ಬಂಟ್ವಾಳ, ನ. 09, 2020 (ಕರಾವಳಿ ಟೈಮ್ಸ್) : ಕೊರೊನಾ ಹಿನ್ನಲೆಯಲ್ಲಿ ಸರಕಾರದಿಂದ ತಮಗೆ ಹಣ ಬಂದಿದೆ. ಅದನ್ನು ಪಡೆಯಲು ಸ್ವಲ್ಪ ಹಣ ಕಟ್ಟಬೇಕು ಎಂದು ವೃದ್ದೆ ಮಹಿಳೆಯನ್ನು ನಂಬಿಸಿದ ಅಪರಿಚಿತ ಚಿನ್ನಾಭರಣ ಎಗರಿಸಿ ಪರಾರಿಯಾದ ಘಟನೆ ಸೋಮವಾರ ಬಿ ಸಿ ರೋಡಿನ ಮಿನಿ ವಿಧಾನಸೌಧದಲ್ಲಿ ನಡೆದಿದೆ.
ತಾಲೂಕಿನ ಅಮ್ಟಾಡಿ ಗ್ರಾಮದ ತಲೆಂಬಿಲ ನಿವಾಸಿ ಜಯಂತಿ ಎಂಬ ಮಹಿಳೆ ವಿದ್ಯುತ್ ಬಿಲ್ ಪಾವತಿಸಲು ಬಿ ಸಿ ರೋಡಿನ ಮೆಸ್ಕಾಂ ಕಛೇರಿಗೆ ಸೋಮವಾರ ಬೆಳಿಗ್ಗೆ ಬಂದಿದ್ದರು. ವಿದ್ಯುತ್ ಬಿಲ್ ಪಾವತಿಸಿ ಮಹಿಳೆ ವಾಪಾಸ್ಸು ಬರುತ್ತಿದ್ದ ವೇಳೆ ದಾರಿಯಲ್ಲಿ ಸಿಕ್ಕಿದ ಅಪರಿಚಿತ ವ್ಯಕ್ತಿ ಪರಿಚಿತನಂತೆ ನಟಿಸಿ ಜಯಂತಿ ಅವರೊಂದಿಗೆ ಮಾತುಕತೆ ನಡೆಸಲು ಆರಂಭಿಸಿದ್ದಲ್ಲದೆ, ತಮಗೆ ಕೊರೊನಾ ಪರಿಹಾರ ಹಿನ್ನೆಲೆಯಲ್ಲಿ ಒಂದೂವರೆ ಲಕ್ಷ ರೂಪಾಯಿ ಹಣ ಬಂದಿದೆ. ಅದನ್ನು ಪಡೆಯಲು 10 ಸಾವಿರ ರೂಪಾಯಿ ಕಟ್ಟಬೇಕು. ನಿಮ್ಮ ಆಧಾರ್ ಕಾರ್ಡ್ ತೆಗೆದುಕೊಂಡು ಮಿನಿ ವಿಧಾನಸೌಧಕ್ಕೆ ಬನ್ನಿ, ಅಲ್ಲಿ ಅರ್ಜಿ ನೀಡಲಿಕ್ಕಿದೆ ಎಂದು ಕರೆದುಕೊಂಡು ಬಂದಿದ್ದಾನೆ. ಈ ಸಂದರ್ಭ ಮಹಿಳೆ, ನನ್ನ ಬಳಿ ಹಣವಿಲ್ಲ. ನನ್ನ ಮಗನ ಬಳಿ ಕೇಳಿ ಕೊಡುತ್ತೇನೆ ಎಂದಿದ್ದಾರೆ. ಈ ವೇಳೆ ನಿಮ್ಮ ಮಗನಲ್ಲಿ ದುಡ್ಡಿಲ್ಲ ಎಂದು ಹೇಳಿದ್ದು, ತಾಯಿಯ ಬಳಿ ಇರುವ ಚಿನ್ನಾಭರಣ ಪಡೆದುಕೊಳ್ಳಲು ತಿಳಿಸಿದ್ದಾನೆ ಎಂದು ನಂಬಿಸಿ ಅವರ ಕಿವಿಯಲ್ಲಿದ್ದ ಬೆಂಡೋಲೆ ಪಡೆದುಕೊಂಡು ಈಗ ಬರುವುದಾಗಿ ಹೇಳಿ ಹೋದವರ ಮರಳಿ ಬಂದಿಲ್ಲ. ಇದರಿಂದ ಗಾಬರಿಗೊಂಡ ಮಹಿಳೆ ಸಿಬ್ಬಂದಿ ಮೂಲಕ ಮಗನಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದಾಗಲೇ ಮಹಿಳೆಗೆ ಮೋಸ ಹೋದದ್ದು ತಿಳಿದು ಬಂದಿದೆ. ತಕ್ಷಣ ಸ್ಥಳಕ್ಕೆ ಬಂದ ಆಕೆಯ ಮಗ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಿನಿ ವಿಧಾನಸೌಧದ ಸೀಸಿ ಟೀವಿ ಫೂಟೇಜ್ ಪಡೆದುಕೊಂಡಿರುವ ಪೊಲೀಸರು ವಂಚಕನ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.
0 comments:
Post a Comment