ಬೆಂಗಳೂರು (ಕರಾವಳಿ ಟೈಮ್ಸ್) : ಕಾರ್ಮಿಕ ಕಾಯ್ದೆಯನ್ನು ತಿದ್ದುಪಡಿ ಮಾಡಲು ಹೊರಟಿರುವ ಸರಕಾರ ಕಾರ್ಖಾನೆ ಉದ್ಯಮಿಗಳಿಗೆ ಲಾಭ ಮಾಡಿಕೊಡಲು ಹೊರಟಿದ್ದು, ಕಾರ್ಮಿಕರನ್ನು ಸಮಾಧಿ ಮಾಡುವ ಕೆಲಸಕ್ಕೆ ಮುಂದಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿ ಕಾರಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು ಸರ್ಕಾರ ಎಲ್ಲಾ ವರ್ಗದ ಜನರನ್ನ ಸರಿಸಮನಾಗಿ ನೋಡುವಲ್ಲಿ ವಿಫಲವಾಗಿದೆ. ಮೇಲ್ವರ್ಗದ ಜನರ ಮಾತು ಕೇಳಿಕೊಂಡು ಬಿಜೆಪಿ ನಾಯಕರು ಸರಕಾರ ನಡೆಸುತ್ತಿದ್ದಾರೆ. ಕಾರ್ಮಿಕ ಕಾಯ್ದೆಯ ವಿಚಾರದಲ್ಲಿ ಸಾಕಷ್ಟು ತಿದ್ದುಪಡಿ ಮಾಡಲು ಹೊರಟಿದೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಕಾರ್ಮಿಕ ಕಾಯ್ದೆಯನ್ನು ರಾಜ್ಯ ಸರಕಾರ ತಿದ್ದುಪಡಿ ಮಾಡಲು ಮುಂದಾಗಿದ್ದು, ಈ ಕಾಯ್ದೆಯಲ್ಲಿ ಕಾರ್ಮಿಕರ ವಿರುದ್ಧ ಸಾಕಷ್ಟು ಅಂಶಗಳಿವೆ. ರೈತರ ಮತ್ತು ಕಾರ್ಮಿಕರ ಪರ ಕಾಂಗ್ರೆಸ್ ಪಕ್ಷ ನಿಲ್ಲಲಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಕಾರ್ಮಿಕ ಕಾಯ್ದೆಯ ನಿಯಮಾವಳಿಗಳನ್ನೇ ಹಾಳು ಮಾಡಲು ಹೊರಟಿದೆ. ಕೆಲವು ಎಂಎನ್ಸಿಗಳಿಗೆ ಅನುಕೂಲ ಮಾಡಿಕೊಡಲು ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಲು ಹೊರಟಿದೆ. ಇದನ್ನು ಕಾಂಗ್ರೆಸ್ ಪಕ್ಷ ಸಂಪೂರ್ಣ ವಿರೋಧಿಸುತ್ತಿದ್ದು, ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಸರಕಾರದ ಈ ಧೋರಣೆಯಿಂದಾಗಿಯೇ ಐದು ಲಕ್ಷ ಜನ ತಮ್ಮ ರಾಜ್ಯಗಳಿಗೆ ಹೊರಟು ನಿಂತಿದ್ದಾರೆ. ಆ ರಿಜಿಸ್ಟ್ರೇಷನ್ ಆಪ್ ಕೂಡ ಬಂದ್ ಆಗಿದೆ. ಕಾರ್ಮಿಕ ಕಾಯಿದೆ ಮತ್ತು ಸಹಕಾರ ಕಾಯ್ದೆಗಳ ತಿದ್ದುಪಡಿ ಮಾಡಲು ಹೊರಟಿದೆ. ಕಾರ್ಮಿಕರಿಗೆ ಅನ್ಯಾಯ ಮಾಡಲು ಹೊರಟಿದೆ. ಅಂತಾರಾಷ್ಟ್ರೀಯ ಕಾರ್ಮಿಕ ಕಾಯ್ದೆಯ ನಿಯಮಾವಳಿಗಳನ್ನೇ ಹಾಳು ಮಾಡಲು ಹೊರಟಿದೆ ಎಂದವರು ಕಿಡಿ ಕಾರಿದ್ದಾರೆ.
0 comments:
Post a Comment