ಮಂಗಳೂರು, ಜುಲೈ 02, 2025 (ಕರಾವಳಿ ಟೈಮ್ಸ್) : ಇತ್ತೀಚೆಗಷ್ಟೆ ಕರಾವಳಿ ಜಿಲ್ಲೆಗಳ ಕೋಮು ಆಧಾರಿತ ಘಟನೆಗಳನ್ನು ಕೇಂದ್ರೀಕರಿಸಿ ಸ್ಥಾಪಿತಗೊಂಡಿರುವ ವಿಶೇಷ ಕಾರ್ಯಪಡೆಯ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ದಂಗೆ ನಿಯಂತ್ರಿಸುವ ಬಗ್ಗೆ ಆಂಟಿ ರಯಾಟ್ಸ್ ಗನ್ ಹಾಗೂ ಸ್ಟನ್ ಶೆಲ್ ಉಪಯೋಗಿಸುವ ಬಗ್ಗೆ ಪ್ರಾಯೋಗಿಕ ತರಬೇತಿ ಮತ್ತು ಗುಪ್ತಚರ ವಿಭಾಗ, ಕಾನೂನು ವಿಭಾಗದಲ್ಲಿಯೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ತಾಂತ್ರಿಕ ನಿಗಾವಹಿಸುವ ಕುರಿತು ವಿಶೇಷ ತರಬೇತಿ ಕಾರ್ಯಕ್ರಮ ಬುಧವಾರ ಮಂಗಳೂರು ನೆಹರೂ ಮೈದಾನದಲ್ಲಿ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲೆ ಸೇರಿ ಮೂರು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ, ಕೋಮು ಸೌಹರ್ದತೆ ಮತ್ತು ಶಾಂತಿ ವಾತವಾರಣವನ್ನು ಕಾಪಾಡುವ ದೃಷ್ಟಿಯಿಂದ ಇತ್ತೀಚೆಗೆ ಹೊಸದಾಗಿ ಸ್ಥಾಪನೆಯಾಗಿರುವ ವಿಶೇಷ ಕಾರ್ಯಪಡೆ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಉತ್ತಮ ಕಾರ್ಯಕ್ಷಮತೆಗಾಗಿ ಕೋಮು ಗಲಭೆಗಳ ಸಂಧರ್ಭಗಳಲಿ ಉದ್ರಿಕ್ತ ಜನ ಸಮೂಹವನ್ನು ಚದುರಿಸುವ ಸಲುವಾಗಿ ಉಪಯೋಗಿಸುವ ಆಂಟಿ ರಯಾಟ್ಸ್ ಗನ್ ಹಾಗೂ ಸ್ಟನ್ ಶೆಲ್ ಉಪಯೋಗಿಸುವ ಬಗ್ಗೆ ಈ ತರಬೇತಿ ಕಾರ್ಯ ಹಮ್ಮಿಕೊಳ್ಳಲಾಗಿದೆ.
ಈ ತರಬೇತಿ ಮತ್ತು ಪ್ರಾತ್ಯಕ್ಷಕೆಯಲ್ಲಿ ವಿಶೇಷ ಕಾರ್ಯಪಡೆ ಘಟಕದ ಕಾರ್ಯಾಚರಣಾ ವಿಭಾಗದ 95 ಮಂದಿ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು. ಅಲ್ಲದೇ ಗುಪ್ತಚರ ವಿಭಾಗದ ಕೆಲವು ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸುವ ಬಗ್ಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡಿಸುವ ದ್ವೇಷ ಭಾಷಣ ಮುಂತಾದ ಮಾಹಿತಿಗಳನ್ನು ಸಂಗ್ರಹಿಸುವ ಕುರಿತು ಪರಿಣಾಮಕಾರಿ ತರಬೇತಿಯನ್ನು ನೀಡಲಾಗಿದ್ದು, ವಿಶೇಷ ಕಾರ್ಯಪಡೆ ಕಾರ್ಯಪ್ರವೃತ್ತಿಗೆ ಎಲ್ಲ ರೀತಿಯಲ್ಲೂ ಸನ್ನದ್ದವಾಗಿದೆ ಎಂದು ವಿಶೇಷ ಕಾರ್ಯಪಡೆಯ ಡಿಐಜಿಯೂ ಆಗಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
0 comments:
Post a Comment