ನವದೆಹಲಿ (ಕರಾವಳಿ ಟೈಮ್ಸ್) : ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ ಸೋಮವಾರ ವಲಸೆ ಕಾರ್ಮಿಕರ ಪರವಾಗಿ ದೆಹಲಿಯ ರಾಜ್ಘಾಟ್ನಲ್ಲಿ ಧರಣಿ ನಡೆಸಿದ್ದು, ವಲಸೆ ಕಾರ್ಮಿಕರು ತಮ್ಮ ತಮ್ಮ ಮನೆಗಳಿಗೆ ತಲುಪಲು ನೆರವಾಗಲು ಸಶಸ್ತ್ರ ಪಡೆಗಳನ್ನು ನಿಯೋಜಿಸಬೇಕೆಂದು ಒತ್ತಾಯಿಸಿದ್ದಾರೆ. ಈ ವೇಳೆ ಧರಣಿ ನಿರತರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಸ್ವತಃ ಯಶವಂತ ಸಿನ್ಹಾ ಅವರೇ ಟ್ವೀಟ್ ಮಾಡಿದ್ದು, ‘ನಮ್ಮನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.
ಸಿನ್ಹಾ ಜತೆ ಎಎಪಿ ಮುಖಂಡರಾದ ಸಂಜಯ್ ಸಿಂಗ್ ಮತ್ತು ದಿಲೀಪ್ ಪಾಂಡೆ ಕೂಡ ಧರಣಿಯಲ್ಲಿ ಭಾಗವಹಿಸಿದ್ದರು. ಲಾಕ್ಡೌನ್ ಸಂಕಷ್ಟದಲ್ಲಿ ಪರ ಊರುಗಳಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರನ್ನು ತಮ್ಮ ರಾಜ್ಯಗಳಿಗೆ ಹಿಂತಿರುಗಿಸಲು ಸರಿಯಾದ ವ್ಯವಸ್ಥೆ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಧರಣಿ ನಿರತರನ್ನು ಸ್ಥಳದಿಂದ ತೆರವುಗೊಳಿಸಲಾಗಿದೆ ಎಂದು ದೆಹಲಿ ಉಪ ಪೆÇಲೀಸ್ ಆಯುಕ್ತ (ಕೇಂದ್ರ) ಸಂಜಯ್ ಭಾಟಿಯಾ ತಿಳಿಸಿದ್ದಾರೆ. ಅಲ್ಲದೆ ಬಂಧಿತರನ್ನು ಶೀಘ್ರ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಪೆÇಲೀಸ್ ಮೂಲಗಳು ತಿಳಿಸಿವೆ.
ಮಾಜಿ ಬಿಜೆಪಿ ಮುಖಂಡ ಮತ್ತು ನರೇಂದ್ರ ಮೋದಿ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿರುವ ಯಶವಂತ ಸಿನ್ಹಾ, ಅಧಿಕಾರಿಗಳು ಕೇಂದ್ರ ಅಥವಾ ರಾಜ್ಯ ಸರಕಾರ ರಸ್ತೆಗಳಲ್ಲಿ ನಡೆಯುತ್ತಾ ಊರಿಗೆ ತೆರಳುವ ವಲಸೆ ಕಾರ್ಮಿಕರ ಕಷ್ಟಕ್ಕೆ ಕುರುಡಾಗಿದ್ದಾರೆ, ನಮ್ಮ ಸರಳ ಬೇಡಿಕೆಯೆಂದರೆ, ಸಶಸ್ತ್ರ ಪಡೆಗಳು ಮತ್ತು ಅರೆಸೈನಿಕ ಪಡೆಗಳಿಗೆ, ಅವರ ಆಜ್ಞೆಯ ಮೇರೆಗೆ ಎಲ್ಲಾ ಸಂಪನ್ಮೂಲಗಳೊಂದಿಗೆ ಮತ್ತು ಅವರು ಬೇಡಿಕೆ ಇಡಬಹುದಾದ ಮಾಡಬಹುದಾದ ಯಾವುದೇ ನಾಗರಿಕ ಸಂಪನ್ಮೂಲಗಳೊಂದಿಗೆ ವಲಸೆ ಕಾರ್ಮಿಕರನ್ನು ಗೌರವಯುತವಾಗಿ ತಮ್ಮ ಮನೆಗಳಿಗೆ ಕಳುಹಿಸಬೇಕು ಎಂದು ಆಗ್ರಹಿಸಿದ್ದಾರೆ.
0 comments:
Post a Comment