ಬಂಟ್ವಾಳ, ಅಕ್ಟೋಬರ್ 04, 2025 (ಕರಾವಳಿ ಟೈಮ್ಸ್) : ಮೇ 27 ರಂದು ನಡೆದ ಅಬ್ದುಲ್ ರಹಿಮಾನ್ ಕೊಳತ್ತಮಜಲು ಹತ್ಯೆ ಹಾಗೂ ಸ್ನೇಹಿತ ಶಾಫಿ ಎಂಬಾತನ ಕೊಲೆಯತ್ನ ಪ್ರಕರಣದ ಆರೋಪಿಗಳ ವಿರುದ್ದ ಸಂಘಟಿತ ಅಪರಾಧ ತಡೆ ಕಾಯ್ದೆ (ಕೆಕೋಕಾ) ಅಡಿ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮೇ 27 ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಬ್ದುಲ್ ರೆಹಮಾನ್ ಕೊಲೆ ಹಾಗೂ ಶಾಫಿ ಕೊಲೆ ಯತ್ನ ಪ್ರಕರಣದ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ ಕಲಂ 103(1) 109(1), 118(1), 118(2), 61(2) (ಎ), 249(ಎ), 238(ಎ) ಜೊತೆಗೆ 3(5) ಬಿ ಎನ್ ಎಸ್ ಮತ್ತು ಕಲಂ 25(1) (ಎ) ಭಾರತೀಯ ಶಸ್ತ್ರಾಸ್ತ್ರಗಳ ಕಾಯ್ದೆ 1959 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ 13 ಆರೋಪಿಗಳಾದ 1) ದೀಪಕ್ 2) ಚಿಂತನ್, 3) ಪ್ರಥ್ವಿರಾಜ್ ಜೋಗಿ 4) ಸುಮಿತ್ ಬಿ. ಆಚಾರ್ಯ 5) ವಿ.ರವಿರಾಜ ಮೂಲ್ಯ 6) ಅಭಿನ್ ರೈ 7) ತೇಜಾಕ್ಷ 8) ರವಿಸಂಜಯ್ ಜಿ.ಎಸ್. 9) ಶಿವಪ್ರಸಾದ್ ತುಂಬೆ, 10) ಪ್ರದೀಪ 11) ಶಾಹಿತ್ @ ಸಾಹಿತ್ 12) ಸಚಿನ್ @ ಸಚ್ಚು ರೊಟ್ಟಿಗುಡ್ಡೆ 13) ರಂಜಿತ್ ಎಂಬವರುಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಪ್ರಕರಣದ ಇನ್ನೊಬ್ಬ ಆರೋಪಿ ಪುದು ಗ್ರಾಮದ ಕುಮ್ಡೇಲು ನಿವಾಸಿ ಭರತ್ ರಾಜ್ ಅಲಿಯಾಸ್ ಭರತ್ ಕುಮ್ಡೇಲು (29) ಎಂಬಾತ ಮರೆಸಿಕೊಂಡಿದ್ದು ಬಂಧನಕ್ಕೆ ಬಾಕಿ ಇದೆ.
ಸದ್ರಿ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳು ಹಲವು ವರ್ಷಗಳಿಂದ ಕೊಲೆ, ಕೊಲೆ ಯತ್ನ, ಪ್ರಚೋದನಕಾರಿ ಭಾಷಣಗಳು ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದು, ಸಮಾಜದಲ್ಲಿ ಅಶಾಂತಿ ಮತ್ತು ಕೋಮು ಸಂಘರ್ಷಕ್ಕೆ ಕಾರಣರಾಗಿದ್ದಾರೆ. ಹೀಗಾಗಿ, ಅವರ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ-2000 (THE KARNATAKA CONTROL OF ORGANISED CRIME ACT- 2000) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಎಸ್ಪಿ ಡಾ ಅರುಣ್ ಕೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.













0 comments:
Post a Comment