ದೆಹಲಿಯಿಂದ ವಾಪಾಸಾದ ನಲಪಾಡ್ಗೆ ಬೆಂಬಲಿಗರಿಂದ ಭವ್ಯ ಸ್ವಾಗತ
ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಬದಲಾದ ಬಗ್ಗೆ ಸ್ಪಷ್ಟನೆ ನೀಡದ ನಲಪಾಡ್
ಬೆಂಗಳೂರು, ಫೆ. 07, 2021 (ಕರಾವಳಿ ಟೈಮ್ಸ್) : ಇತ್ತೀಚೆಗೆ ನಡೆದ ರಾಜ್ಯ ಯುವ ಕಾಂಗ್ರೆಸ್ ಚುನಾವಣಾ ಫಲಿತಾಂಶ ಘೋಷಣೆಯ ಬಳಿಕ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಶಾಂತಿನಗರ ಕಾಂಗ್ರೆಸ್ ಶಾಸಕ ಎನ್ ಎ ಹಾರಿಸ್ ಅವರ ಪುತ್ರ ಮುಹಮ್ಮದ್ ನಲಪಾಡ್ ಅವರನ್ನು ಅಪಾರ ಪ್ರಮಾಣದ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ವಿಮಾನ ನಿಲ್ದಾಣದಲ್ಲಿ ಭರ್ಜರಿಯಾಗಿ ಸ್ವಾಗತಿಸಿ, ಬರಮಾಡಿಕೊಂಡಿದ್ದಾರೆ.
ಕಾರ್ಯಕರ್ತರು ಹಾಗೂ ಬೆಂಬಲಿಗರು ಬೃಹತ್ ಪುಷ್ಪಹಾರ ಹಾಕಿ ನಲಪಾಡ್ ಮುಹಮ್ಮದ್ಗೆ ಭರ್ಜರಿ ಸ್ವಾಗತ ಕೋರಿದರು. ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ನಲಪಾಡ್ ಅವರು, ನಾನು ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿದ್ದು, ಕಾಂಗ್ರೆಸ್ ಪಕ್ಷ ನನಗೆ ತಾಯಿ ಇದ್ದಂತೆ. ಕಾಂಗ್ರೆಸ್ ಪಕ್ಷದ ಮೇಲೆ ಹಾಗೂ ಪಕ್ಷದ ನಾಯಕರ ಮೇಲೆ ನನಗೆ ನೂರಕ್ಕೆ ನೂರರಷ್ಟು ನಂಬಿಕೆ ಇದೆ ಎಂದು ಪಕ್ಷ ನಿಷ್ಠೆಯ ಬಗ್ಗೆ ಮನಬಿಚ್ಚಿ ಮಾತನಾಡಿದರು. ಆದರೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಬದಲಾದ ಬಗ್ಗೆ ನಲಪಾಡ್ ಯಾವುದೇ ಸ್ಪಷ್ಟನೆ ನೀಡಿಲ್ಲ.
ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಚುನಾವಣಾ ಫಲಿತಾಂಶದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮತದಾರರ ಮನಗೆಲ್ಲುವಲ್ಲಿ ನಲಪಾಡ್ ಮುಹಮ್ಮದ್ ಯಶಸ್ವಿಯಾಗಿದ್ದರೂ ಪಕ್ಷದ ಫೇಮ್ ಕಮಿಟಿಯ ತೀರ್ಮಾನದಂತೆ ನಲಪಾಡ್ ಅವರನ್ನು ಅವರನ್ನು ಅನೂರ್ಜಿತಗೊಳಿಸಿ ಎರಡನೇ ಸ್ಥಾನ ಪಡೆದ ರಕ್ಷಾ ರಾಮಯ್ಯ ಅವರನ್ನು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಪಟ್ಟಕ್ಕೇರಿಸಲಾಗಿತ್ತು.
ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಕಳೆದ ಜನವರಿಯಲ್ಲಿ ನಡೆದ ಚುನಾವಣೆಯ ಫಲಿತಾಂಶವನ್ನು ಎಐಸಿಸಿ ಕಳೆದ ಗುರುವಾರ ಸಂಜೆ ಘೋಷಿಸಿತ್ತು. ಶಾಂತಿನಗರ ಶಾಸಕ ಎನ್ ಎ ಹಾರಿಸ್ ಅವರ ಪುತ್ರ ನಲಪಾಡ್ ಮುಹಮ್ಮದ್ ಅವರು ಅತೀ ಹೆಚ್ಚು 64,203 ಮತಗಳನ್ನು ಪಡೆದರೂ, 57,271 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದ ಮಾಜಿ ಸಚಿವ ಎಂ ಆರ್ ಸೀತಾರಾಂ ಅವರ ಪುತ್ರ ರಕ್ಷಾ ರಾಮಯ್ಯ ಅವರನ್ನು ಯುವ ಕಾಂಗ್ರೆಸ್ಸಿನ ನೂತನ ರಾಜ್ಯಾಧ್ಯಕ್ಷರನ್ನಾಗಿ ಘೋಷಿಸಲಾಗಿತ್ತು. ನಲಪಾಡ್ ಮುಹಮ್ಮದ್ ಅವರ ವಿರುದ್ದ ಕ್ರಿಮಿನಲ್ ಪ್ರಕರಣಗಳಿರುವ ಹಿನ್ನಲೆಯಲ್ಲಿ ಎಐಸಿಸಿಯ ಫೇಮ್ ಸಮಿತಿ ಅವರ ಸ್ಪರ್ಧೆಯನ್ನೇ ಅನೂರ್ಜಿತಗೊಳಿಸಿದೆ ಎಂದು ಹೇಳಲಾಗಿತ್ತು. ಈ ಒಂದು ಬೆಳವಣಿಗೆ ಸ್ವತಃ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲೇ ಒಂದು ರೀತಿಯ ಜಿಜ್ಞಾಸೆಗೆ ಕಾರಣವಾಗಿತ್ತು.
7 February 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment