ಬಂಟ್ವಾಳ, ನ. 09, 2020 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಹೊಸ ನೇತ್ರಾವತಿ ಸೇತುವೆ ಮೇಲಿನಿಂದ ಭಾನುವಾರ ಬೆಳಿಗ್ಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಮೃತದೇಹ ಸೋಮವಾರ ಸಂಜೆ ಸೇತುವೆಯ ಅಡಿಯಲ್ಲೇ ಪತ್ತೆಯಾಗಿದೆ.
ಮೃತ ಯುವಕನನ್ನು ಪುತ್ತೂರು ತಾಲೂಕು ಬಲ್ನಾಡು ನಿವಸಿ ಸುಚೇತನ್ (27) ಎಂದು ಹೆಸರಿಸಲಾಗಿದೆ. ಸೇತುವೆ ಮೇಲೆ ಬ್ಯಾಗ್ ಹಾಕಿಕೊಂಡು ನಡೆದುಕೊಂಡು ಬಂದಿದ್ದ ಅಪರಿಚಿತ ವ್ಯಕ್ತಿ ಬ್ಯಾಗನ್ನು ಸೇತುವೆ ಮೇಲಿಟ್ಟು ನದಿಗೆ ಧುಮುಕಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಭಾನುವಾರ ದಿಂದ ಸೋಮವಾರ ಸಂಜೆವರೆಗೂ ಗೂಡಿನಬಳಿ ಪರಿಸರದ ಈಜುಪಟು ಯುವಕರು ಹಾಗೂ ಬಂಟ್ವಾಳ ಅಗ್ನಿಶಾಮಕ ಸಿಬ್ಬಂದಿಗಳು ಮೃತದೇಹಕ್ಕಾಗಿ ಕಾರ್ಯಾಚರಣೆ ಮುಂದುವರಿಸಿದ್ದರೂ ಮೃತದೇಹ ಪತ್ತೆಯಾಗಿರಲಿಲ್ಲ.
ಮಂಗಳೂರಿನ ಪಿಜಿಯಿಂದ ಭಾನುವಾರ ಬೆಳಿಗ್ಗೆ ಬಂದ ಈತ ಪಾಣೆಮಂಗಳೂರು ಹೊಸ ಸೇತುವೆಯ ಮೇಲೆ ತನ್ನ ಬ್ಯಾಗ್ ಇರಿಸಿ ನದಿಗೆ ಹಾರಿದ್ದ. ಬ್ಯಾಗಿನಲ್ಲಿ ದೊರೆತ ದಾಖಲೆಗಳನ್ನು ಪರಿಶೀಲಿಸಿದ್ದ ಪೊಲೀಸರು ಈತನ ಮನೆ ಮಂದಿಗೆ ಸುದ್ದಿ ಮುಟ್ಟಿಸಿ ಮನೆ ಮಂದಿಯನ್ನು ಸ್ಥಳಕ್ಕೆ ಕರೆಸಿದ್ದರು. ಭಾನುವಾರ ರಾತ್ರಿವರೆಗೂ ಕಾರ್ಯಾಚರಣೆ ನಡೆಸಿದ್ದರೂ ಮೃತದೇಹ ಪತ್ತೆಯಾಗಿರಲಿಲ್ಲ. ಸೋಮವಾರ ಬೆಳಿಗ್ಗೆಯಿಂದ ಮತ್ತೆ ಹುಡುಕಾಟ ಮುಂದುವರಿಸಿದ್ದು, ಸಂಜೆ ವೇಳೆಗೆ ಪಾಣೆಮಂಗಳೂರು ಹೊಸ ಸೇತುವೆಯ ತಳಭಾಗದಲ್ಲೇ ಮೃತದೇಹ ಪತ್ತೆಯಾಗಿದೆ.
0 comments:
Post a Comment