ಜನವರಿ 27 ರಂದು ಬಂಟ್ವಾಳದಲ್ಲಿ ನರೇಗಾ ಬಚವೋ ಪಾದಯಾತ್ರೆ
ಬಂಟ್ವಾಳ, ಜನವರಿ 19, 2026 (ಕರಾವಳಿ ಟೈಮ್ಸ್) : ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ, ಆಹಾರ ಭದ್ರತಾ ಕಾಯ್ದೆ, ಶಿಕ್ಷಣದ ಹಕ್ಕು, ಮಾಹಿತಿ ಹಕ್ಕು ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಕಾಂಗ್ರೆಸ್ ಪಕ್ಷ ಜನರಿಗೆ ನೇರ ಹಕ್ಕನ್ನು ನೀಡಿದೆ. ಸ್ವಚ್ಛ ಗ್ರಾಮ ಯೋಜನೆ ಕೂಡಾ ಕಾಂಗ್ರೆಸ್ ಪಕ್ಷದ ನಿರ್ಮಲ ಗ್ರಾಮ ಪುರಸ್ಕಾರ ಯೋಜನೆಯ ನಾಮ ಬದಲಾವನೆಯಾಗಿದೆ. ಬಿಜೆಪಿ ಕೇವಲ ಯೋಜನೆಗಳ ಹೆಸರು ಬದಲಾವಣೆ ಮೂಲಕ ಜನರಲ್ಲಿ ಗೊಂದಲ ಮೂಡಿಸುವ ಕೆಲಸ ಮಾತ್ರ ಮಾಡಿದೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಹೇಳಿದರು.
ಬಿ ಸಿ ರೋಡಿನ ಪಕ್ಷದ ಕಚೇರಿಯಲ್ಲಿ ಜನವರಿ 19 ರಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಹೆಸರು ಬದಲಾಯಿಸಿದ್ದಲ್ಲದೆ ಕೇಂದ್ರ ಸರಕಾರ ಪೂರ್ಣ ಪ್ರಮಾಣದಲ್ಲಿ ನೀಡುತ್ತಿದ್ದ ಯೋಜನೆಯನ್ನು ಇದೀಗ ಬದಲಾಯಿಸಿ ಕೇಂದ್ರ-ರಾಜ್ಯ ಸರಕಾರಗಳ ನಡುವೆ 60:40 ಅನುಪಾತ ಪ್ರಮಾಣದಲ್ಲಿ ವಿಂಗಡಿಸಿ ರಾಜ್ಯ ಸರಕಾರದ ಮೇಲೆ ಹೆಚ್ಚುವರಿ ಭಾರ ಹೊರಿಸಲಾಗಿದೆ ಎಂದರು.
ಈಗಾಗಲೇ ಕೇಂದ್ರ ಸರಕಾರ ಜಿ ಎಸ್ ಟಿ ಮೂಲಕ ತೆರಿಗೆ ಪಾವತಿ ನೇರವಾಗಿ ಕೇಂದ್ರ ಸರಕಾರ ಸುಪರ್ದಿಗೆ ಹೋಗಿದ್ದು, ರಾಜ್ಯ ಸರಕಾರ ಅದರಲ್ಲು ಬಡವಾಗಿದೆ. ಇನ್ನು ತೆರಿಗೆ ಹಂಚಿಕೆಯಲ್ಲೂ ರಾಜ್ಯ ಸರಕಾರಗಳಿಗೆ ಸಮರ್ಪಕ ಪಾಲು ನೀಡಲಾಗುತ್ತಿಲ್ಲ. ಅದರಲ್ಲೂ ರಾಜ್ಯಗಳಿಗೆ ಅನ್ಯಾಯವಾಗುತ್ತಿದ್ದು, ಇದೀಗ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ರಾಜ್ಯಗಳಿಗೆ ಹೊರೆ ಹೊರಿಸಲಾಗುತ್ತಿದ್ದು ಎಂದವರು ಆರೋಪಿಸಿದರು.
ಜನವರಿ 27 ರಂದು ಬಂಟ್ವಾಳದಲಿ ನರೇಗಾ ಬಚಾವೋ ಪಾದಯಾತ್ರೆ
ಉದ್ಯೋಗ ಖಾತರಿ ಯೋಜನೆ ಹೆಸರು ಬದಲಾವಣೆ ಬಗ್ಗೆ ಕಾಂಗ್ರೆಸ್ ಪಕ್ಷ ರಾಷ್ಟ್ರ ಮಟ್ಟದಲ್ಲಿ ಸಂಗ್ರಾಮವನ್ನು ಹಮ್ಮಿಕೊಂಡಿದೆ. ಈ ಪ್ರಯುಕ್ತ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಜನವರಿ 27 ರಂದು ಬೆಳಿಗ್ಗೆ 9.30ಕ್ಕೆ ಮಣಿಹಳ್ಳದಿಂದ ಬಿ ಸಿ ರೋಡು-ಕೈಕಂಬದವರೆಗೆ ಪಾದಯಾತ್ರೆ ನಡೆಯಲಿದ್ದು, ಬಳಿಕ ಬಿ ಸಿ ರೋಡಿನ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಯಲಿದೆ.
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೋರಾಟಕ್ಕೂ ಮುಂಚಿತವಾಗಿ ಪ್ರತಿ ಗ್ರಾಮ ಮಟ್ಟದಲ್ಲಿ ಒಂದು ಕಿಲೋ ಮೀಟರ್ ಪಾದಯಾತ್ರೆ ನಡೆಸಿ ಕಾಂಗ್ರೆಸ್ ಬೆಂಬಲಿತ ಆಡಳಿತ ಇರುವಲ್ಲಿ ನಿರ್ಣಯ ಕೈಗೊಳ್ಳುವುದು ಹಾಗೂ ವಿರೋಧ ಪಕ್ಷ ಇರುವೆಡೆ ಮನವಿ ನೀಡುವ ಮೂಲಕ ಸರಕಾರಕ್ಕೆ ಆಗ್ರಹಿಸುವ ಕೆಲಸ ನಡೆಯಲಿದೆ ಎಂದ ರಮಾನಾಥ ರೈ ಅವರು, ಈ ಪ್ರತಿಭಟನಾ ಪ್ರಕ್ರಿಯೆಗಳಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರು ಸೇರಿದಂತೆ ಉದ್ಯೋಗ ಖಾತರಿಯ ಫಲಾನುಭವಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ಬಂಟ್ವಾಳದಲ್ಲಿ ನೆನೆಗುದಿಗೆ ಬಿದ್ದ ಮಹತ್ತರ ಕಾಮಗಾರಿಗಳು : ರೈ ಬೇಸರ
ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ನಾನು ಶಾಸಕ, ಮಂತ್ರಿಯಾಗಿದ್ದ ಸಂದರ್ಭದಲ್ಲಿ ಅನುಮೋದನೆಗೊಂಡ ಮಹತ್ವಪೂರ್ಣ ಕೆಲಸಗಳಾದ ಬಂಟ್ವಾಳ ತಾಲೂಕು ಕ್ರೀಡಾಂಗಣ, ಪಂಜೆ ಮಂಗೇಶರಾಯರ ಭವನ, ಅಜಿಲಮೊಗರು-ಕಡೇಶ್ವಾಲ್ಯ ಸೌಹಾರ್ದ ಸೇತುವೆ ಮೊದಲಾದ ಕಾಮಗಾರಿಗಳು ನೆನೆಗುದಿಗೆ ಬಿದ್ದಿರುವುದು ಬೇಸತ ತಂದಿದೆ ಎಂದು ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿದ ರೈ ಅವರು ಈ ಬಗ್ಗೆ ಸರಕಾರದ ಜೊತೆ ಸಂಪರ್ಕ ಸಾಧಿಸಿ ಕಾಮಗಾರಿ ಮುಂದುವರಿಕೆಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯರುಗಳಾದ ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಬ್ಲಾಕ್ ಅಧ್ಯಕ್ಷರುಗಳಾದ ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ಬುಡಾ ಅಧ್ಯಕ್ಷ ಬೇಬಿ ಕುಂದರ್, ಪಕ್ಷ ಪ್ರಮಖರಾದ ಬಿ ಪದ್ಮಶೇಖರ ಜೈನ್, ಸುದರ್ಶನ್, ಲುಕ್ಮಾನ್ ಬಿ ಸಿ ರೋಡು, ಲವೀನಾ ವಿಲ್ಮಾ ಮೊರಾಸ್, ಮಲ್ಲಿಕಾ ಶೆಟ್ಟಿ ಮೊದಲಾದವರಿದ್ದರು.












0 comments:
Post a Comment