ಪೊಲೀಸರ ಮೇಲೆ ಫೈರಿಂಗ್ ಪ್ರಕರಣ : ಇಬ್ಬರು ಅರೋಪಿಗಳು ಖುಲಾಸೆ - Karavali Times ಪೊಲೀಸರ ಮೇಲೆ ಫೈರಿಂಗ್ ಪ್ರಕರಣ : ಇಬ್ಬರು ಅರೋಪಿಗಳು ಖುಲಾಸೆ - Karavali Times

728x90

22 December 2020

ಪೊಲೀಸರ ಮೇಲೆ ಫೈರಿಂಗ್ ಪ್ರಕರಣ : ಇಬ್ಬರು ಅರೋಪಿಗಳು ಖುಲಾಸೆ

 


ಬಂಟ್ವಾಳ, ಡಿ. 22, 2020 (ಕರಾವಳಿ ಟೈಮ್ಸ್) : ಇಲ್ಲಿನ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪೋಲಿಸರ ಮೇಲೆ ಕಾರು ಚಲಾಯಿಸಿ ಪೈರಿಂಗ್ ಮಾಡಿ ಕೊಲೆಗೆ ಯತ್ನಿಸಿದ ಘಟನೆಗೆ ಸಂಬಂದಿಸಿ ಇಬ್ಬರು ಆರೋಪಿಗಳಾದ ಮಹಮ್ಮದ್ ಮನ್ಸೂರ್ ಮತ್ತು ಅಮ್ಮಿ ಯಾನೆ ಹಮೀದ್ ಎಂಬವರನ್ನು ಮಂಗಳೂರು ನಾಲ್ಕನೇ  ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಖುಲಾಸೆ ಗೊಳಿಸಿ ತೀರ್ಪು ನೀಡಿದೆ. ಆರೋಪಿಗಳ ಪರವಾಗಿ ಬಂಟ್ವಾಳದ ನ್ಯಾಯವಾದಿ ಸುರೇಶ್ ಪೂಜಾರಿ ವಾದಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರು ಆರೋಪಿಗಳಾದ ಸದ್ದಾಂ ಹುಸೈನ್‌ ಹಾಗೂ ಮಹಮ್ಮದ್ ಇರ್ಶಾದ್ ಅವರಿಗೆ  ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಒಂದು ವರ್ಷದ ಜೈಲು ಶಿಕ್ಷೆ ಹಾಗೂ ತಲಾ‌3 ಸಾವಿರ ರೂಪಾಯಿ ದಂಡ  ವಿಧಿಸಿ ತೀರ್ಪು ನೀಡಿತ್ತು.

     ಕಳೆದ 2018 ರ ಜೂನ್ 1 ರಂದು ಬೆಳ್ತಂಗಡಿ ತಾಲೂಕು ಗುರುವಾಯನಕೆರೆ ವ್ಯಾಪ್ತಿಯಲ್ಲಿ ರಾತ್ರಿ 11-30 ಗಂಟೆಗೆ ಅನುಮಾನಸ್ಪದವಾಗಿ ತಿರುಗುತ್ತಿದ್ದ ಕಾರನ್ನು ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಗುರುವಾಯನಕೆರೆ ಪೊಲೀಸ್ ಚೆಕ್ ಪಾಯಿಂಟ್‍ನಲ್ಲಿ ನಿಲ್ಲಿಸಲು ಸೂಚನೆ ನೀಡಿದರೂ ನಿಲ್ಲಿಸದೆ ಬಂಟ್ವಾಳ ಕಡೆ ಬರುತ್ತಿದ್ದ ಕಾರನ್ನು ರಾತ್ರಿ ಗಸ್ತಿನಲ್ಲಿದ್ದ ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್ಸೈ ಹಾಗೂ ಬಂಟ್ವಾಳ ನಗರ ಠಾಣಾ ಪಿಎಸ್ಸೈ ಅವರ ತಂಡ ಮಣಿಹಳ್ಳದ ಬಳಿ ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದರೂ ನಿಲ್ಲಿಸದೆ ಸಿಬ್ಬಂದಿಯವರ ಮೇಲೆ ಕಾರು ಚಲಾಯಿಸಲು ಬಂದಾಗ ಅಪಾಯದ ಮುನ್ಸೂಚನೆ ಅರಿತ ಬಂಟ್ವಾಳ ಗ್ರಾಮಾಂತರ ಎಸ್ಸೈ ಪ್ರಸನ್ನ ಅವರು ತಮ್ಮ ಇಲಾಖಾ ಪಿಸ್ತೂಲಿನಿಂದ ಕಾರಿನ ಕಡೆ ಫೈರಿಂಗ್ ಮಾಡಿದ್ದು, ಇದೇ ವೇಳೆ ಬಂಟ್ವಾಳ ನಗರ ಠಾಣಾ ಎಸ್ಸೈ ಚಂದ್ರಶೇಖರ್ ಅವರು ಕಾರಿನ ಚಕ್ರಕ್ಕೆ ತಮ್ಮ ಬಳಿ ಇದ್ದ ಪಂಪ್ ಆಕ್ಷನ್ ಗನ್‍ನಿಂದ ಫೈರಿಂಗ್ ಮಾಡಿದ್ದು, ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಲು ಬಂದಾಗ ಸಿಬ್ಬಂದಿಯವರೊಂದಿಗೆ ಮೂವರು ಆರೋಪಿಗಳಾದ ಮಹಮ್ಮದ್ ಮುಕ್ಸೀನ್, ಸದ್ದಾಂ ಹುಸೈನ್, ಮಹಮ್ಮದ್ ಇರ್ಶಾದ್ ಅವರನ್ನು ವಶಕ್ಕೆ ಪಡೆದಿದ್ದು, ಮತ್ತಿಬ್ಬರು ಆರೋಪಿಗಳಾದ ಮನ್ಸೂರ್ ಹಾಗೂ ಅಮ್ಮಿ ತಪ್ಪಿಸಿಕೊಂಡಿದ್ದರು.

     ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 94/2018 ಕಲಂ 399, 402, 353, 307 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು. ಬಂಟ್ವಾಳ ಸಿಐ ಟಿ ಡಿ ನಾಗರಾಜ್ ತನಿಖೆ ನಡೆಸಿ ಮಾನ್ಯ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಸದ್ರಿ ಪ್ರಕರಣವು 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಎಸ್ ಸಿ ನಂಬ್ರ 201/2018 ಮತ್ತು 246/2018 ರಂತೆ ವಿಚಾರಣೆಗೊಂಡು ಈ ತೀರ್ಪು ಹೊರಬಿದ್ದಿದೆ.

 ಪ್ರಕರಣದ ಇನ್ನೋರ್ವ ಆರೋಪಿ ಮಹಮ್ಮದ್ ಮುಕ್ಸೀನ್ ತಲೆಮರೆಸಿಕೊಂಡಿದ್ದು, ಆತನ ವಿರುದ್ದ ವಿಚಾರಣೆ ಮುಂದುವರಿದಿದೆ.







  • Blogger Comments
  • Facebook Comments

0 comments:

Post a Comment

Item Reviewed: ಪೊಲೀಸರ ಮೇಲೆ ಫೈರಿಂಗ್ ಪ್ರಕರಣ : ಇಬ್ಬರು ಅರೋಪಿಗಳು ಖುಲಾಸೆ Rating: 5 Reviewed By: karavali Times
Scroll to Top