ಬಂಟ್ವಾಳ, ಮಾರ್ಚ್ 19, 2026 (ಕರಾವಳಿ ಟೈಮ್ಸ್) : ಬಂಟ್ವಾಳ ಪುರಸಭಾ ವ್ಯಾಪ್ತಿಯ ನಗರಗಳಿಗೆ ನಿರಂತರ ಕುಡಿಯುವ ನೀರಿಗಾಗಿ ಕೈಗೊಂಡ ಸಮಗ್ರ ಕುಡಿಯುವ ನೀರು ಯೋಜನೆಯ ಮೈನ್ ಪೈಪ್ ಲೈನ್ ನೀರಿನ ರಭಸ ತಾಳಲಾರದೆ ಪೈಪ್ ಹಾನಿಯಾಗಿ ನೀರು ಕಾರಂಜಿಯಂತೆ ಚಿಮ್ಮಿದ ದೃಶ್ಯ ಮೊಡಂಕಾಪು ಎಂಬಲ್ಲಿ ಗುರುವಾರ ಕಂಡು ಬಂತು.
ಸಮಗ್ರ ಕುಡಿಯುವ ನೀರಿನ ಕಾಮಗಾರಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾರ್ಯಗತಗೊಳ್ಳದೆ ಇದ್ದು, ಪ್ರಾಯೋಗಿಕ ಹಂತದಲ್ಲೇ ಇದೆ. ಈ ಹಿನ್ನಲೆಯಲ್ಲಿ ನೀರಿನ ರಭಸ ತಾಳಲಾರದೆ ಇಲ್ಲಿನ ಮುಖ್ಯ ಪೈಪ್ ಲೈನ್ ಹಾನಿಯಾಗಿ ನೀರು ಮೇಲಕ್ಕೆ ಚಿಮ್ಮಲು ಆರಂಭಿಸಿದೆ. ಇದು ನೋಡುಗರ ಕಣ್ಣಿಗೆ ನೀರಿನ ಕಾರಂಜಿಯ ಬುಗ್ಗೆಯಂತೆ ಕಂಡು ಬಂದಿದೆ. ಸಾರ್ವಜನಿಕರು ಈ ದೃಶ್ಯವನ್ನು ಮೊಬೈಲ್ ಮೂಲಕ ಸೆರೆ ಹಿಡಿದು ಆನಂದ ಅನುಭವಿಸಿದ್ದಾರೆ.
ಈ ಬಗ್ಗೆ ಸಾರ್ವಜನಿಕರು ಪುರಸಭೆ ಹಾಗೂ ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳ ಗಮನಕ್ಕೆ ತಂದಿದ್ದು, ತಕ್ಷಣ ಎರಡೂ ಭಾಗದ ಅಧಿಕಾರಿಗಳು ಸ್ಪಂದಿಸಿದ್ದಾರೆ. ನೀರಿನ ಪ್ರಮಾಣ ಜಾಸ್ತಿ ಇರುವುದರಿಂದ ತಕ್ಷಣ ದುರಸ್ತಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಿಲ್ಲ. ನೀರು ಕಡಿಮೆಯಾದ ತಕ್ಷಣ ಶುಕ್ರವಾರ ಬೆಳಿಗ್ಗೆ ಈ ಬಗ್ಗೆ ದುರಸ್ತಿ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












0 comments:
Post a Comment