ್ ಗೋಪಾಲ್ 1 ರನ್ ಹೊಡೆದು 15ನೇ ಓವರಿನಲ್ಲಿ ಕ್ಯಾಚ್ ನೀಡಿದರು. ನಂತರ ಒಂದೇ ಓವರಿನಲ್ಲಿ ಬುಮ್ರಾ ಅವರು ಜೋಫ್ರಾ ಆರ್ಚರ್ ಮತ್ತು ಅಂಕಿತ್ ರಾಜ್ಪೂತ್ ಅವರನ್ನು ಔಟ್ ಮಾಡಿ ಮುಂಬೈಗೆ ಅರ್ಹ ಜಯ ದೊರಕಿಸಿಕೊಟ್ಟರು.
0 comments:
Post a Comment