ಪುತ್ತೂರು, ಸೆಪ್ಟೆಂಬರ್ 14, 2025 (ಕರಾವಳಿ ಟೈಮ್ಸ್) : ರಾಜಕೀಯ ಮಾಡಬೇಕಾದ್ದು ಚುನಾವಣೆ ಸಮಯದಲ್ಲಿ ಮಾತ್ರ, ಚುನಾವಣೆ ಕಳೆದ ಬಳಿಕ ಗೆದ್ದವರು ಯಾರೇ ಆಗಲಿ ಅಭಿವೃದ್ದಿ ಕೆಲಸ ಮಾಡಬೇಕು, ಅಭಿವೃದ್ದಿ ಕೆಲಸ ಯಾರೇ ಮಾಡಿದರೂ ಅದಕ್ಕೆ ಎಲ್ಲರೂ ಪಕ್ಷ ಬೇಧ, ಧರ್ಮ ಬೇಧವಿಲ್ಲದೆ ಬೆಂಬಲ ಕೊಡಬೇಕು. ಆದರೆ ಪ್ರತಿಯೊಂದಕ್ಕೂ ಅಸೂಯೆ, ಮತ್ಸರ ತೋರುವುದು ತರವಲ್ಲ. ಅಸೂಯೆ-ಮತ್ಸರ ಎಂಬುದು ಮನುಷ್ಯನನ್ನು ಹಾಳುಮಾಡುತ್ತದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ನಿಡ್ಪಳ್ಳಿ ಶಾಂತದುರ್ಗಾ ದೇವಸ್ಥಾನದ ವತಿಯಿಂದ ದಸರಾ ಪ್ರಯುಕ್ತ ನಡೆದ ದಸರಾ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಷ್ಟು ವರ್ಷದಲ್ಲಿ ಪುತ್ತೂರಿನಲ್ಲಿ ಒಂದು ಸಮರ್ಪಕ ಆಸ್ಪತ್ರೆ ನಿರ್ಮಿಸಲು ಸಾಧ್ಯವಾಗಿಲ್ಲ. ಜನರಿಗೆ ಪ್ರಯೋಜನವಾಗಲಿ ಎಂದು ಮೆಡಿಕಲ್ ಕಾಲೇಜು ಮಂಜೂರು ಮಾಡಿಸಿದರೆ ಅದರಲ್ಲೂ ಮತ್ಸರ, ಅಸೂಯೆ, ಕ್ರೀಡಾಂಗಣ ಮಾಡುವಲ್ಲಿಯೂ ಹೊಟ್ಟೆ ಕಿಚ್ಚಿನ ಮಾತು, ದೇವಸ್ಥಾನ ಅಭಿವೃದ್ದಿ ಮಾಡೋಣ ಎಂದರೆ ಅದಕ್ಕೂ ಹೊಟ್ಟೆ ನೋವು, ಈ ರೀತಿಯ ಸ್ವಭಾವದಿಂದ ಸಾಧಿಸಿದ್ದಾರೂ ಏನು ಎಂದು ಪ್ರಶ್ನಿಸಿದರು.
ಯಾರೇ ಏನೇ ಹೇಳಿದರೂ ನನ್ನ ಅಧಿಕಾರಾವಧಿಯಲ್ಲಿ ನನ್ನಿಂದ ಸಾಧ್ಯವಾದಷ್ಟು ಅನುದಾನವನ್ನು ತಂದು ಪುತ್ತೂರನ್ನು ಅಭಿವೃದ್ದಿ ಮಾಡಿಯೇ ತೀರುತ್ತೇನೆ. ಅಭಿವೃದ್ದಿಯಲ್ಲಿ ನಾನು ಎಂದಿಗೂ ರಾಜಕೀಯ ಮಾಡಿಲ್ಲ, ಕಾಂಗ್ರೆಸ್, ಬಿಜೆಪಿ ಹಾಗೂ ಇತರೆ ಪಕ್ಷದ ಕಾರ್ಯಕರ್ತರು ನನ್ನ ಬಳಿ ಬರುತ್ತಾರೆ. ಇದುವರೆಗೂ ರಾಜಕೀಯ ಮಾಡಿಲ್ಲ. ಇನ್ನೂ ಮಾಡುವುದಿಲ್ಲ. ನನ್ನ ಕಚೇರಿಗೆ ಬರುವ ಯಾರಲ್ಲೂ ಅವರ ಪಕ್ಷ ಯಾವುದೆಂದೂ ಕೇಳದೆ ಸಹಾಯ ಮಾಡುತ್ತಿದ್ದೇನೆ ಎಂದ ಶಾಸಕ ಅಶೋಕ್ ರೈ, ಅಸೂಯೆ ಸ್ವಭಾವ ಬಿಟ್ಟು ವಿಶಾಲ ಹೃದಯದಿಂದ ಎಲ್ಲವನ್ನೂ ಚಿಂತಿಸಬೇಕು ಎಂದರು. ಈ ಸಂದರ್ಭ ನಿಡ್ಪಳ್ಳಿ ವಲಯ ಕಾಂಗ್ರೆಸ್ ಅಧ್ಯಕ್ಷ ಹರೀಶ್, ಪ್ರಮುಖರಾದ ಅವಿನಾಶ್, ಸತೀಶ, ನಾಗೇಶ್ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment