ಕೋವಿಡ್ ಆತಂಕದ ನಡುವೆ ಸುಸೂತ್ರವಾಗಿ ಮೊದಲ ದಿನ ಪೂರೈಸಿದ ಎಸ್ಸೆಸ್ಸೆಲ್ಸಿ ಪರೀಕ್ಷೆ : ನಿರೀಕ್ಷೆಗೂ ಮೀರಿ ನಿರ್ಭೀತಿಯಿಂದ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು, ಶೇ 99.67 ಮಂದಿ ವಿದ್ಯಾರ್ಥಿಗಳು ಹಾಜರ್ - Karavali Times ಕೋವಿಡ್ ಆತಂಕದ ನಡುವೆ ಸುಸೂತ್ರವಾಗಿ ಮೊದಲ ದಿನ ಪೂರೈಸಿದ ಎಸ್ಸೆಸ್ಸೆಲ್ಸಿ ಪರೀಕ್ಷೆ : ನಿರೀಕ್ಷೆಗೂ ಮೀರಿ ನಿರ್ಭೀತಿಯಿಂದ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು, ಶೇ 99.67 ಮಂದಿ ವಿದ್ಯಾರ್ಥಿಗಳು ಹಾಜರ್ - Karavali Times

728x90

19 July 2021

ಕೋವಿಡ್ ಆತಂಕದ ನಡುವೆ ಸುಸೂತ್ರವಾಗಿ ಮೊದಲ ದಿನ ಪೂರೈಸಿದ ಎಸ್ಸೆಸ್ಸೆಲ್ಸಿ ಪರೀಕ್ಷೆ : ನಿರೀಕ್ಷೆಗೂ ಮೀರಿ ನಿರ್ಭೀತಿಯಿಂದ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು, ಶೇ 99.67 ಮಂದಿ ವಿದ್ಯಾರ್ಥಿಗಳು ಹಾಜರ್

ಬೆಂಗಳೂರು, ಜುಲೈ 20, 2021 (ಕರಾವಳಿ ಟೈಮ್ಸ್) : ಕೋವಿಡ್ 2ನೇ ಹಾಗೂ 3ನೇ ಅಲೆಯ ಮಧ್ಯದಲ್ಲಿ ತೀವ್ರ ಆತಂಕದ ಇದ್ದರೂ ಇದೆಲ್ಲವನ್ನೂ ಮೆಟ್ಟಿ ರಾಜ್ಯಾದ್ಯಂತ ಸೋಮವಾರ ಮೊದಲ ದಿನದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಸಾಂಗವಾಗಿ ನೆರವೇರಿದೆ. ಪರೀಕ್ಷೆಯ ಮೊದಲ ದಿನವಾದ ಸೋಮವಾರ ಕೋರ್ ಸಬ್ಜೆಕ್ಟ್ ಗಳಾದ ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಈ ಮೂರು ವಿಷಯಗಳಿಗೆ ಪರೀಕ್ಷೆ ನಡೆದಿದ್ದು, ಪರೀಕ್ಷೆಗೆ ನೋಂದಾಯಿಸಿದ್ದ 8.50 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೈಕಿ ಸರಾಸರಿ ಶೇ.99.67 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು. 

ಪರೀಕ್ಷೆ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಗಣಿತ ವಿಷಯಕ್ಕೆ ನೋಂದಾಯಿಸಿಕೊಂಡಿದ್ದ 8,52,191 ವಿದ್ಯಾರ್ಥಿಗಳ ಪೈಕಿ 8,49,199 ಮಂದಿ (ಶೇ.99.64) ಹಾಜರಾಗಿದ್ದರು. 2992 ಮಕ್ಕಳು ಗೈರು ಹಾಜರಾಗಿದ್ದರು. ವಿಜ್ಞಾನ ವಿಷಯಕ್ಕೆ ನೋಂದಾಯಿಸಿಕೊಂಡಿದ್ದ 8,43,976 ಅಭ್ಯರ್ಥಿಗಳ ಪೈಕಿ 8,40,841 ಅಭ್ಯರ್ಥಿಗಳು (ಶೇ.99.62) ಹಾಜರಾಗಿದ್ದು, 3127 ಮಕ್ಕಳು ಗೈರು ಹಾಜರಾಗಿದ್ದಾರೆ. ಸಮಾಜ ವಿಜ್ಞಾನ ವಿಷಯಕ್ಕೆ ನೋಂದಾಯಿಸಿಕೊಂಡಿದ್ದ 8,24,689 ಅಭ್ಯರ್ಥಿಗಳ ಪೈಕಿ 8,21,823 ಅಭ್ಯಥಿಗಳು (ಶೇ.99.65) ಹಾಜರಾಗಿದ್ದರು ಎಂದರು. 

ಕಳೆದ ವರ್ಷ ಮೂರೂ ವಿಷಯಗಳಲ್ಲಿ ಸರಾಸರಿ ಶೇ.98.30ಕ್ಕೂ ಹೆಚ್ಚು ಮಕ್ಕಳು ಹಾಜರಾಗಿದ್ದರೆ, ಈ ಬಾರಿ ಶೇ.99.60ಗೂ ಹೆಚ್ಚು ಮಕ್ಕಳು ಪರೀಕ್ಷೆ ಬರೆದಿದ್ದಾರೆ. ರಾಜ್ಯದ ಎಲ್ಲ 4885 ಪರೀಕ್ಷಾ ಕೇಂದ್ರಗಳಲ್ಲೂ ವಿದ್ಯಾರ್ಥಿಗಳು ಯಾವುದೇ ಗೊಂದಲ, ಸಮಸ್ಯೆಗಳಿಲ್ಲದೆ ಯಶಸ್ವಿಯಾಗಿ ಪರೀಕ್ಷೆ ಬರೆದಿದ್ದಾರೆ. ಎಲ್ಲೆಡೆ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ಪರೀಕ್ಷೆ ನಡೆಸಲಾಗಿದೆ ಎಂದು ಹೇಳಿದರು.

ದಕ್ಷಿಣ ಕನ್ನಡ, ಚಿಕ್ಕೋಡಿ ಸೇರಿ ಗಡಿ ಭಾಗದ ಜಿಲ್ಲೆಗಳ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಕೇರಳ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಿಂದ ಒಟ್ಟು 770 ಮಕ್ಕಳು ಬಂದಿದ್ದು, ಸುಸೂತ್ರವಾಗಿ ನಿರ್ಭೀತಿಯಿಂದ ಪರೀಕ್ಷೆ ಬರೆದಿದ್ದಾರೆ. ಅವರಿಗೆ ಗಡಿ ಪ್ರದೇಶದಿಂದ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. ಕೋಲಾರದ ಕುರುಬರ ಪೇಟೆಯ ನಿವಾಸಿ ಪೆÇಲೀಸ್ ಇಲಾಖೆಯ 55 ವರ್ಷ ವಯಸ್ಸಿನ ಸಿಬ್ಬಂದಿಯೊಬ್ಬರು ಖಾಸಗಿ ಅಭ್ಯರ್ಥಿಯಾಗಿ ಕಳೆದ ವರ್ಷ ಪರೀಕ್ಷೆಗೆ ಹಾಜರಾಗಿ ಅನುತ್ತೀರ್ಣರಾಗಿದ್ದರು. ಈ ಬಾರಿ ಪುನರಾವರ್ತಿತ ಅಭ್ಯರ್ಥಿಯಾಗಿ ಪರೀಕ್ಷೆಗೆ ಹಾಜರಾಗಿದ್ದರು ಎಂದು ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದರು. 

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕುರು ದ್ವೀಪದ ಶಿಲ್ಪಾ ಮತ್ತು ಸಂಜನಾ ಎಂಬ ವಿದ್ಯಾರ್ಥಿನಿಯರಿಗೆ ಪರೀಕ್ಷೆಗೆ ಬರಲು ದೋಣಿಯ ವ್ಯವಸ್ಥೆ ಮಾಡಲಾಗಿತ್ತು. ಅವರು ಪರೀಕ್ಷೆ ಬಳಿಕ ಬೋಟ್‍ನಲ್ಲೇ ಸುರಕ್ಷಿತವಾಗಿ ಮನೆ ತಲುಪಿದ್ದಾರೆ. ಉಳಿದೆಡೆ ಸಾರಿಗೆ ಸೇವೆ ಅಗತ್ಯವಿದ್ದ ಮಕ್ಕಳಿಗೆ ಕೆಎಸ್‍ಆರ್‍ಟಿಸಿ, ಇಲಾಖಾ ಜೀಪು ಮತ್ತಿತರ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು.

ಮಂಗಳೂರು ತಾಲೂಕಿನ ತೊಕ್ಕಟ್ಟು ಗ್ರಾಮದ ಖಾಸಗಿ ಪ್ರೌಢಶಾಲಾ ಪರೀಕ್ಷಾ ಕೇಂದ್ರದ ಶಾಲೆಯ ವಿಜ್ಞಾನ ಪ್ರಯೋಗಾಲಯದಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟಿನಿಂದಾಗಿ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣ ಪ್ರಯೋಗಾಲಯದ ಅಕ್ಕ ಪಕ್ಕದ ಮೂರು ಕೊಠಡಿಯ 36 ಅಭ್ಯರ್ಥಿಗಳನ್ನು ಅದೇ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ 3 ಕೊಠಡಿಗಳಿಗೆ ಸ್ಥಳಾಂತರಿಸಲಾಗಿದೆ. ಈ ಸಂದರ್ಭ ಉಂಟಾದ ಗೊಂದಲ-ಆತಂಕದಿಂದ ವ್ಯತ್ಯಯಗೊಂಡ ಸಮಯಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಸಮಯ ನೀಡಿ ಪರೀಕ್ಷೆ ಸುಸೂತ್ರವಾಗಿ ಬರೆಯಲು ಅವಕಾಶ ಮಾಡಿ ಕೊಡಲಾಗಿದೆ. ಪರೀಕ್ಷಾರ್ಥಿಗಳಿಗೆ ಯಾವುದೇ ತೊಂದರೆಯಾಗಲೀ, ಸಮಸ್ಯೆಗಳಾಗಲೀ ಉಂಟಾಗಿಲ್ಲ ಎಂದು ಸಚಿವರು ತಿಳಿಸಿದರು.

ಕೋವಿಡ್ ಪಾಸಿಟಿವ್ ಆಗಿದ್ದ ವಿದ್ಯಾರ್ಥಿಗಳನ್ನು ಆದ್ಯತೆ ಮೇಲೆ ಗುರುತಿಸಲಾಗಿದ್ದು ವಿಶೇಷ ಕಣ್ಗಾವಲಿನಲ್ಲಿ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಲಾಗಿದೆ. ಮಂಗಳೂರಿನಲ್ಲಿ ಅತಿ ಹೆಚ್ಚು ಅಂದರೆ 16 ಮಂದಿ ವಿದ್ಯಾರ್ಥಿಗಳು,  ಚಿತ್ರದುರ್ಗ, ಚಿಕ್ಕಮಗಳೂರು ತಲಾ 7 ಮಂದಿ ಸಹಿತ 15 ಜಿಲ್ಲೆಗಳಲ್ಲಿ ಕೋವಿಡ್ ಸೋಂಕಿತರಾಗಿದ್ದ ಒಟ್ಟು 58 ಮ ಮಂದಿ ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿ ನಿರ್ಮಿಸಲಾಗಿದ್ದ ಕೋವಿಡ್ ನಿಗಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಆಯಾ ಜಿಲ್ಲಾಡಳಿತಗಳ ನೆರವಿನಿಂದ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿದ್ದರು ಎಂದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪರೀಕ್ಷೆಗೆ ಬಂದವರಲ್ಲಿ 111 ಮಂದಿಯಲ್ಲಿ ಕೆಮ್ಮು, ಜ್ವರ, ನೆಗಡಿಯಂತಹ ಅನಾರೋಗ್ಯ ಕಂಡು ಬಂದಿದ್ದರಿಂದ ಅವರಿಗೆ ಆಯಾ ಪರೀಕ್ಷಾ ಕೇಂದ್ರದಲ್ಲೇ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಲಾಗಿದೆ. ಅದೇ ರೀತಿ, ಕೋವಿಡ್ ಲಾಕ್‍ಡೌನ್ ಅವಧಿಯಲ್ಲಿ ತಮ್ಮ ಊರುಗಳಿಗೆ ತೆರಳಿದ್ದ ಮಕ್ಕಳಿಗೆ ತಮ್ಮ ಊರಿನ ಸಮೀಪದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗೆ ಅವಕಾಶ ನೀಡಲಾಗಿತ್ತು. 10,693 ಮಕ್ಕಳು ಇದರ ಉಪಯೋಗ ಪಡೆದಿದ್ದಾರೆ ಎಂದು ಸಚಿವ ಸುರೇಶ್ ಕುಮಾರ್ ವಿವರಿಸಿದರು.


  • Blogger Comments
  • Facebook Comments

0 comments:

Post a Comment

Item Reviewed: ಕೋವಿಡ್ ಆತಂಕದ ನಡುವೆ ಸುಸೂತ್ರವಾಗಿ ಮೊದಲ ದಿನ ಪೂರೈಸಿದ ಎಸ್ಸೆಸ್ಸೆಲ್ಸಿ ಪರೀಕ್ಷೆ : ನಿರೀಕ್ಷೆಗೂ ಮೀರಿ ನಿರ್ಭೀತಿಯಿಂದ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು, ಶೇ 99.67 ಮಂದಿ ವಿದ್ಯಾರ್ಥಿಗಳು ಹಾಜರ್ Rating: 5 Reviewed By: karavali Times
Scroll to Top