ಬಂಟ್ವಾಳ, ಜೂನ್ 24, 2021 (ಕರಾವಳಿ ಟೈಮ್ಸ್) : ಸಜಿಪಮುನ್ನೂರು ಗ್ರಾಮ ಪಂಚಾಯತ್ ಹಾಗೂ ಬಂಟ್ವಾಳ ಪುರಸಭಾ ವ್ಯಾಪ್ತಿಯ ಗಡಿ ಪ್ರದೇಶವಾಗಿರುವ ಬಂಗ್ಲೆಗುಡ್ಡೆ-ನಂದಾವರ ಮಧ್ಯ ಪರಿಸರದ ಶ್ರೀ ಶಾರದಾ ಪ್ರೌಡಶಾಲಾ ಬಳಿ ಇರುವ ತ್ಯಾಜ್ಯ ಕೇಂದ್ರದ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರ ಮನವಿಗೆ ಕೊನೆಗೂ ಸ್ಪಂದಿಸಿದ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಅವರು ಬುಧವಾರ ಇಲ್ಲಿನ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಕ್ರಮ ಕೈಗೊಂಡಿದ್ದಾರೆ.
ಸ್ಥಳೀಯ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಅವರ ಕೋರಿಕೆ ಮೇರೆಗೆ ಪುರಸಭೆಯ ತ್ಯಾಜ್ಯ ವಿಲೇವಾರಿ ವಾಹನವನ್ನು ಸ್ಥಳಕ್ಕೆ ಕಳುಹಿಸಿ ನಂದಾವರ ಸೇತುವೆ ಬಳಿ ರಸ್ತೆ ಬದಿ ರಾಶಿ ಬಿದ್ದಿದ್ದ ತ್ಯಾಜ್ಯಗಳನ್ನು ವಿಲೇವಾರಿ ಮಾಡಿಸಲಾಗಿದೆ ಎಂದು ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ ಅವರು ಬಂಟ್ವಾಳ ಪುರಸಭಾ ವ್ಯಾಪ್ತಿಯ ಎಲ್ಲಾ ವಾರ್ಡ್ ಗಳಿಗೂ ಈಗಾಗಲೇ ಪುರಸಭೆಯ ಕಸ ವಿಲೇವಾರಿ ವಾಹನಗಳು ಸಮಪರ್ಕವಾಗಿ ಬರುತ್ತಿದ್ದು, ಸಾರ್ವಜನಿಕರು ತಮ್ಮ ಕಸ-ತ್ಯಾಜ್ಯಗಳನ್ನು ಅದೇ ವಾಹನಕ್ಕೆ ನೀಡಿ ಸಹಕರಿಸುತ್ತಿದ್ದಾರೆ. ಆದರೆ ನಂದಾವರ ಸೇತುವೆ ಬಳಿ ರಾಶಿ ಹಾಕಲಾಗುತ್ತಿರುವ ತ್ಯಾಜ್ಯ ಅದು ಬಂಟ್ವಾಳ ಪುರಸಭಾ ವ್ಯಾಪ್ತಿಯ ಸಾರ್ವಜನಿಕರದ್ದು ಅಲ್ಲದಾಗಿದ್ದು, ಇದು ಸಜಿಪಮುನ್ನೂರು ಗ್ರಾ ಪಂ ಸಹಿತ ಇತರ ಪಂಚಾಯತ್ ವ್ಯಾಪ್ತಿಯ ಜನ ತಂದು ಹಾಕುತ್ತಿರುವ ತ್ಯಾಜ್ಯಗಳು ಆಗಿರುವುದಾಗಿ ಈಗಾಗಲೇ ನಮ್ಮ ಗಮನಕ್ಕೆ ಬಂದಿರುತ್ತದೆ. ಈ ಬಗ್ಗೆ ಸಜಿಪಮುನ್ನೂರು ಗ್ರಾ ಪಂ ಆಡಳಿತ ಗಮನ ಹರಿಸಿ ತಮ್ಮ ವ್ಯಾಪ್ತಿಯ ತ್ಯಾಜ್ಯ ಎಸೆಯುವವರ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಪರಿಸರ ಸ್ವಚ್ಛವಾಗಿಡಲು ಸಹಕರಿಸಬೇಕಾಗಿದೆ. ಈ ಬಗ್ಗೆ ಈಗಾಗಲೇ ಪುರಸಭಾ ವತಿಯಿಂದ ಸಜಿಪಮುನ್ನೂರು ಗ್ರಾ ಪಂ ಅಭಿವೃದ್ದಿ ಅಧಿಕಾರಿಗೆ ಲಿಖಿತ ಪತ್ರವನ್ನೂ ಬರೆಯಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದಿದ್ದಾರೆ. ಸಜಿಪಮುನ್ನೂರು ಗ್ರಾ ಪಂ ವತಿಯಿಂದ ಕಸ-ತ್ಯಾಜ್ಯ ಸಂಗ್ರಹ ವಾಹನಗಳನ್ನು ಸಮಪರ್ಕವಾಗಿ ಮನೆ ಬಾಗಿಲಿಗೆ ಕಳುಹಿಸಿಕೊಟ್ಟು ಜನರೊಂದಿಗೆ ಸ್ಪಂದಿಸಿದಾಗ ಸಾರ್ವಜನಿಕ ಪ್ರದೇಶಗಳಲ್ಲಿ ಜನ ತ್ಯಾಜ್ಯ ಎಸೆಯುವುದನ್ನು ತಪ್ಪಿಸಬಹುದಾಗಿದ್ದು, ಈ ನಿಟ್ಟಿನಲ್ಲಿ ಪಂಚಾಯತ್ ಕ್ರಮ ವಹಿಸಬೇಕು ಎಂದು ಕೋರಲಾಗಿದೆ ಎಂದಿರುವ ಅಧ್ಯಕ್ಷ ಶರೀಫ್ ಪುರಸಭಾ ವ್ಯಾಪ್ತಿಯಲ್ಲಿ ತ್ಯಾಜ್ಯ ಸಮಸ್ಯೆ ಸಮರ್ಪಕ ನಿರ್ವಹಣೆಗೆ ಎಲ್ಲಾ ವಾರ್ಡ್ಗಳ ಆಯಕಟ್ಟಿನ ಪ್ರದೇಶಗಳಲ್ಲಿ ಸೀಸಿ ಕ್ಯಾಮೆರಾ ಅಳವಡಿಸಲು ಈಗಾಗಲೇ ನಿರ್ಣಯ ಕೈಗೊಂಡು ಅದಕ್ಕೆ ಫಂಡಿಂಗ್ ವ್ಯವಸ್ಥೆಯನ್ನೂ ಮಾಡಲಾಗಿ. ಈ ಸಂಬಂಧ ಕಡತ ಜಿಲ್ಲಾಧಿಕಾರಿಗಳಿಂದ ವಿಲೇವಾರಿಯಾಗಿ ಬಂದ ತಕ್ಷಣ ಸೀಸಿ ಕ್ಯಾಮೆರಾ ಅಳವಡಿಕೆ ಕಾರ್ಯ ನಡೆಯಲಿದೆ. ಆ ಮೂಲಕ ಸಾರ್ವಜನಿಕ ಪ್ರದೇಶಗಳಲ್ಲಿ ಕಸ ಎಸೆದು ಪರಿಸರ ಮಾಲಿನ್ಯ ಕಾರಣವಾಗುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಯಿಸಿರುವ ಸ್ಥಳೀಯ ಕೌನ್ಸಿಲರ್ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಅವರು, ನಮ್ಮ ವಾರ್ಡಿನ ಗಡಿ ಪ್ರದೇಶವಾಗಿರುವ ನಂದಾವರ ಸೇತುವೆ ಬಳಿ ತ್ಯಾಜ್ಯ ಎಸೆಯುವವರು ಗ್ರಾ ಪಂ ವ್ಯಾಪ್ತಿಗೆ ಸೇರಿದ ಸಾರ್ವಜನಿಕರು ಎಂಬುದನ್ನು ಈಗಾಗಲೇ ಖಚಿತಪಡಿಸಲಾಗಿದೆ. ಈ ಪರಿಸರದಲ್ಲಿ ನಮ್ಮ ವಾರ್ಡಿಗೆ ಸಂಬಂಧಪಟ್ಟ ಮನೆ-ಅಂಗಡಿ ಯಾವುದೂ ಇಲ್ಲದೆ ಇದ್ದು, ಎಲ್ಲವೂ ಅನತಿ ದೂರಲ್ಲಿದೆ. ಇಲ್ಲಿರುವ ಎಲ್ಲ ಮನೆ-ಅಂಗಡಿದಾರರು ಸಮಯಕ್ಕೆ ಸರಿಯಾಗಿ ಬರುವ ಪುರಸಭಾ ತ್ಯಾಜ್ಯ ಸಂಗ್ರಹ ವಾಹನಕ್ಕೆ ನೀಡಿ ಸಹಕಾರ ನೀಡುತ್ತಿರುವುದನ್ನು ವಾರ್ಡಿನ ಪ್ರತಿನಿಧಿಯಾಗಿ ನಾನು ಖಚಿತಪಡಿಸಿಕೊಂಡಿರುತ್ತೇನೆ. ಹೀಗಿರುತ್ತಾ ಇಲ್ಲಿನ ತ್ಯಾಜ್ಯ ಸಂಗ್ರಹ ತಾಣಕ್ಕೆ ಸಂಬಂಧಿಸಿ ವಿನಾ ಕಾರಣ ರಾಜಕಾರಣ ನಡೆಸುವ ಪ್ರಯತ್ನ ನಡೆಯುತ್ತಿದ್ದು, ಇದನ್ನು ಖಂಡಿತಾ ಸಹಿಸುವುದಿಲ್ಲ. ನಮ್ಮದೇನಿದ್ದರೂ ಅಭಿವೃದ್ದಿ ಪರ ಹಾಗೂ ಜನರ ಹಿತಕ್ಕೆ ಪೂರಕವಾದ ರಾಜಕೀಯವೇ ಹೊರತು ಕ್ಷುಲ್ಲಕ ಹಾಗೂ ಪುಕ್ಕಟೆ ಪ್ರಚಾರದ ರಾಜಕೀಯ ಅಲ್ಲವೇ ಅಲ್ಲ. ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಸೀಸಿ ಕ್ಯಾಮೆರಾ ಅಳವಡಿಸಿ ಸೂಕ್ತ ಕ್ರಮವನ್ನು ಪುರಸಭೆ ವತಿಯಿಂದ ಕೈಗೊಳ್ಳಲಾಗುವುದು ಎಂದಿದ್ದಾರೆ.
ಪಂಚಾಯತ್ ಪ್ರದೇಶಗಳ ಸಾರ್ವಜನಿಕರು ಪಂಚಾಯತ್ ವ್ಯಾಪ್ತಿಯಲ್ಲಿ ಕಸ ಸಂಗ್ರಹದ ವಾಹನಗಳು ಮನೆ ಬಾಗಿಲಿಗೆ ಹೋಗದೆ ಇರುವುದರಿಂದ ನಾಗರಿಕರು ತ್ಯಾಜ್ಯವನ್ನು ಪುರಸಭಾ ವ್ಯಾಪ್ತಿಯ ಪ್ರದೇಶಗಳಿಗೆ ತಂದು ಎಸೆಯುತ್ತಿದ್ದಾರೆ ಎಂಬುದು ಖಚಿತವಾಗಿದ್ದು, ಈ ಬಗ್ಗೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿ ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸಮಗ್ರ ಪರಿಶೀಲನೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ವಿನಾ ಕಾರಣ ರಾಜಕೀಯಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿರುವ ಸಿದ್ದೀಕ್ ಅವರು ಈ ಪ್ರದೇಶದ ತ್ಯಾಜ್ಯ ಸಂಗ್ರಹವನ್ನು ಸಾರ್ವಜನಿಕರ ಕೋರಿಕೆ ಮೇರೆಗೆ ಇದು ಕೊನೆಯ ಬಾರಿಗೆ ಅಧ್ಯಕ್ಷರ ಜೊತೆ ಸಮಾಲೋಚಿಸಿ ಪುರಸಭೆ ವತಿಯಿಂದ ವಿಲೇವಾರಿ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಸಂಬಂಧಪಟ್ಟ ಪಂಚಾಯತ್ ಆಡಳಿತಗಳೇ ಹೊಣೆ ಹೊತ್ತುಕೊಂಡು ಸಮರ್ಪಕ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
0 comments:
Post a Comment