ಮಂಗಳೂರು, ಜನವರಿ 21, 2026 (ಕರಾವಳಿ ಟೈಮ್ಸ್) : ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣದ ಆದೇಶದಂತೆ ಮಂಗಳೂರು ನಗರದಲ್ಲಿ ವಾಹನ ಸಂಚಾರ ದಟ್ಟಣೆ ನಿಯಂತ್ರಿಸುವ ಬಗ್ಗೆ ನಿಬಂಧನೆಗಳನ್ನು ವಿಧಿಸಿ, ಪರವಾನಿಗೆಯನ್ನು ವಿತರಿಸಲು ಜಿಲ್ಲಾಧಿಕಾರಿಗಳು ನಿರ್ಣಯಿಸಿದ್ದಾರೆ.
2022ರ ಜನವರಿ 20ರಿಂದ 2025ರ ಅಕ್ಟೋಬರ್ 30ರವರೆಗೆ ಬ್ಯಾಟರಿ ಚಾಲಿತ ಇಂಧನ ಬಳಸಿ ರಹದಾರಿ ಪಡೆಯದೇ ನೊಂದಣಿಯಾಗಿರುವ ಹಾಗೂ ವಲಯ-1ರ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ಆಟೋ ರಿಕ್ಷಾಗಳು ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ, ಪ್ರಾಧಿಕಾರದ ನಿಬಂಧನೆಗಳಿಗೆ ಒಳಪಟ್ಟು ಪರವಾನಿಗೆ ಪಡೆದುಕೊಳ್ಳಬೇಕು. ಹಾಗೂ ವಲಯ 1ರ ವ್ಯಾಪ್ತಿಗೆ ಬರುವ ಪರವಾನಿಗೆದಾರರು ಇ-ಆಟೋರಿಕ್ಷಾಗಳಿಗೆ ಆಕಾಶ ನೀಲಿ ಬಣ್ಣದ ಚೌಕಾಕಾರದಲ್ಲಿ ಬಣ್ಣವನ್ನು ಬಳಿದು, ಪೆÇಲೀಸ್ ಇಲಾಖೆಯಿಂದ ಗುರುತಿನ ಸಂಖ್ಯೆ ಪಡೆಯಬೇಕು.
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಕನಿಷ್ಠ 5 ವರ್ಷ ನಿವಾಸಿಯಾಗಿರುವ ಬಗ್ಗೆ ವಾಸ ಸ್ಥಳದ ದೃಢೀಕರಣ ಪ್ರಮಾಣ ಪತ್ರ ಸಲ್ಲಿಸಬೇಕು. ಈಗಾಗಲೇ ಮಂಗಳೂರು ನಗರ ವ್ಯಾಪ್ತಿಯಲ್ಲಿ ಆಟೋ ರಿಕ್ಷಾ ಪರವಾನಿಗೆ ಹೊಂದಿರುವವರಿಗೆ ಇ-ಆಟೋರಿಕ್ಷಾ ಪರವಾನಿಗೆ ಮಂಜೂರು ಮಾಡಲಾಗುವುದಿಲ್ಲ. ಒಬ್ಬರಿಗೆ ಒಂದೇ ಇ-ಆಟೋ ರಿಕ್ಷಾ ಪರವಾನಿಗೆ ಮಂಜೂರು ಮಾಡಲಾಗುತ್ತದೆ. ಇ-ಆಟೋ ರಿಕ್ಷಾ ಪರವಾನಿಗೆ ಪಡೆದುಕೊಂಡವರು ಕಡ್ಡಾಯವಾಗಿ ಆಟೋ ರಿಕ್ಷಾ ಚಾಲನೆ ಮಾಡುವ ಚಾಲನಾ ಪರವಾನಿಗೆ/ ಬ್ಯಾಡ್ಜ್ ಹೊಂದಿರಬೇಕು ಹಾಗೂ ಕಡ್ಡಾಯವಾಗಿ ಪರವಾನಿಗೆದಾರನೆ ಆಟೋ ರಿಕ್ಷಾವನ್ನು ಚಾಲನೆ ಮಾಡಬೇಕು. ಕಾನೂನಾತ್ಮಕ ಹಾಗೂ ಆಡಳಿತದ ಹಿತದೃಷ್ಟಿಯಿಂದ ಪ್ರಾಧಿಕಾರಕ್ಕೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ತಕ್ಷಣ ಪರವಾನಿಗೆ ಪಡೆದುಕೊಳ್ಳುವಂತೆ ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಆರ್.ಟಿ.ಒ ಕಚೇರಿ ಪ್ರಕಟಣೆ ತಿಳಿಸಿದೆ.












0 comments:
Post a Comment