ಶಿವಮೊಗ್ಗ, ಸೆಪ್ಟೆಂಬರ್ 24, 2025 (ಕರಾವಳಿ ಟೈಮ್ಸ್) : ಪ್ರವಾದಿ ಪ್ರೇಮ ಕೇವಲ ಹೆಸರಿಗಾಗಿ ಅಥವಾ ಆಡಂಬರದ ಆಚರಣೆಗಾಗಿ ಇರದೆ ಪ್ರವಾದಿ ಮಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ಅವರ ಆಶಯ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಪರಸ್ಪರ ಸ್ನೇಹ, ಪ್ರೀತಿಯಿಂದ ಜೀವಿಸುವ ರೀತಿಯಲ್ಲಿರಬೇಕು. ಪ್ರವಾದಿ ಚರ್ಯೆಯನ್ನು ಚಾಚೂ ತಪ್ಪದೆ ಪಾಲಿಸುವಂತಿರಬೇಕು. ಆಗ ಮಾತ್ರ ನಿಜವಾದ ಪ್ರವಾದಿ ಸ್ನೇಹಿಗಳಾಗಲು ಸಾಧ್ಯ ಎಂದು ಅಲ್-ಹಿದಾಯ ಇಹ್ಸಾನ್ ಸೆಂಟರ್ ಕರ್ನಾಟಕ ಇದರ ಕಾರ್ಯದರ್ಶಿ ಶಾಹುಲ್ ಹಮೀದ್ ಮದನಿ ಹೇಳಿದರು.
ಪ್ರವಾದಿ ಮಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ಅವರ 1500ನೇ ಜನ್ಮದಿನಾಚರಣೆ ಪ್ರಯುಕ್ತ ಆರ್.ಎಂ.ಎಲ್ ನಗರದ “ಅಲ್ ಹಿದಾಯ ಇಹ್ಸಾನ್ ಸೆಂಟರ್” ವತಿಯಿಂದ ಯೂನಿಟಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ಆಯೋಜಿಸಲಾಗಿದ್ದ “ನೂರೇ ರಬೀಅï-2025” ಮದರಸ ಮಕ್ಕಳ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣಗೈದರು.
ಸಯ್ಯಿದ್ ಅಬೂಬಕ್ಕರ್ ಸಿದ್ದೀಕ್ ಅಲ್-ಹಾದಿ ತಂಙಳ್ ತೀರ್ಥಹಳ್ಳಿ ಅವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಇಬ್ರಾಹಿಂ ಪಿವಿಆರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಯ್ಯದ್ ಶಫೀಕ್ ಅಲ್-ಹಾಶಿಮಿ ಪ್ರಾರ್ಥಿಸಿದರು.
ಮುಖ್ಯ ಅತಿಥಿಯಾಗಿದ್ದ ಉದ್ಯಮಿ ಮುಜೀಬ್ ಮಾತನಾಡಿ, ಮನುಷ್ಯ ಹುಟ್ಟುವಾಗ ಯಾವುದನ್ನೂ ತಂದಿಲ್ಲ. ಸಾಯುವಾಗಳು ಏನನ್ನೂ ಕೊಂಡೊಯ್ಯುವುದೂ ಇಲ್ಲ. ಆದರೆ ಹುಟ್ಟು-ಸಾವಿನ ಮಧ್ಯೆ ಇರುವ ಜೀವನದಲ್ಲಿ ಸೃಷ್ಟಿಕರ್ತನು ಆಯುರಾರೋಗ್ಯ, ಸಂಪತ್ತು ಕರುಣಿಸಿದರೆ ಅದನ್ನು ಕೇವಲ ಸ್ವಾರ್ಥಕ್ಕೆ ಬಳಸಿಕೊಳ್ಳದೆ ಸಮಾಜಕ್ಕೂ, ಸಮುದಾಯದ ಬಡ-ಬಗ್ಗರಿಗೂ ಕೊಡುಗೆಯಾಗಿ ನೀಡುವ ಮೂಲಕ ಕೃತಾರ್ಥರಾಗಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಸಯ್ಯದ್ ಯೂಸುಫ್ ಅಲ್ ಬುಖಾರಿ ತಂಙಳ್, ಅಬ್ದುಲ್ ಜಬ್ಬಾರ್ ಸಅದಿ, ರಿಯಾಝ್, ಮುಶ್ತಾಕ್ ಅಹ್ಮದ್, ಆರಿಫ್ ಮೊದಲಾದವರು ಭಾಗವಹಿಸಿದ್ದರು. ಇದೇ ವೇಳೆ ಇಹ್ಸಾನ್ ಸೆಂಟರ್ ಮದರಸ ಮಕ್ಕಳಿಂದ ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು. ರಹೀಂ ಹನೀಫ್ ಸ್ವಾಗತಿಸಿ, ಇಹ್ಸಾನ್ ಸೆಂಟರ್ ಅಧ್ಯಾಪಕ ಹನೀಫ್ ಸಅದಿ ಹಾಗೂ ಜುನೈದ್ ಮಿಸ್ಬಾಹಿ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment