ಬಂಟ್ವಾಳ, ಜೂನ್ 23, 2021 (ಕರಾವಳಿ ಟೈಮ್ಸ್) : ತಾಲೂಕಿನ ಪೂಂಜಾಲಕಟ್ಟೆ ಸರಕಾರಿ ಆಸ್ಪತ್ರೆ ಸಮೀಪದ ಭಜನಾ ಮಂದಿರ ಪಕ್ಕದ ಬಾಡಿಗೆ ಮನೆ ನಿವಾಸಿ ತಂದೆ ಬಾಬು ನಾಯ್ಕ (58) ಹಾಗೂ ಅವರ ಅಪ್ರಾಪ್ತ ಪುತ್ರ ಸಾತ್ವಿಕ್ (16) ಅವರು ಬುಧವಾರ ಪರಸ್ಪರ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಇಬ್ಬರೂ ದುರಂತ ಸಾವನ್ನಪ್ಪಿದ್ದಾರೆ.
ಜಗಳವಾಡಿಕೊಂಡ ತಂದೆ-ಮಗ ಬಳಿಕ ಅಪ್ರಾಪ್ತ ಪುತ್ರನನ್ನು ಮಾರಕಾಯುಧದಿಂದ ಕಡಿದು ಕೊಂದ ತಂದೆ ನಂತರ ತಾನು ಕೂಡಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಪ್ಪ-ಮಗನ ಜಗಳದ ವೇಳೆ ತಾಯಿ ಸುಗಂಧಿ ಮನೆಯಲ್ಲಿ ಇಲ್ಲದೆ ಇದ್ದು ಸಮೀಪದ ಗೇರು ಬೀಜ ಕಾರ್ಖಾನೆಗೆ ಎಂದಿನಂತೆ ಕೆಲಸಕ್ಕೆ ತೆರಳಿದ್ದರು ಎನ್ನಲಾಗಿದೆ. ಸುಗಂಧಿ ಮನೆಗೆ ಬಂದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಮೃತ ಸಾತ್ವಿಕ್ ಪೂಂಜಾಲಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಎನ್ನಲಾಗಿದ್ದು, ತಂದೆ ಬಾಬು ನಾಯ್ಕ ಮದ್ಯ ವ್ಯಸನಿಯಾಗಿದ್ದು, ನಿತ್ಯವೂ ಮಗನ ಜೊತೆ ಜಗಳ ಮಾಡಿಕೊಂಡಿರುತ್ತಿದ್ದ ಎಂದು ತಿಳಿಸಿರುವ ಸ್ಥಳೀಯರು ಬುಧವಾರ ಮಧ್ಯಾಹ್ನ ಕೂಡಾ ಇಬ್ಬರು ಜಗಳವಾಡಿಕೊಂಡು ಬಳಿಕ ಮಗನನ್ನು ತಂದೆ ಕಡಿದು ಕೊಲೆಗೈದು ನಂತರ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಧಾವಿಸಿರುವ ಪೂಂಜಾಲಕಟ್ಟೆ ಪಿಎಸ್ಸೈ ಸೌಮ್ಯ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.
0 comments:
Post a Comment