ಬಂಟ್ವಾಳ, ಫೆಬ್ರವರಿ 25, 2022 (ಕರಾವಳಿ ಟೈಮ್ಸ್) : ತಾಲೂಕಿನ ನರಿಕೊಂಬು ಗ್ರಾಮದ ಏಲಬೆಯಲ್ಲಿ ಶುಕ್ರವಾರ ಕಪ್ಪು ಕಲ್ಲಿನ ಕೋರೆಯ ಗುಂಡಿಯಲ್ಲಿದ್ದ ನೀರಿಗೆ ಬಿದ್ದು ಸ್ಥಳೀಯ ನಾಯಿಲ ನಿವಾಸಿಗಳಾದ ಜಗದೀಶ (38) ಹಾಗೂ ಬಾಲಕ ನಿಧೀಶ್ (16) ಅವರು ದಾರುಣ ಸಾವನ್ನಪ್ಪಿದ್ದಾರೆ.
ಕಲ್ಲಿನ ಕೋರೆ ಗುಂಡಿಯಲ್ಲಿರುವ ನೀರಿನಲ್ಲಿ ಇವರಿಬ್ಬರು ಸ್ನಾನಕ್ಕೆಂದು ತೆರಳಿದ್ದರು ಎನ್ನಲಾಗಿದ್ದು, ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಅವಘಡ ಸಂಭವಿಸಿದ ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿದ್ದು, ಅಕ್ರಮ ಕೋರೆ ಕಾರ್ಯಾಚರಣೆ ನಡೆಸಿ ಗುಂಡಿ ಮುಚ್ಚದೆ ಇರುವ ಪರಿಣಾಮದಿಂದಾಗಿ ಇದೀಗ ದುರಂತ ಘಟನೆ ಸಂಭವಿಸಿದ್ದು, ಅಧಿಕಾರಿಗಳೇ ನೇರ ಹೊಣೆ ಎಂದು ಆರೋಪಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
0 comments:
Post a Comment