ಸಾರ್ವಜನಿಕ ಉದ್ಯಮ ಖಾಸಗೀಕರಣ ವಿರೋಧಿಸಿ ಮಾರ್ಚ್ 16 ರಂದು ಬೃಹತ್ ಪ್ರತಿಭಟನೆ : ಖಾಸಗೀಕರಣ ವಿರೋಧಿ ವೇದಿಕೆ ಘೋಷಣೆ - Karavali Times ಸಾರ್ವಜನಿಕ ಉದ್ಯಮ ಖಾಸಗೀಕರಣ ವಿರೋಧಿಸಿ ಮಾರ್ಚ್ 16 ರಂದು ಬೃಹತ್ ಪ್ರತಿಭಟನೆ : ಖಾಸಗೀಕರಣ ವಿರೋಧಿ ವೇದಿಕೆ ಘೋಷಣೆ - Karavali Times

728x90

1 March 2021

ಸಾರ್ವಜನಿಕ ಉದ್ಯಮ ಖಾಸಗೀಕರಣ ವಿರೋಧಿಸಿ ಮಾರ್ಚ್ 16 ರಂದು ಬೃಹತ್ ಪ್ರತಿಭಟನೆ : ಖಾಸಗೀಕರಣ ವಿರೋಧಿ ವೇದಿಕೆ ಘೋಷಣೆ

ಬೆಂಗಳೂರು, ಮಾ. 02, 2021 (ಕರಾವಳಿ ಟೈಮ್ಸ್) : ದೇಶದ ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಣಗೊಳಿಸುವುದರ ವಿರುದ್ದ ಸಂಘಟಿತರಾಗಿ ಹೋರಾಟ ಮಾಡುವ ಉದ್ದೇಶದಿಂದ ಮಾರ್ಚ್ 16 ರಂದು ಬೆಂಗಳೂರಿನಲ್ಲಿ ಖಾಸಗೀಕರಣ ವಿರೋಧಿ ವೇದಿಕೆ ವತಿಯಿಂದ ಬೃಹತ್ ಹೋರಾಟ ಆಯೋಜಿಸಲಾಗಿದೆ. ಸೋಮವಾರ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಸಂಘಟನೆಗಳ ಮುಖಂಡರುಗಳ ಉಪಸ್ಥಿತಿಯಲ್ಲಿ ಖಾಸಗೀಕರಣ ವಿರೋಧಿ ಸಮಿತಿಯ ಸಂಚಾಲಕಿ ಎಸ್ ವರಲಕ್ಷ್ಮಿ ಈ ನಿರ್ಧಾರ ಪ್ರಕಟಿಸಿದ್ದಾರೆ. ಖಾಸಗೀಕರಣದ ವಿರುದ್ದ ಎಲ್ಲಾ ಸಂಘಟನೆಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ವಿರೋಧ ವ್ಯಕ್ತಪಡಿಸುತ್ತಲೇ ಬಂದಿವೆ. ಹಲವಾರು ಸಂಘ ಸಂಸ್ಥೆಗಳೂ ಕೂಡಾ ಇದಕ್ಕೆ ಧ್ವನಿಗೂಡಿಸಿವೆ. ಆದರೆ, ಪ್ರತ್ಯೇಕವಾಗಿ ನಡೆಸುವ ಹೋರಾಟವನ್ನು ಒಗ್ಗಟ್ಟಿನ ಧ್ವನಿಯಲ್ಲಿ ಮಾಡಬೇಕು ಎನ್ನುವ ಉದ್ದೇಶ ದುಂಡು ಮೇಜಿನ ಸಭೆಯಲ್ಲಿ ವ್ಯಕ್ತವಾಗಿದೆ ಎಂದ ಸಂಚಾಲಕಿ ವರಲಕ್ಷ್ಮಿ ಈ ಹಿನ್ನಲೆಯಲ್ಲಿ ಮಾರ್ಚ್ 16 ರಂದು ಬೆಂಗಳೂರಿನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಬಿಎಸ್‍ಎನ್‍ಎಲ್, ಬ್ಯಾಂಕುಗಳು, ವಿಮಾ ಕ್ಷೇತ್ರ, ವಿದ್ಯುತ್ ಕ್ಷೇತ್ರ, ಬಿಇಎಂಎಲ್ ಸೇರಿದಂತೆ ಎಲ್ಲಾ ಸಾರ್ವಜನಿಕ ಉದ್ಯಮದ ಕಾರ್ಮಿಕರು ಭಾಗವಹಿಸಲಿದ್ದಾರೆ ಎಂದಿದ್ದಾರೆ. ಈ ಪ್ರತಿಭಟನೆಯ ಮೂಲಕ ನಮ್ಮ ವಿಧಾನಸಭೆಯಲ್ಲಿ ರಾಜ್ಯದ ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಗೊಳಿಸದಂತೆ ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸುವ ಗುರಿಯನ್ನು ಹೊಂದಿದ್ದೇವೆ ಎಂದ ಅವರು ಖಾಸಗೀಕರಣ ವಿರೋಧಿ ವೇದಿಕೆ ಬೆಂಗಳೂರು ಶಾಸಕರ ಭವನದ ಸಭಾಂಗಣದಲ್ಲಿ ಆಯೋಜಿಸಿದ್ದ ಸಾರ್ವಜನಿಕ ರಂಗ ಮತ್ತು ಅಭಿವೃದ್ದಿ ಎನ್ನುವ ದುಂಡು ಮೇಜಿನ ಸಭೆಯಲ್ಲಿ ಬಿಇಎಂಎಲ್ ಕಾರ್ಮಿಕ ಸಂಘಟನೆಗಳು ನೀಡಿದ ಮನವಿಯನ್ನು ಸ್ವೀಕರಿಸಿ ರಾಜ್ಯಸಭಾ ಸದಸ್ಯ ಎಲ್ ಹನುಮಂತಯ್ಯ ಮಾತನಾಡಿದರು. ದೇಶದ ಸಂವಿಧಾನದಲ್ಲಿ ಸಾಮಾಜಿಕವಾಗಿ ಕೆಳ ಹಂತದ ವ್ಯಕ್ತಿಗಳನ್ನು ಮೇಲಕ್ಕೆತ್ತುವ ಕಾರಣದಿಂದ ಮೀಸಲಾತಿಯನ್ನು ನೀಡಲಾಗಿತ್ತು. ಇದೇ ರೀತಿ ದೇಶದ ಆರ್ಥಿಕ ಪರಿಸ್ಥಿತಿ ಹಾಗೂ ದೇಶದ ಅಭಿವೃದ್ದಿಗೆ ಅತ್ಯಂತ ಅಗತ್ಯವಿರುವ ಉದ್ಯಮಗಳನ್ನು ಲಾಭದ ಉದ್ದೇಶವೇ ಇಲ್ಲದೆ ಸ್ಥಾಪಿಸಲಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರಕಾರ ನಷ್ಟದ ಕಾರಣ ನೀಡಿ ಲಾಭದಲ್ಲಿರುವ ಉದ್ಯಮಗಳನ್ನು ಖಾಸಗೀಕರಣ ಮಾಡಲು ಹೊರಟಿದೆ. ದೇಶದ ಜನರಿಗೆ ಉದ್ಯೋಗಾವಕಾಶ ಒದಗಿಸಲು ಸ್ಥಾಪಿಸಲಾದ ಕಾರ್ಖಾನೆಗಳನ್ನು ಇಂದು ಖಾಸಗೀಕರಣ ಮಾಡಲಾಗುತ್ತಿದೆ. ಕಾಂಟ್ರ್ಯಾಕ್ಟ್ ಪದ್ದತಿಯನ್ನು ಅಳವಡಿಸುವ ಮೂಲಕ ಸಾಮಾಜಿಕ ನ್ಯಾಯದ ಅಡಿಯಲ್ಲಿ ಉದ್ಯೋಗಾವಕಾಶ ಹಾಗೂ ಉದ್ಯೋಗ ಭದ್ರತೆ ನೀಡಲಾಗುತ್ತಿದ್ದ ಮೂಲ ಉದ್ದೇಶವೇ ಇಲ್ಲಿ ಕಾಣೆಯಾಗುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿವೆ ಎಂದರು. ಇವೆಲ್ಲಾ ವಿಷಯಗಳ ಮಧ್ಯೆ ಸಾಮಾಜಿಕ ನ್ಯಾಯದ ಅಡಿಯಲ್ಲಿ ನೀಡಲಾಗುತ್ತಿದ್ದ ಮೀಸಲಾತಿಯನ್ನು ಅಶಕ್ತಗೊಳಿಸುವ ಹುನ್ನಾರಕ್ಕೆ ಕೇಂದ್ರ ಸರಕಾರ ಮುಂದಾಗಿದೆ. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಸಮಾಜದ ಮೇಲ್ಪಂಕ್ತಿಯ ಜನರು ಮೀಸಲಾತಿ ಹೋರಾಟ ನಡೆಸುತ್ತಿರುವುದು ವಿಪರ್ಯಾಸ. ಮೀಸಲಾತಿ ತನ್ನ ಅರ್ಥವನ್ನು ಇನ್ನು ಉಳಿಸಿಕೊಳ್ಳಬೇಕಾದರೆ ಎಲ್ಲಾ ಸಂಘಟನೆಗಳು ಒಗ್ಗಟ್ಟಿನಿಂದ ಹೋರಾಟ ಮಾಡುವ ಮೂಲಕ ಖಾಸಗೀಕರಣವನ್ನು ತಡೆಯಬೇಕು. ಉದ್ಯೋಗ ಭದ್ರತೆ ಇಲ್ಲದೆ ಸ್ವಾಭೀಮಾನಿ ಭಾರತ ಹೇಗೆ ಕಟ್ಟಲು ಸಾಧ್ಯ ಎಂದವರು ಪ್ರಶ್ನಿಸಿದರು. ರಂಗಕರ್ಮಿ ಹಾಗೂ ಚಲನಚಿತ್ರ ನಿರ್ದೇಶಕ ಬಿ. ಸುರೇಶ್ ಮಾತನಾಡಿ, ದೇಶ ಭಕ್ತಿಯ ವಿಷಯವನ್ನು ಮುಂದೆ ತಂದು ಪ್ರಶ್ನೆ ಮಾಡುವುದನ್ನೇ ನಿಲ್ಲಿಸಲಾಗಿದೆ. ದೇಶ ಪ್ರೇಮ ಹಾಗೂ ದೇಶ ಭಕ್ತಿಯ ನಡುವೆ ಇರುವ ವ್ಯತ್ಯಾಸವನ್ನು ನಾವು ನಮ್ಮ ಯುವ ಪೀಳಿಗೆಗೆ ತಿಳಿಸಬೇಕಾಗಿದೆ. ದೇಶದಲ್ಲಿರುವ ಸಾರ್ವಜನಿಕ ಉದ್ಯಮಗಳ ಖಾಸಗೀಕರಣವನ್ನು ತಡೆಯುವುದು ದೇಶ ಪ್ರೇಮವೇ ಆಗಿದೆ. ರೈತರ ಚಳುವಳಿಯ ರೀತಿಯಲ್ಲಿ ದೇಶಾದ್ಯಂತ ಸಂಘಟಿತರಾಗಿ ಒಗ್ಗಟ್ಟಿನಿಂದ ಹೋರಾಟ ಮಾಡಬೇಕಾಗಿದೆ. ಸಾರ್ವಜನಿಕ ಉದ್ಯಮಗಳು ಖಾಸಗೀಕರಣ ಆದರೆ ಮುಂದಿನ ಪೀಳಿಗೆಗೆ ಕೆಲಸದ ಭದ್ರತೆ ಇರುವುದಿಲ್ಲ. ಈ ಹಿನ್ನಲೆಯಲ್ಲಿ ಎಲ್ಲಾ ವರ್ಗದ ಜನರನ್ನು ಸಂಘಟಿಸಬೇಕಾಗಿದೆ ಎಂದು ಹೇಳಿದರು. ಸಭೆಯಲ್ಲಿ ಬಿಇಎಂಎಲ್ ಕಾರ್ಮಿಕ ಸಂಘಟನೆಯ ಅಧ್ಯಕ್ಷ ದೊಮ್ಮಲೂರು ಶ್ರೀನಿವಾಸ ರೆಡ್ಡಿ, ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್, ಪೆÇ್ರ. ಟಿ.ಆರ್. ಚಂದ್ರಶೇಖರ್, ಚಲನಚಿತ್ರ ನಿರ್ದೇಶಕ ಬಿ. ಸುರೇಶ್, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಕೆಪಿಟಿಸಿಎಲ್ ಎಂಪ್ಲಾಯೀಸ್ ಯೂನಿಯನ್ ಆರ್.ಎಚ್. ಲಕ್ಷ್ಮಿಪತಿ, ಮೀನಾಕ್ಷಿ ಸುಂದರಂ ಸೇರಿದಂತೆ ಹಲವು ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ಸಾರ್ವಜನಿಕ ಉದ್ಯಮ ಖಾಸಗೀಕರಣ ವಿರೋಧಿಸಿ ಮಾರ್ಚ್ 16 ರಂದು ಬೃಹತ್ ಪ್ರತಿಭಟನೆ : ಖಾಸಗೀಕರಣ ವಿರೋಧಿ ವೇದಿಕೆ ಘೋಷಣೆ Rating: 5 Reviewed By: karavali Times
Scroll to Top